ಹೈದರಾಬಾದ್: ತೆಲಂಗಾಣದ ಚೆವೆಲ್ಲಾ ಬಳಿ ಹೈದರಾಬಾದ್ – ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 24 ಜನ ಸಾವನ್ನಪ್ಪಿದ್ದರು.
ಮೊನ್ನೆ ( ನವೆಂಬರ್ 3 ) ತೆಲಂಗಾಣ ಸರ್ಕಾರಿ ಬಸ್ ಪಕ್ಕದಲ್ಲಿ ಸಾಗುತ್ತಿದ್ದ ಲಾರಿ ಬಸ್ ಮೇಲೆ ಮಗುಚಿ ಬಿದ್ದ ಕಾರಣ ಈ ಅಪಘಾತ ನಡೆದಿತ್ತು. ಜಲ್ಲಿ ಕಲ್ಲು ತುಂಬಿ ಸಾಗುತ್ತಿದ್ದ ಲಾರಿ ಬಿದ್ದ ಪರಿಣಾಮ ಲಾರಿಯಲ್ಲಿದ್ದ ಜಲ್ಲಿಕಲ್ಲಿನ ರಾಶಿ ಬಸ್ ತುಂಬ ಹರಡಿತ್ತು. ಪರಿಣಾಮ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು ಹಾಗೂ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ನಂತರ ಸಾವಿಗೀಡಾದರು.
ಹೀಗೆ 24 ಮಂದಿಯ ಸಾವಿಗೆ ಕಾರಣವಾದ ಈ ಅಪಘಾತಕ್ಕೆ ಕಾರಣವೇನೆಂದು ಚರ್ಚೆಗಳು ಆರಂಭವಾದಾಗ ಮೊದಲಿಗೆ ಮುನ್ನೆಲೆಗೆ ಬಂದದ್ದೇ ಹಲವು ದಿನಗಳಿಂದ ಭಾರೀ ಟೀಕೆಗೆ ಒಳಗಾಗಿದ್ದ ರಸ್ತೆ. ರಸ್ತೆಯಲ್ಲಿ ಅಪಾಯಕಾರಿ ತಿರುವುಗಳಿದ್ದು, ತಿರುವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗದಷ್ಟು ಕಷ್ಟಕರವಾಗಿವೆ ಎಂದು ಹಲವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಎಲ್ಲರೂ ಸಾಮಾನ್ಯವಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರು. ಹೀಗೆ ತಮ್ಮ ವಿರುದ್ಧ ಟೀಕೆಗಳು ಆರಂಭವಾಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ತಮ್ಮ ಪಕ್ಷದ ಶಾಲು ಹಾಕಿಕೊಂಡು ಪತ್ರಿಕಾಗೋಷ್ಟಿ ನಡೆಸಿದರು. ರಸ್ತೆ ಅಪಘಾತದಲ್ಲಿ 24 ಮಂದಿ ಮೃತಪಟ್ಟಿರುವ ಕುರಿತು ಮಾತನಾಡಲು ಪಕ್ಷದ ಚಿಹ್ನೆ ಇರುವ ಶಾಲು ಹಾಕಿಕೊಂದು ಬಂದಿದ್ದ ಇವರನ್ನು ಕಂಡು ಇದು ಅಪಘಾತದ ಕುರಿತ ಪತ್ರಿಕಾಗೋಷ್ಟಿಯೇ ಅಥವಾ ಚುನಾವಣಾ ಪ್ರಚಾರದ ಪತ್ರಿಕಾಗೋಷ್ಟಿಯೇ ಎಂದು ನೆರೆದಿದ್ದವರು ಗೊಂದಲಕ್ಕೀಡಾಗಿದ್ದರು.
ಇದನ್ನು ಬಿಡಿ ನಂತರ ಮಾತನಾಡಲು ಆರಂಭಿಸಿದ ಮಾನ್ಯ ಸಂಸದರು ಅಪಘಾತದ ಕುರಿತು ಕೊಟ್ಟ ಹೇಳಿಕೆ ಇದಕ್ಕಿಂತ ಗೊಂದಲ ಸೃಷ್ಟಿಸಿದೆ. ಮೊದಲಿಗೆ ಇಲ್ಲಿ ತಿರುವುಗಳಿಂದ ಕೂಡಿದ ರಸ್ತೆ ಇರುವುದು ಗೊತ್ತಿದ್ದೇ ಈ ಹಿಂದೆಯೇ ಇಲ್ಲಿ ನೇರ ರಸ್ತೆ ಮಾಡಲು ತೀರ್ಮಾನಿಸಿ ಜಾಗ ಖರೀದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ನಿತಿನ್ ಗಡ್ಕರಿ ಅವರು ಹಣವನ್ನೂ ಸಹ ಮಂಜೂರು ಮಾಡಿದ್ದರು. ಆದರೆ ಇಲ್ಲಿ ಜಾಗ ಖರೀದಿಸುವುದು ರಾಜ್ಯ ಸರ್ಕಾರದ ಕೆಲಸ, ಆದರೆ ಅದನ್ನು ಟಿಆರ್ಎಸ್ ಪಕ್ಷ ಮಾಡಲಿಲ್ಲ ಎಂದು ದೂರಿದರು.
ಇನ್ನು ಇಲ್ಲಿ ಮರಗಳಿವೆ ನೇರ ರಸ್ತೆ ಮಾಡುವುದು ಸರಿಯಲ್ಲ ಎಂದು ಪರಿಸರ ಪ್ರೇಮಿಗಳು ಸ್ಟೇ ತಂದದ್ದೂ ಸಹ ರಸ್ತೆ ಆಗುವುದಕ್ಕೆ ವಿಳಂಬವಾಯಿತು, ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಇನ್ನೇನು ಕಾಮಗಾರಿ ಆರಂಭವಾಗಬೇಕಾಗಿತ್ತು ಅಷ್ಟರಲ್ಲಿ ಈ ಘಟನೆ ಸಂಭವಿಸಿದೆ ಎಂದರು. ಹೀಗೆ ರಸ್ತೆ ಏಕೆ ಆಗಿಲ್ಲ ಎಂಬುದಕ್ಕೆ ಕಾರಣವನ್ನೇನೋ ನೀಡಿದ ವಿಶ್ವೇಶ್ವರ ರೆಡ್ಡಿ ಇದ್ದಕ್ಕಿದ್ದಂತೆ ʼಈ ದಿನಗಳಲ್ಲಿ ರಸ್ತೆಗಳು ಹಾಳಾಗಿದ್ದರೆ ಯಾವುದೇ ಅಪಘಾತಗಳು ಆಗುವುದಿಲ್ಲ. ಏಕೆಂದರೆ ವಾಹನಗಳು ನಿಧಾನಕ್ಕೆ ಚಲಿಸುತ್ತವೆ. ಅದೇ ರಸ್ತೆಗಳು ಚೆನ್ನಾಗಿದ್ದರೆ ವಾಹನಗಳು ವೇಗವಾಗಿ ಚಲಿಸಿ ಅಪಘಾತಗಳು ಹೆಚ್ಚಾಗುತ್ತವೆʼ ಎಂದುಬಿಟ್ಟರು.
ಹೀಗೆ ರಸ್ತೆ ಕುರಿತು ನಾಚಿಕೆಗೇಡಿನ ಹೇಳಿಕೆ ನೀಡುವ ಮೂಲಕ ರಸ್ತೆ ಅಭಿವೃದ್ಧಿಯಾದರೆ ಅಪಘಾತ ಹೆಚ್ಚು ಎಂದು ಹೇಳಿದ ಬಿಜೆಪಿ ಎಂಪಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


