ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನವೆಂಬರ್ 26 ರಿಂದ ಚಂಡಮಾರುತ ಇನ್ನಷ್ಟು ತೀವ್ರವಾಗಲಿದ್ದು, ನ.27ರ ತನಕ ವಿವಿಧ ರಾಜ್ಯಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಮಲೇಷ್ಯಾ ಬಳಿ ವಾಯುಭಾಗ ಕುಸಿತ ಉಂಟಾಗಿದ್ದು, ಇದು ಮುಂದಿನ 48 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ದಕ್ಷಿಣದಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದಕ್ಕೆ ಸದ್ಯ ‘ಸೆನ್ಯಾರ್’ ಎಂದು ನಾಮಕರಣ ಮಾಡಲಾಗಿದೆ.
ಈ ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಕೇರಳ, ಲಕ್ಷದ್ವೀಪ, ಆಂಧ್ರ ಪ್ರದೇಶ ಮತ್ತು ಅಂಡಮಾನ್ ದ್ವೀಪಗಳಲ್ಲಿ ಮಳೆಯ ನಿರೀಕ್ಷೆ ಮಾಡಲಾಗಿದೆ. ತಮಿಳುನಾಡು ರಾಜ್ಯದಲ್ಲಿ ನವೆಂಬರ್ 27ರ ತನಕ ಮಳೆಯ ಅಲರ್ಟ್ ನೀಡಲಾಗಿದೆ.
ಕರ್ನಾಟಕದಲ್ಲಿ ಮಳೆ: ‘ಸೆನ್ಯಾರ್’ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ ಸದ್ಯಕ್ಕೆ ನೀಡಲಾಗಿಲ್ಲ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದೆ.
ಮುಂಜಾನೆ ಚಳಿ ಹಾಗೂ ಅಲ್ಲಲ್ಲಿ ಮಂಜಿನ ವಾತಾವರಣ ಇರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕ ಭಾಗಕ್ಕೆ ಯಾವುದೇ ಅಲರ್ಟ್ ನೀಡಲಾಗಿಲ್ಲ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಅಂಡಮಾನ್ ಪ್ರದೇಶದಲ್ಲಿ ‘ಸೆನ್ಯಾರ್’ ಪ್ರಬಲ ಚಂಡಮಾರುತವಾಗಿ ಪರಿವರ್ತನೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಅಂಡಮಾನ್, ಮಲಕ್ಕಾ ಜಲಸಂಧಿ ಪ್ರದೇಶದಲ್ಲಿ ಹೆಚ್ಚಿನ ಚಟುವಟಿಕೆ ಸಾಧ್ಯತೆ ಇದೆ. ಗಾಳಿಯ ವೇಗವೂ ಅಧಿಕವಾಗಿರಲಿದೆ.
‘ಸೆನ್ಯಾರ್’ ಎಂದರೆ ಸಿಂಹ ಎಂಬ ಅರ್ಥವನ್ನು ಹೊಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಉತ್ತರ ಹಿಂದೂ ಮಹಾಸಾಗರದಲ್ಲಿ ಬಳಕೆ ಮಾಡುವ ಹೆಸರುಗಳ ಆಧಾರದ ಮೇಲೆ ಚಂಡಮಾರುತಕ್ಕೆ ಈ ಹೆಸರನ್ನು ಇಟ್ಟಿದೆ.
ತಮಿಳುನಾಡು ರಾಜ್ಯದ ವಿವಿಧ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಸೋಮವಾರ ಮಧ್ಯಾಹ್ನವೇ ಭಾರೀ ಮಳೆಯ ಕಾರಣ ರಜೆ ನೀಡಲಾಗಿತ್ತು. ನವೆಂಬರ್ 25 ರಿಂದ 27ರ ತನಕ ಭಾರೀ ಮಳೆ ನಿರೀಕ್ಷೆ ಮಾಡಲಾಗಿದೆ. ಬಳಿಕ ಚಂಡಮಾರುತ ಶ್ರೀಲಂಕಾ ಕಡೆ ಚಲಿಸಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಕೇರಳದಲ್ಲಿ ನವೆಂಬರ್ 28 ರಿಂದ 30, ಲಕ್ಷದ್ವೀಪದಲ್ಲಿ ನವೆಂಬರ್ 27ರ ತನಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆಂಧ್ರ ಪ್ರದೇಶ ಕರಾವಳಿಯಲ್ಲಿ ನವೆಂಬರ್ 29, 30ರಂದು ಮಳೆ ನಿರೀಕ್ಷೆ ಮಾಡಲಾಗಿದೆ.
‘ಸೆನ್ಯಾರ್’ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ ನೀಡಿಲ್ಲ. ಆದರೆ ನವೆಂಬರ್ 27ರ ಬಳಿಕ ಚಂಡಮಾರುತ ಯಾವ ದಿಕ್ಕಿಗೆ ಸಾಗಲಿದೆ? ಎಂಬುದರ ಮೇಲೆ ರಾಜ್ಯದ ಹವಾಮಾನ ನಿರ್ಧರಿತವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಒಣಹವೆ ಇದ್ದು, ಮುಂಜಾನೆ ಚಳಿಯ ವಾತಾವರಣವಿದೆ.
ಪೂರ್ವ ಮುಂಗಾರು, ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು ಕರ್ನಾಟಕ ರಾಜ್ಯಕ್ಕೆ ಈಗ ಮಳೆಯ ಅಗತ್ಯವಿಲ್ಲ. ಚಂಡಮಾರುತದ ಪರಿಣಾಮ ಮತ್ತೆ ಮಳೆಯಾದರೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಲಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಅಡಿಕೆ ಕೊಯ್ಲು ನಡೆಯುತ್ತಿದ್ದು, ಮಳೆ ಬಂದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಆಂಧ್ರ ಪ್ರದೇಶ, ತಮಿಳುನಾಡು, ಲಕ್ಷದ್ವೀಪದಲ್ಲಿ ಕರಾವಳಿ ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಚಂಡಮಾರುತ ಪ್ರಬಲವಾದರೆ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


