ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿರುವ ಸಂಬಂಧ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ನೋಟಿಸ್ಗೆ ಶಾಸಕ ಯತ್ನಾಳ್ ಉತ್ತರ ಕೊಡುತ್ತಾರೆ. ಆನಂತರ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡ್ತಾರಾ ಅಥವಾ ಅವರಿಗೆ ಉನ್ನತ ಸ್ಥಾನ ಕೊಡ್ತಾರಾ ಎಂದು ನೀವೆಲ್ಲಾ ಕಾದುನೋಡಿ ಎಂದರು.
ಇನ್ನು ವಕ್ಫ್ ಹೋರಾಟಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಪಕ್ಷಕ್ಕೆ, ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದನ್ನು ಮೀರಿ ರಾಜ್ಯದ ಜನಪರವಾದ ನ್ಯಾಯುಯುತ ಹೋರಾಟ ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದರು. ಇನ್ನು ವಕ್ಫ್ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಇದರ ಪೂರ್ಣ ಸಮೀಕ್ಷೆಗಾಗಿ ಕೇಂದ್ರವು ಜಂಟಿ ಸಂಸದೀಯ ಸಮಿತಿ ರಚನೆ ಮಾಡಿದೆ. ಈ ಸಮಿತಿಗೆ ಅಂತಿಮ ವರದಿ ಸಲ್ಲಿಸಲು ಈ ಬಜೆಟ್ ಅಧಿವೇಶನದವರೆಗೂ ಕಾಲಾವಕಾಶ ನೀಡಲಾಗಿದೆ.
ವಕ್ಫ್ ವಿಚಾರವಾಗಿ ಈ ರೀತಿ ಮಾಡಬೇಡಿ ಎನ್ನುವ ಆಧಾರದಲ್ಲಿ ನೋಟಿಸ್ ನೀಡಿದ್ರೆ, ಅದು ನಮ್ಮ ತಂಡಕ್ಕೆ ನೋಟಿಸ್ ನೀಡಿದ ಹಾಗೆ. ನಾವು ಪಕ್ಷದ ನಿರ್ದೇಶನದಂತೆ ನೋಟಿಸ್ಗೆ ಪ್ರತಿಕ್ರಿಯೆ ನೀಡುತ್ತೇವೆ. ಆದರೆ ಇದು ಯತ್ನಾಳ್ಗೆ ನೀಡಿರುವ ನೋಟಿಸ್ ಅಷ್ಟೆ. ನಮ್ಮ ತಂಡಕ್ಕಲ್ಲ ಎಂದು ಹೇಳಿದರು.
ಈಗ ಯತ್ನಾಳ್ ತಂಡದ ಹೋರಾಟಕ್ಕೆ ರಾಜ್ಯಾದ್ಯಂತ ಜನ ಬೆಂಬಲವಿದೆ. ಯಾಕೆಂದರೆ ನ್ಯಾಯಯುತವಾಗಿ, ರೈತ ಪರವಾಗಿ, ಜನರ ಜಮೀನು ಉಳಿಸುವುದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಇದು ವಿರೋಧಿ ಬಣಗಳಿಗೆ ಸಹಿಸಲು ಆಗುತ್ತಿಲ್ಲ ಎಂದು ವಿಜಯೇಂದ್ರ ಬಣಕ್ಕೆ ತಿರುಗೇಟು ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


