ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ಸಿಗಲಿದೆ. ಅಲ್ಲದೇ ಸಂಚಾರದ ಅವಧಿ ಸುಮಾರು 1 ಗಂಟೆ ಉಳಿತಾಯವಾಗಲಿದೆ. ಬೆಂಗಳೂರು ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಈ ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆ.
ದೀಪಾಂಜಲಿ ನಗರ ಜಂಕ್ಷನ್ ಮತ್ತು ಪಿಇಎಸ್ ಕಾಲೇಜು ಬಳಿಯ ನೈಸ್ ರಸ್ತೆ ಕ್ಲೋವರ್ ಲೀಫ್ಗೆ ಸಂಪರ್ಕಿಸುವ 1.5 ಕಿ.ಮೀ. ಉದ್ದದ 4 ಪಥದ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವ ನೈಸ್ ಸಂಸ್ಥೆ ಶೀಘ್ರವೇ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಿದೆ.
ಈ ಹೊಸ ರಸ್ತೆಯಿಂದ ದೀಪಾಂಜಲಿ ನಗರದಿಂದ ಚಲ್ಲಘಟ್ಟಗೆ ತಲುಪುವ ಸಮಯ 45 ನಿಮಿಷದಿಂದ 30 ನಿಮಿಷಕ್ಕೆ ಕಡಿಮೆಯಾಗಲಿದೆ. ವಾಹನ ಸವಾರರು ಮೈಸೂರು ರಸ್ತೆಯ ವಾಹನ ದಟ್ಟಣೆಯಲ್ಲಿ ಸಿಲುಕದೇ ನೇರವಾಗಿ ಮೈಸೂರು ರಸ್ತೆಗೆ ಸಾಗಬಹುದಾಗಿದೆ.
ದೀಪಾಲಂಜಲಿ ನಗರ ಮತ್ತು ಕೆಂಗೇರಿ ನಡುವೆ ವಾಹನ ಸವಾರರು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಸುಮಾರು ಒಂದು ವರ್ಷದಿಂದ ನೈಸ್ ರಸ್ತೆ ನಿರ್ಮಾಣ ಮಾಡುತ್ತಿದ್ದ 1.5 ಕಿ.ಮೀ. ನಾಲ್ಕು ಪಥದ ರಸ್ತೆ ವಿಳಂಬವಾಗಿತ್ತು. ಈಗ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ.
ಸಮಯ ಉಳಿತಾಯ: ದೀಪಾಂಜಲಿ ನಗರ ಜಂಕ್ಷನ್ನಿಂದ ಪಿಇಎಸ್ ಕಾಲೇಜು ಬಳಿಯ ನೈಸ್ ರಸ್ತೆ ಕೋವರ್ಲೀಫ್ ಜಂಕ್ಷನ್ ತಲುಪುವುದು ಸುಲಭವಾಗಲಿದ್ದು, ಹೊಸ ರಸ್ತೆಯಿಂದ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ.
ದೀಪಾಂಜಲಿ ನಗರ ಜಂಕ್ಷನ್-ಚಲ್ಲಘಟ್ಟ ನಡುವಿನ ದೂರ 11 ಕಿ.ಮೀ. ಇದೆ. ಆದರೆ ಸಂಚಾರ ದಟ್ಟಣೆ ಕಾರಣಕ್ಕೆ 45-60 ನಿಮಿಷಗಳ ಕಾಲ ಪ್ರಯಾಣ ಮಾಡಬೇಕಿತ್ತು. ನಾಯಂಡಹಳ್ಳಿ, ಆರ್.ಆರ್.ನಗರ, ಕೆಂಗೇರಿ, ಜ್ಞಾನಭಾರತಿ, ಪಟ್ಟಣಗೆರೆಗಳಲ್ಲಿನ ಸಂಚಾರ ದಟ್ಟಣೆಯ ಕಾರಣ ವಾಹನ ಸವಾರರು ಪರದಾಡುತ್ತಿದ್ದರು.
ಆದರೆ ಈ ಹೊಸ ರಸ್ತೆ ಮೂಲಕ ದೀಪಾಂಜಲಿ ನಗರ ಜಂಕ್ಷನ್ನಿಂದ ಚಲ್ಲಘಟ್ಟ ತನಕ ಸುಲಭವಾಗಿ ಸಂಚಾರ ನಡೆಸಬಹುದು. ಅಲ್ಲಿಂದ ಮೈಸೂರು ರಸ್ತೆ ಮೂಲಕ ಮುಂದೆ ಸಾಗಲು ಅನುಕೂಲವಾಗಲಿದೆ. ಮೈಸೂರು ರಸ್ತೆಯ ಸಂಚಾರ ದಟ್ಟಣೆಯ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ.
ಒಂದು ವರ್ಷದ ಹಿಂದೆ 1.5 ಕಿ.ಮೀ. ಉದ್ದದ 4 ಪಥದ ರಸ್ತೆ ಕಾಮಗಾರಿ ಆರಂಭವಾಗಿತ್ತು. ಆದರೆ ಭೂ ಸ್ವಾಧೀನ ಸೇರಿದಂತೆ ವಿವಿಧ ಕಾರಣಕ್ಕೆ ಅದು ವಿಳಂಬವಾಗಿತ್ತು. ಆದರೆ ಈಗ ಎರಡು ತಿಂಗಳಿನಿಂದ ಕಾಮಗಾರಿ ವೇಗವಾಗಿ ಸಾಗುತ್ತಿದೆ, ಕೆಲವೇ ದಿನಗಳಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೈಸ್ ರಸ್ತೆ ಎಂದರೆ ಟೋಲ್ ಕಟ್ಟಬೇಕು. ಆದರೆ ಈ 1.5 ಕಿ.ಮೀ. ಉದ್ದದ ರಸ್ತೆಗೆ ಟೋಲ್ ಸಂಗ್ರಹ ಮಾಡಲಾಗುತ್ತದೆಯೇ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ರಸ್ತೆಯನ್ನು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ತನಕ ವಿಸ್ತರಣೆ ಮಾಡಲು ನೈಸ್ ಸಂಸ್ಥೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆದರೆ ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.
ಬನಶಂಕರಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚಾರ ನಡೆಸುವ ವಾಹನಗಳಿಗೂ ಹೊಸ ರಸ್ತೆ ಅನುಕೂಲವಾಗಲಿದೆ. ದೀಪಾಂಜಲಿ ನಗರದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುವವರು ನಾಯಂಡಹಳ್ಳಿ ಜಂಕ್ಷನ್ನಲ್ಲಿನ ದಟ್ಟಣೆಗೆ ಸಿಲುಕದೇ ನೇರವಾಗಿ ನೈಸ್ ರಸ್ತೆ ತಲುಪಿ ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚಾರವನ್ನು ನಡಸಬಹುದು.
ಕೆಲವು ದಿನಗಳ ಹಿಂದೆ ನಾಯಂಡಹಳ್ಳಿ-ದೇವೇಗೌಡ ಪೆಟ್ರೋಲ್ ಬಂದ್ ಸಂಪರ್ಕಿಸುವ ರಸ್ತೆಯಲ್ಲಿ ಪಿಇಎಸ್ ಕಾಲೇಜು ಬಳಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗ ದೀಪಾಂಜಲಿ ನಗರದ ಮೂಲಕ ಮೈಸೂರು ರಸ್ತೆ ಸಾಗುವ ಮಾರ್ಗ ಲೋಕಾರ್ಪಣೆಯಾದರೆ ಮೈಸೂರು ರಸ್ತೆಯಲ್ಲಿನ ವಾಹನ ದಟ್ಟಣೆ ಸ್ವಲ್ಪ ಕಡಿಮೆಯಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


