ಹೊಸದಿಲ್ಲಿ : ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಹೊರಿಸುತ್ತಲೇ ಬಂದಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಮತಗಳ್ಳತನದ ವರದಿಯಾಗಿದೆ ಎಂಬ ಆರೋಪ ಮಾಡಿದ್ದಾರೆ.
ಹಲವು ರಾಜ್ಯಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದ ಬಿಜೆಪಿಯ ಕೆಲವು ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಆಯೋಗವೇ ಪ್ರಜಾಪ್ರಭುತ್ವದ ಕಗ್ಗೊಲೆ…!
ಮತದಾನದ ಹಕ್ಕನ್ನು ರಕ್ಷಿಸುವ ಹೊಣೆ ಹೊತ್ತವರೇ (ಚುನಾವಣಾ ಆಯೋಗ) ಜನರ ಭವಿಷ್ಯವನ್ನು ಕದಿಯಲು ಪಾಲುದಾರಿಕೆ ವಹಿಸಿದ್ದಾರೆ. ಸಂವಿಧಾನಕ್ಕೆ ದ್ರೋಹ ಮಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬಿರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರೇ ‘ಪ್ರಜಾಪ್ರಭುತ್ವದ ಕಗ್ಗೊಲೆ’ಯ ಪ್ರಮುಖ ದೋಷಿಗಳು ಎಂದು ದೂಷಿಸಿದ್ದಾರೆ.
ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಮೂಲಕ ಮತದಾರರ ಪಟ್ಟಿಯನ್ನು ವ್ಯಾಪಕವಾಗಿ ತಿರುಚಲಾಗುತ್ತದೆ ಎಂಬ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ವೋಟರ್ ಅಧಿಕಾರ ಯಾತ್ರೆ ನಡೆಸಿದ್ದೆ. ಇಂದು, ಬಿಹಾರದ ಮೂಲೆ ಮೂಲೆಗಳಿಂದ ವರದಿಯಾಗಿರುವ ಸುದ್ದಿಗಳು, ವಿಡಿಯೊಗಳು ಮತಗಳ್ಳತನದ ಸಾಕ್ಷ್ಯಗಳನ್ನು ಮತ್ತಷ್ಟು ಬಲಪಡಿಸಿವೆ ಎಂದಿದ್ದಾರೆ.
ಲಕ್ಷಾಂತರ ಮತದಾರರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದೀಗ, ಜನರು ತಮ್ಮ ಹಕ್ಕು ಚಲಾಯಿಸದಂತೆ ಮತಗಟ್ಟೆಗಳ ಬಳಿ ತಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತಗಳ್ಳತನದ ಮೂಲಕ ರಚನೆಯಾದ ಸರ್ಕಾರ ಯುವಕರು, ಜೆನ್ ಝಿ, ಸಾರ್ವಜನಿಕರ ಹಿತದೃಷ್ಟಿಯಿಂದ ಎಂದಿಗೂ ಕೆಲಸ ಮಾಡುವುದಿಲ್ಲ ಎಂಬುದು ನೆನಪಿರಲಿ ಎಂದು ಹೇಳಿದ್ದಾರೆ.
ಜ್ಞಾನೇಶ್ ಕುಮಾರ್, ಸುಖ್ಬಿರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಮುಖ ಅಪರಾಧಿಗಳು. ಇವರು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳಾಗಿದ್ದರೂ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರುದ್ಧ ದೊಡ್ಡ ಪ್ರಮಾಣದ ದ್ರೋಹವೆಸಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್ ಚೆಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


