ಬೆಂಗಳೂರು: ಶಾಸಕ ಜಿಟಿ ದೇವೇಗೌಡ ಮುನಿಸಿಕೊಂಡಿರುವ ಬಗ್ಗೆ ದೆಹಲಿಯಲ್ಲಿರುವ ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ನಾಯಕರು ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಚ್ .ಡಿ.ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಹೆಚ್ಡಿ ರೇವಣ್ಣ, ಸಾರಾ ಮಹೇಶ್, ಸಿ ಎಸ್ ಪುಟ್ಟರಾಜು, ಬಂಡೆಪ್ಪ ಕಾಶೆಂಪೂರ್, ನಿಖಿಲ್ ಕುಮಾರಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಜಿಟಿ ದೇವೇಗೌಡರ ಜೊತೆ ಮಾತನಾಡುವ ಬಗ್ಗೆ ಸಾರಾ ಮಹೇಶ್ ಪ್ರಸ್ತಾಪ ಮಾಡಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಮನವೊಲಿಕೆಗೆ ಸಾರಾ ಮಹೇಶ್ ಹಾಗೂ ಸಿಎಸ್ ಪುಟ್ಟರಾಜು ಯತ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಒಂದು ಅವಕಾಶ ಕೊಡಿ, ನಾವು ಜಿಟಿ ದೇವೇಗೌಡರ ಜೊತೆ ಮಾತನಾಡುತ್ತೇವೆ ಎಂದು ಉಭಯ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕೆಲವೇ ದಿನದಲ್ಲಿ ರಾಜಕೀಯ ಭೂಕಂಪ ಸಂಭವಿಸಲಿದೆ. ಕಾಂಗ್ರೆಸ್ ಸರ್ಕಾರವೇ ಬದಲಾದ್ರೂ ಅಚ್ಚರಿ ಇಲ್ಲ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಸಿಎಸ್ ಪುಟ್ಟರಾಜು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ನಾಯಕರು ಯಾವ ಒಪ್ಪಂದ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ನೂರಕ್ಕೆ ನೂರರಷ್ಟು ಕಾಂಗ್ರೆಸ್ ಬಣ್ಣ ಬಯಲಾಗುತ್ತದೆ. ರಾಜ್ಯದಲ್ಲಿ ಯಾವುದೇ ಬದಲಾವಣೆ ಆದರೂ ಅಚ್ಚರಿ ಇಲ್ಲ. ಸರ್ಕಾರವೂ ಬದಲಾಗಬಹುದು ಎಂದು ಅವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ದೊಡ್ಡ ರಾಜಕೀಯ ಭೂಕಂಪ ಆಗಲಿದೆ. ಒಡಂಬಡಿಕೆ ವಿಚಾರದಲ್ಲೆ ಭೂಕಂಪ ಆಗಲಿದೆ. ಅದನ್ನ ನಾವು-ನೀವು ಕಾದು ನೋಡೋಣ. ಭೂಕಂಪ ಆದಾಗ ಏನ್ ಇರುತ್ತದೆ, ಏನ್ ಇರುವುದಿಲ್ಲ ಎಂದು ಹೇಳಲಾಗದು ಎಂದ ಅವರು, ಪರೋಕ್ಷವಾಗಿ ಕಾಂಗ್ರೆಸ್ ಪಕ್ಷ ಛಿದ್ರ ಛಿದ್ರವಾಗುತ್ತದೆ ಎಂದಿದ್ದಾರೆ.
ಮತ್ತೊಂದೆಡೆ, ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ಕೂಡ ರಾಜ್ಯ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದಿದ್ದಾರೆ. ಒಡಂಬಡಿಕೆಯಾಗಿದೆ ಎಂದು ಡಿಸಿಎಂ ಹೇಳುತ್ತಾರೆ . ಯಾವ ಒಡಂಬಡಿಕೆಯೂ ಆಗಿಲ್ಲ ಎಂದು ಸಿಎಂ ಹೇಳುತ್ತಾರೆ. ಸಿಎಂ ಹೇಳಿಕೆಗೆ ನಗುತ್ತಾ ಡಿಸಿಎಂ ವ್ಯಂಗ್ಯವಾಡಿದ್ದಾರೆ. ನಮಗೂ ಭಾಷೆ ಬರುತ್ತದೆ, ಕನ್ನಡ ಅರ್ಥವಾಗುತ್ತದೆ. ಯಾವ ಸಮಯದಲ್ಲಿ ಯಾವ ಪದ ಉಚ್ಛಾರಣೆ ಮಾಡುತ್ತಾರೆ ಎಂಬುದು ಗೊತ್ತಿದೆ. ಅದೆಲ್ಲವನ್ನೂ ನೋಡಿದರೆ ಸಾಮರಸ್ಯ ಇಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ಅನ್ನದಾನಿ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


