ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿಯನ್ನು ವಿಶ್ವದ ವಿವಿಧ ರಾಷ್ಟ್ರಗಳು ಕುತೂಹಲದಿಂದ ನೋಡುತ್ತಿವೆ. ಡಿಸೆಂಬರ್ 4 ಮತ್ತು 5ರಂದು ವ್ಲಾದಿಮಿರ್ ಪುಟಿನ್ ದೆಹಲಿಯಲ್ಲಿ ಇರಲಿದ್ದು, ಅವರ ಭದ್ರತೆಯನ್ನು ನೋಡಿಕೊಳ್ಳುವ ವಿಶೇಷ ಭದ್ರತಾ ಪಡೆಯ 50 ಕಮಾಂಡೋಗಳು ದೆಹಲಿಗೆ ಆಗಮಿಸಿದ್ದಾರೆ.
ವ್ಲಾದಿಮಿರ್ ಪುಟಿನ್ ಭಾರತ ಭೇಟಿ ಹಿನ್ನಲೆಯಲ್ಲಿ ದೆಹಲಿಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ವಿವಿಧ ರಕ್ಷಣಾ ಪಡೆಗಳು 24 ಗಂಟೆಗಳ ಕಣ್ಗಾವಲು ವಹಿಸಿವೆ. ಅದರಲ್ಲೂ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಐ-20 ಕಾರು ಸ್ಫೋಟ ಪ್ರಕರಣದ ಬಳಿಕ ದೆಹಲಿಯಲ್ಲಿ ಭದ್ರತೆ ಇನ್ನಷ್ಟು ಹೆಚ್ಚಿಸಲಾಗಿದೆ.
ದೆಹಲಿ ಪೊಲೀಸರ ಜೊತೆ ವಿವಿಧ ಭದ್ರತಾ ಏಜೆನ್ಸಿಗಳು ವ್ಲಾದಿಮಿರ್ ಪುಟಿನ್ ಭೇಟಿಯ ವೇಳೆ ದೆಹಲಿಯ ಭದ್ರತೆಯನ್ನು ನೋಡಿಕೊಳ್ಳಲಿವೆ. ಡ್ರೋನ್, ಸಿಸಿಟಿವಿ ಕಣ್ಗಾವಲು ಸಹಿತ ವಹಿಸಲಾಗಿದೆ. ದೆಹಲಿಯ ಹಲವು ಮಾರ್ಗದಲ್ಲಿ ಸಂಚಾರ ನಿರ್ಬಂಧವನ್ನು ಹೇರಲಾಗುತ್ತಿದ್ದು, ಈ ಕುರಿತು ಜನರಿಗೆ ಸಹ ಮಾಹಿತಿ ನೀಡಲಾಗುತ್ತದೆ.
ಪುಟಿನ್ ಭದ್ರತಾ ಪಡೆ ದೆಹಲಿಗೆ: ವಿಶ್ವಮಟ್ಟದಲ್ಲಿ ಅತಿ ಹೆಚ್ಚು ಭದ್ರತೆ ಹೊಂದಿರುವ ನಾಯಕರಲ್ಲಿ ವ್ಲಾದಿಮಿರ್ ಪುಟಿನ್ ಸಹ ಒಬ್ಬರು. ವ್ಲಾದಿಮಿರ್ ಪುಟಿನ್ ಭದ್ರತೆಯನ್ನು ವಿಶೇಷ ಭದ್ರತಾ ಪಡೆ ನೋಡಿಕೊಳ್ಳುತ್ತದೆ. ದೆಹಲಿಗೆ ಈಗಾಗಲೇ 50ಕ್ಕೂ ಅಧಿಕ ಪುಟಿನ್ ಭದ್ರತಾ ಪಡೆಯ ಕಮಾಂಡೋಗಳು ಆಗಮಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ, ಪುಟಿನ್ ವಾಸ್ತವ್ಯ ಮಾಡುವ ಹೋಟೆಲ್, ಸಾಗುವ ಮಾರ್ಗದಲ್ಲಿ ಭದ್ರತೆಯನ್ನು ಪರಿಶೀಲನೆ ಮಾಡಿದ್ದಾರೆ.
ದೆಹಲಿ ಪೊಲೀಸರ ಉನ್ನತ ಮಟ್ಟದ ಅಧಿಕಾರಿಗಳ ತಂಡ ಒಂದು ಹಂತದ ಭದ್ರತೆಯನ್ನು ನೋಡಿಕೊಳ್ಳಲಿವೆ. 2ನೇ ಹಂತದಲ್ಲಿ ಕೇಂದ್ರದ ಭದ್ರತಾ ಪಡೆಗಳು ವ್ಲಾದಿಮಿರ್ ಪುಟಿನ್ಗೆ ಭದ್ರತೆಯನ್ನು ನೀಡಲಿವೆ. 3ನೇ ಹಂತದಲ್ಲಿ ವ್ಲಾದಿಮಿರ್ ಪುಟಿನ್ ಭದ್ರತಾ ಪಡೆಗಳು ಅವರ ರಕ್ಷಣೆ ಮಾಡಲಿವೆ.
ರಸ್ತೆಯಲ್ಲಿ ಸಂಚಾರ ನಿರ್ಬಂಧ, ಜನರ ಒಡಾಟಕ್ಕೆ ನಿರ್ಬಂಧ, ಸಂಚಾರ ಮಾರ್ಗ ಬದಲು ಸೇರಿದಂತೆ ವ್ಲಾದಿಮಿರ್ ಪುಟಿನ್ ಆಗಮನದಿಂದ ನಿರ್ಗಮನದ ತನಕ ಭದ್ರತೆ ಮತ್ತು ಶಿಷ್ಟಾಚಾರ ಪಾಲನೆಗಾಗಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಎರಡು ದಿನದ ಭಾರತ ಭೇಟಿ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೆಹಲಿ ಬಿಟ್ಟು ಬೇರೆ ಯಾವುದೇ ನಗರಕ್ಕೆ ಭೇಟಿ ನೀಡುವುದಿಲ್ಲ. ದೆಹಲಿಯಲ್ಲಿ ವಿವಿಧ ಸಭೆಗಳನ್ನು ಅವರು ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ. ಬಳಿಕ ರಾಷ್ಟ್ರಪತಿ ಭವನದಲ್ಲಿ ಆಯೋಜನೆ ಮಾಡಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಷ್ಯಾ ಅಧ್ಯಕ್ಷರು ಎರಡು ದಿನ ದೆಹಲಿಯಲ್ಲಿಯೇ ಇರುವ ಕಾರಣ ನಗರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈಗಾಗಲೇ ಸಂಸತ್ ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಈಗ ಪುಟಿನ್ ಭೇಟಿಗಾಗಿ ಭದ್ರತೆಗಾಗಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.
ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ಕಚೇರಿಯ ವಕ್ತಾರ ಡಿಮಿಟ್ರಿ ಪಸ್ಕೋವ್ ಭಾರತದ ಪತ್ರಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದರು. ಉಕ್ರೇನ್ನಲ್ಲಿ ಅಮೆರಿಕದ ಶಾಂತಿ ಯೋಜನೆ ಸ್ಥಾಪನೆ, ರಷ್ಯಾ ಕಚ್ಚಾ ತೈಲದ ಮೇಲೆ ಅಮೆರಿಕ ನಿರ್ಬಂಧ, ಭಾರತಕ್ಕೆ ರಷ್ಯಾ ರಕ್ಷಣಾ ಮತ್ತು ತಂತ್ರಜ್ಞಾನ ಪೂರೈಕೆ ಸೇರಿದಂತೆ ಹಲವು ವಿಚಾರದ ಕುರಿತು ಅವರು ಮಾತನಾಡಿದ್ದಾರೆ.
ಬೃಹತ್ ವ್ಯಾಪಾರದ ವಿಚಾರದಲ್ಲಿ ಭಾರತದ ಕಳವಳದ ಕುರಿತು ರಷ್ಯಾಗೆ ಮಾಹಿತಿ ಇದೆ. ಈ ಸಮಸ್ಯೆಯನ್ನು ಪರಿಹಾರ ಮಾಡಲು ಭಾರತದ ಜೊತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಡಿಮಿಟ್ರಿ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


