“ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಬೇರೆ ರಾಜ್ಯ, ಪುದುಚೇರಿ ಬೇರೆ ಕೇಂದ್ರಾಡಳಿತ ಪ್ರದೇಶವಾಗಿದೆ. ಆದರೆ ನಮಗೆ ಎರಡೂ ಸಹ ಒಂದೇ” ಎಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಪುದುಚೇರಿಯಲ್ಲಿ ಹೇಳಿದರು.
ಪುದುಚೇರಿಯ ಉಪ್ಪಳಂ ಎಕ್ಸ್ಪೋ ಮೈದಾನದಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಬೃಹತ್ ಸಮಾವೇಶ ಮಂಗಳವಾರ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ವಿಜಯ್ ಪುದುಚೇರಿ ಸರ್ಕಾರದ ಕಾರ್ಯ ವೈಖರಿ ಶ್ಲಾಘಿಸಿದರು. ಕೇಂದ್ರದ ಎನ್ಡಿಎ ಸರ್ಕಾರ ಮತ್ತು ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದರು.
“ಡಿಎಂಕೆಯನ್ನು ನಂಬಬೇಡಿ ಅವರ ಕೆಲಸ ಕೇವಲ ಜನರನ್ನು ವಂಚಿಸುವುದು. ನಮಗೆ ತಮಿಳುನಾಡು ಮತ್ತು ಪುದುಚೇರಿ ಒಂದೇ. ನಾವು ಸಹ ನಿಮ್ಮವರು ನಮ್ಮನ್ನು ತಿರಸ್ಕರಿಸಬೇಡಿ” ಎಂದು ಕರೆ ನೀಡಿದರು.
ವಿಜಯ್ ಸಮಾವೇಶದಲ್ಲಿ ಹೇಳಿದ್ದೇನು?
- ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಮತ್ತು ನನಗೆ ತಮಿಳುನಾಡು ಮತ್ತು ಪುದುಚೇರಿ ಒಂದೇ. ನಮ್ಮನ್ನು ಪ್ರತ್ಯೇಕ ಮಾಡಿರುವುದು ಕೇಂದ್ರ ಸರ್ಕಾರ. ಆದರೆ ನಮಗೆ ಎರಡೂ ಒಂದೇ.
- ನಾವು ಆಡಳಿತಾತ್ಮಕವಾಗಿ ಎರಡು ಭಾಗವಾಗಿರಬಹುದು. ಆದರೆ ನೀವೆಲ್ಲರೂ ನಮ್ಮವರೇ. ಕೇಂದ್ರ ಸರ್ಕಾರಕ್ಕೆ ಮಾತ್ರ ತಮಿಳುನಾಡು ಬೇರೆ ರಾಜ್ಯ, ಪುದುಚೇರಿ ಬೇರೆಯ ಕೇಂದ್ರಾಡಳಿತ ಪ್ರದೇಶವಾಗಿದೆ.
- 1974ಕ್ಕೂ ಮೊದಲು ತಮಿಳುನಾಡು ಪುದುಚೇರಿ ಒಂದೇ ಆಗಿತ್ತು. ಪ್ರಪಂಚದಲ್ಲಿ ನಾವು ಎಲ್ಲೇ ವಾಸಿಸುತ್ತಿದ್ದರೂ ಸಹ ನಾವೆಲ್ಲರೂ ಸಹ ಒಂದೇ ಎಂದು ವಿಜಯ್ ಹೇಳಿದರು.
- ವಿಜಯ್ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಎನ್. ರಂಗಸಾಮಿ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಉತ್ತಮ ಕೆಲಸವನ್ನು ಮಾಡುತ್ತಿದೆ. ಬೇರೆ ಪಕ್ಷದ ರಾಜಕೀಯ ಕಾರ್ಯಕ್ರಮಕ್ಕೆ ಎಷ್ಟು ಭದ್ರತೆ ನೀಡಿದ್ದಾರೆ ನೋಡಿ ಎಂದರು.
- ಪುದುಚೇರಿ ರಾಜ್ಯದ ಸರ್ಕಾರ ಮತ್ತು ಮುಖ್ಯಮಂತ್ರಿ ಎನ್. ರಂಗಸಾಮಿ ಅವರಿಂದ ತಮಿಳುನಾಡು ಸರ್ಕಾರ ಕಲಿಯುವುದು ತುಂಬಾ ಇದೆ. ಆದರೆ ಅವರು ಅದನ್ನು ಕಲಿಯುವುದಿಲ್ಲ.
- ಪುದುಚೇರಿಯನ್ನು ಪ್ರತ್ಯೇಕ ರಾಜ್ಯವಾಗಿ ಮಾಡುವ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಈಡೇರಿಸುತ್ತಿಲ್ಲ ಎಂದು ಎನ್ಡಿಎ ಸರ್ಕಾರವನ್ನು ಟೀಕಿಸಿದರು.
- ಪುದುಚೇರಿಗೆ ಐಟಿ ಕಂಪನಿಗಳನ್ನು ಬರುವಂತೆ ಮಾಡಬೇಕು. ಇಲ್ಲಿ ಪ್ರವಾಸೋದ್ಯಮ ಉತ್ತಮವಾಗಿದೆ. ಆದರೆ ಪ್ರವಾಸಿ ತಾಣಗಳಲ್ಲಿ ಸರಿಯಾದ ಮೂಲ ಸೌಕರ್ಯಗಳಿಲ್ಲ. ಇಂತಹ ಪ್ರವಾಸಿ ತಾಣದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ.
- ಪುದುಚೇರಿಯ ಮೀನುಗಾರರನ್ನು ಶ್ರೀಲಂಕಾದ ಸೇನೆ ಆಗಾಗ ಹಿಡಿದು ದೌರ್ಜನ್ಯ ನಡೆಸುತ್ತದೆ. ಮಾತುಕತೆಗಳ ಬಳಿಕ ಬಿಡುಗಡೆ ಮಾಡುತ್ತದೆ. ಆದರೆ ಅವರ ಬೋಟ್ಗಳನ್ನು ವಾಪಸ್ ನೀಡುತ್ತಿಲ್ಲ.
- ಮುಂಬರುವ ಚುನಾವಣೆಯಲ್ಲಿ ಇಲ್ಲಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಧ್ವಜ ಬಹಳ ಎತ್ತರಕ್ಕೆ ಏರಲಿದೆ ಎಂದು ವಿಜಯ್ ಭರವಸೆ ವ್ಯಕ್ತಪಡಿಸಿದರು.
ಟಿವಿಕೆ ಪಕ್ಷದ ಸಮಾವೇಶ ಮತ್ತು ವಿಜಯ್ ಭಾಷಣದ ಕುರಿತು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸಾಮಿ ಪ್ರತಿಕ್ರಿಯೆ ನೀಡಿದ್ದು, “ಸಮಾವೇಶಕ್ಕೆ ನಮ್ಮ ಭದ್ರತಾ ವ್ಯವಸ್ಥೆ ಮತ್ತು ಆಡಳಿತ ಕುರಿತು ಟಿವಿಕೆ ಪಕ್ಷದ ವಿಜಯ್ ಮೆಚ್ಚುಗೆ ಸೂಚಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದಗಳು” ಎಂದು ಹೇಳಿದರು.
ಚೆನ್ನೈನಲ್ಲಿ ಮಾತನಾಡಿದ ಡಿಎಂಕೆ ನಾಯಕ ಟಿಕೆಎಸ್ ಎಳಂಗವೋನ್, “ಟಿವಿಕೆ ಪಕ್ಷ ಮತ್ತು ವಿಜಯ್ಗೆ ನಾಚಿಕೆ ಇಲ್ಲ. ಅವರ ಸಮಾವೇಶದ ಸಂದರ್ಭದಲ್ಲಿ ಇಲ್ಲಿ ಏನಾಯಿತು? ಎಂಬುದು ಎಲ್ಲರಿಗೂ ತಿಳಿದಿದೆ. ಸಾವಿರಾರು ಜನರು ಕುಡಿಯುವ ನೀರು ಇಲ್ಲದೇ ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ್ದು ವಿಜಯ್. ಸಮಾವೇಶಕ್ಕೆ 7 ಗಂಟೆ ತಡವಾಗಿ ಬಂದಿದ್ದು ಏಕೆ? ಎಂಬುದಕ್ಕೆ ವಿಜಯ್ ಇಂದಿಗೂ ಸಹ ಉತ್ತರ ನೀಡಿಲ್ಲ” ಎಂದು ಆರೋಪಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


