ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ನಿರಂತರ ದ್ರೋಹ ಬಗೆಯುತ್ತಿದ್ದು, ರೈತರು ಮೋದಿ ಹತ್ತಿರ ಪದೇ ಪದೇ ನ್ಯಾಯ ಕೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ದೇಶದ ರೈತರು ನ್ಯಾಯಕ್ಕಾಗಿ ಪದೇ ಪದೇ ದೆಹಲಿ ಬಾಗಿಲಿಗೆ ಯಾಕೆ ಬರಬೇಕು ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಹರಿಯಾಣ ಹಾಗೂ ರಾಜಸ್ಥಾನ ಪ್ರವಾಸದಲ್ಲಿರುವ ಮೋದಿಯವರೇ, ದೇಶಕ್ಕೆ ಅನ್ನ ನೀಡುವ ರೈತರ ಹೋರಾಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸರ್ಕಾರ ಪದೇ ಪದೇ ರೈತರಿಗೆ ದ್ರೋಹ ಮಾಡಿರುವುದರಿಂದ ರೈತರು ನ್ಯಾಯ ಕೇಳುವಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
2022ರೊಳಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ಈಡೇರಿಸದಿರುವುದು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡಲು ಸಮಿತಿ ರಚಿಸಿದರೂ ಸಹ ಆ ಸಮಿತಿ ತನ್ನ ಕಾರ್ಯನಿರ್ವಹಿಸದಿರುವುದು. ರೈತರ ಬೆಳೆಗಳ ಸಮರ್ಪಕ ಖರೀದಿಯಾಗಲಿ ಅಥವಾ ಬೆಳೆಗಳಿಗೆ ನ್ಯಾಯಯುತ ಬೆಲೆಯಾಗಲಿ ದೊರೆಯುತ್ತಿಲ್ಲ. ಹೀಗಾಗಿ ನಿಮ್ಮ ಕೇಂದ್ರ ಸರ್ಕಾರ ರೈತರಿಗೆ ಪದೇ ಪದೇ ದ್ರೋಹ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ದೇಶದಲ್ಲಿ ರಸಗೊಬ್ಬರಗಳ ತೀವ್ರ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಶಾಂತಿಯುತವಾಗಿ ನಡೆಸುತ್ತಿದ್ದ ಮೆರವಣಿಗೆಯಲ್ಲಿ ಅಶ್ರುವಾಯು ಪ್ರಯೋಗಿಸುವ ಮೂಲಕ ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅಲ್ಲದೇ ರೈತರ ಮೇಲೆ ಲಾಠಿ ಪ್ರಹಾರ ಕೂಡ ನಡೆಸಿದ್ದಾರೆ. ಈ ಪರಿಸ್ಥಿತಿಯನ್ನು ರೈತರಿಗೆ ತಂದಿರುವ ನೀವು ಹಾಗೂ ನಿಮ್ಮ ಸರ್ಕಾರದ ಕೃಷಿ ಸಚಿವರು ಎಷ್ಟೇ ಸುಳ್ಳು ಹೇಳಿದರೂ ರೈತರ ಬದ್ಧ ವಿರೋಧಿ ಎಂಬುದನ್ನು ಅರ್ಥಮಾಡಿಕೊಂಡಿದ್ದಾರೆ. ರೈತರು ತಮ್ಮ ವಿರುದ್ಧ ನಡೆಯುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವ ಹಕ್ಕನ್ನು ಕಸಿದುಕೊಂಡು ಅವರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


