ಲಾಹೋರ್: ಇಲ್ಲಿನ ಗಡ್ಡಾಫಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಫೆಬ್ರವರಿ 28) ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಲೀಗ್ ಹಂತದ ಹತ್ತನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟುಮಾಡಿದ ಕಾರಣ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭಿಕ ಆಘಾತ ಅನುಭವಿಸಿದರೂ ಸಹ ಸೆದಿಕ್ಉಲ್ಲಾ ಅಟಲ್ ಹಾಗೂ ಅಜ್ಮತುಲ್ಲಾ ಓಮರ್ಜೈ ಜವಾಬ್ದಾರಿಯುತ ಆಟದ ನೆರವಿನಿಂದ 50 ಓವರ್ಗಳಲ್ಲಿ 273 ರನ್ ಕಲೆಹಾಕಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾಗೆ ಗೆಲ್ಲಲು 274 ರನ್ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನಟ್ಟಲು ಆರಂಭಿಸಿ ಶುರುವಿನಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 12.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 109 ರನ್ ದಾಖಲಿಸಿತ್ತು. ಈ ಸಮಯಕ್ಕೆ ಶುರುವಾದ ಮಳೆ ಎಲ್ಲಿಯೂ ಬಿಡುವು ಕೊಡಲಿಲ್ಲ. ಹೀಗಾಗಿ ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.
ಹೀಗೆ ಈ ಟೂರ್ನಿಯಲ್ಲಿ ಮಳೆಯಿಂದ ರದ್ದಾದ ಎರಡನೇ ಪಂದ್ಯ ಇದಾಗಿದ್ದು, ಮಳೆ ಬಂದಾಗ ನೀರು ಇಂಗುವ ಸರಿಯಾದ ತಂತ್ರಜ್ಞಾನವಿಲ್ಲದ ಕಾರಣಕ್ಕಾಗಿ ಪಾಕ್ ಕ್ರಿಕೆಟ್ ಬೋರ್ಡ್ ಟೀಕೆಗೊಳಗಾಗಿದೆ. ಇನ್ನು ನಿನ್ನೆಯ ಪಂದ್ಯದಲ್ಲಿ ಸುರಿದ ಮಳೆಗೆ ಗಡ್ಡಾಫಿ ಮೈದಾನದಲ್ಲಿ ನೀರು ನಿಲುಗಡೆಯಾಗಿತ್ತು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿ ಮಳೆ ಬಂದರೆ ಸ್ವಯಂಚಲಿತವಾಗಿ ಇಂಗಿಹೋಗಲಿದೆ. ಇನ್ನೂ ಕೆಲ ಸ್ಟೇಡಿಯಂಗಳಲ್ಲಿ ನಿಂತ ನೀರನ್ನು ಇಂಗಿಸಲು ಯಂತ್ರೋಪಕರಣಗಳಿವೆ. ಆದರೆ ನಿನ್ನೆ ಮೈದಾನದಲ್ಲಿದ್ದ ನೀರನ್ನು ತೆರವುಗೊಳಿಸಲು ಮನೆಗಳಲ್ಲಿ ಬಳಸುವ ಮೋಪ್ ಹಾಗೂ ನೀರನ್ನು ಇಂಗಿಸಲು ಸ್ಪಾಂಜ್ ಬಳಸಿದ್ದಾರೆ. ಅಲ್ಲದೇ ಸಿಬ್ಬಂದಿಯೊಬ್ಬರು ಮೋಪ್ ಬಳಸಿ ನೀರು ತೆರವುಗೊಳಿಸುವಾಗ ಜಾರಿ ಬಿದ್ದ ಘಟನೆ ಕೂಡ ನಡೆದಿದೆ. ಈ ವಿಡಿಯೊ ಹಾಗೂ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕ್ ಕರ್ಮಕಾಂಡ ಕಂಡು ಇಡೀ ಕ್ರಿಕೆಟ್ ಜಗತ್ತು ನಕ್ಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


