ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟದ ನೆರವಿನಿಂದ 4 ವಿಕೆಟ್ಗಳ ಗೆಲುವನ್ನು ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 264 ರನ್ ಕಲೆಹಾಕಿ ಆಲ್ಔಟ್ ಆಗಿ ಭಾರತಕ್ಕೆ 265 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 48.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿದೆ.
ಇನ್ನು ಪಂದ್ಯದಲ್ಲಿ ಕೊಹ್ಲಿ ಜವಾಬ್ದಾರಿಯುತ ಆಟವಾಡಿದ್ದು, ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ತಂಡ ಆರಂಭಿಕ ಆಘಾತ ಅನುಭವಿಸಿದಾಗ ಐದನೇ ಓವರ್ನಲ್ಲಿ ಕಣಕ್ಕಿಳಿದ ಕೊಹ್ಲಿ 42ನೇ ಓವರ್ವರೆಗೂ ಬ್ಯಾಟ್ ಬೀಸಿದರು. ಒಂದೆಡೆ ಉಳಿದ ಆಟಗಾರರು ತಮ್ಮ ಕಾಣಿಕೆ ನೀಡಿ ನಿರ್ಗಮಿಸುತ್ತಿದ್ದರೆ ಮತ್ತೊಂದೆಡೆ ಕೊಹ್ಲಿ ಎಲ್ಲರ ಜೊತೆ ಜತೆಯಾಟವನ್ನಾಡಿ ತಂಡವನ್ನು ಗೆಲುವಿನ ದಡಕ್ಕೆ ತಂದಿಟ್ಟರು.
ಹೀಗೆ ಇನ್ನಿಂಗ್ಸ್ ಕಟ್ಟಿದ್ದ ಕೊಹ್ಲಿ 84 ರನ್ ಗಳಿಸಿದ್ದಾಗ ಆಡಂ ಜಂಪಾ ಎಸೆದ 43ನೇ ಓವರ್ನ ನಾಲ್ಕನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆದರು. ಈ ಮೂಲಕ ಕೊಹ್ಲಿ ಶತಕ ವಂಚಿತರಾದರು.
ಇನ್ನು ವಿರಾಟ್ ಕೊಹ್ಲಿ ಶತಕ ಮಿಸ್ ಮಾಡಿಕೊಂಡಿದ್ದು ಹಾಗೂ ಕೊನೆಯವರೆಗೂ ಕಣದಲ್ಲಿ ಇರದೇ ಇದ್ದದ್ದು ಅಭಿಮಾನಿಗಳಲ್ಲಿ ತುಸು ಬೇಸರವನ್ನುಂಟುಮಾಡಿದ್ದು, ಕೆಎಲ್ ರಾಹುಲ್ ಸಹ ಬೇಸರ ಹೊರಹಾಕಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆಎಲ್ ರಾಹುಲ್ “ನಾನು ಆಡಲು ಬಂದ ಕೂಡಲೇ ವಿರಾಟ್ಗೆ ಕೊನೆಯವರೆಗೂ ಇರಬೇಕು. ಪ್ರತಿ ಓವರ್ನಲ್ಲೂ ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಸೆಟ್ ಆಗಿರುವ ಬ್ಯಾಟ್ಸ್ಮನ್ ಆದ ಕಾರಣ ತಂಡಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದಿದ್ದೆ. ಅದನ್ನು ಕೇಳದೇ ಕೊಹ್ಲಿ ರಿಸ್ಕ್ ತೆಗೆದುಕೊಂಡರು’ ಎಂದು ಕೆಎಲ್ ರಾಹುಲ್ ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


