ಸಪ್ತ ಸಾಗರದಾಚೆ ಎಲ್ಲೋ ಭಾಗ 2 ಬಿಡುಗಡೆ ಆದ ಮೇಲೆ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಲೇ ಇಲ್ಲ.ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಎಲ್ಲೋದ್ರು ಎಂಬ ಪ್ರಶ್ನೆ ಉಂಟಾಗುತ್ತಿದೆ.
‘ರಿಚರ್ಡ್ ಆಂಟೊನಿ’ ಘೋಷಣೆ ಮಾಡಿ ವರ್ಷಗಳೇ ಆಗಿವೆ. ಅದರ ಬಗ್ಗೆ ಅಪ್ಡೇಟ್ ಇಲ್ಲ. ಸಿನಿಮಾದ ಘೋಷಣೆ ಆಗಿ ನಾಲ್ಕು ವರ್ಷಗಳಾಗಿವೆ.ರಕ್ಷಿತ್ ಶೆಟ್ಟಿ ಎಲ್ಲಿ ಹೋದರು? ಏನು ಮಾಡ್ತಿದ್ದಾರೆ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರಕ್ಷಿತ್ ಶೆಟ್ಟಿ ಅವರು ಈಗ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿನ ಫ್ಲೋರಿಡಾದಲ್ಲಿ ನಡೆದ 8ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಕ್ಷಿತ್ ಶೆಟ್ಟಿ ಪಾಲ್ಗೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಕೂಡ ಪಾಲ್ಗೊಂಡಿದ್ದು ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಜೊತೆಯಾಗಿ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.
ಕನ್ನಡಕ್ಕೆ 3 ಸಾವಿರ ವರ್ಷಗಳ ಇತಿಹಾಸ ಇದೆ. ಕನ್ನಡವನ್ನ ನಾವು ಉಳಿಸುವ ಬಗ್ಗೆ ಮಾತಾಡೋದು ಬೇಡ. ಅದನ್ನ ನಾವು ಉಳಿಸಬೇಕಾಗಿಲ್ಲ. ಅದು ನಮ್ಮನ್ನ ಉಳಿಸಬೇಕು. ನಾವು ಎಲ್ಲೇ ಹೋದರೂ ಕನ್ನಡವನ್ನ ಪ್ರೀತಿಸೋಣ. ಅದನ್ನ ಬೆಳೆಸೋಕೆ ಏನು ಮಾಡ್ಬೇಕೋ ಮಾಡೋಣ ಎಂದಿದ್ದಾರೆ ರಕ್ಷಿತ್.
ನಾನು ಸಿನಿಮಾ ಕ್ಷೇತ್ರದಲ್ಲಿ ಸಿನಿಮಾಗಳ ಮೂಲಕ ಕನ್ನಡವನ್ನ ಉಳಿಸೋಕೆ ಏನು ಮಾಡಬೇಕೋ ಅದನ್ನ ನಾವು ಮತ್ತು ನಮ್ಮ ತಂಡ ಮಾಡ್ತಾ ಇದ್ದೇವೆ. ಕೆಲವು ಸಲ ನಮ್ಮ ಕೆಲಸ ನಿಧಾನ ಅನ್ನಿಸಬಹುದು. ಆದರೆ ಒಳ್ಳೇ ಕೆಲಸ, ದೊಡ್ಡ ಕೆಲಸ ಮಾಡೋವಾಗ ಟೈಮ್ ತಗೋಳುತ್ತೆ. ನಾನು ಲೇಟ್ ಆಗಿ ಬರಬಹುದು, ಆದರೆ ನಂತರ ಸಿನಿಮಾ ಮೂಲಕ ಬಂದಾಗ ಎಲ್ಲರೂ ಥಿಯೇಟರ್ಗೆ ಹೋಗೋ ತರ ಮಾಡ್ತೇನೆʼ ಎಂದು ಭರವಸೆ ನೀಡಿದ್ದಾರೆ ರಕ್ಷಿತ್.
ಅಮೆರಿಕದ ಫ್ಲೋರಿಡಾದ ಟಂಪಾ ನಗರದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ (NAVIKA 2025) ಅದ್ಧೂರಿಯಾಗಿ ನೆರವೇರಿದೆ. ಆ.29ರಿಂದ ಮೂರು ದಿನಗಳ ಕಾಲ ಸಂಗೀತ ರಸ ಸಂಜೆ, ಕವಿ ಗೋಷ್ಠಿ, ನಾಟಕ, ನೃತ್ಯ ಪ್ರದರ್ಶನ, ಜಾನಪದ ಕಲೆ, ನಾಟಕ, ಕಥೆ ಹೇಳುವುದು, ಕಿರು ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾರಾಲೋಕದ ಪ್ರಣಯರಾಜ ಶ್ರೀನಾಥ್, ರಮೇಶ್ ಅರವಿಂದ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ರಕ್ಷಿತ್ ಶೆಟ್ಟಿ, ವಿನಯ್ ರಾಜಕುಮಾರ್ ಅವರೊಂದಿಗೆ ಡಾ. ಸುಚೇತನ್ ಹಾಗೂ ಅವರ ತಂಡ ನಡೆಸಿ ಕೊಟ್ಟ ಮನರಂಜನೆಯ ಕಾರ್ಯಕ್ರಮ ಆಕರ್ಷಣೀಯವಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


