ಬೆಂಗಳೂರು ನಗರದಲ್ಲಿ 6.15 ಕಿ.ಮೀ. ಉದ್ದದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನದ ಅಧಿಸೂಚನೆ ಹೊರಡಿಸಲಾಗಿದೆ. 2022ರಲ್ಲಿ ಪ್ರಸ್ತಾಪಿಸಲಾದ ಈ ಬೈಪಾಸ್ ಮಾರ್ಗ (ಕಾರ್ಡ್ ಲೈನ್) ಯೋಜನಗೆ ಈಗಾಗಲೇ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಬೆಟ್ಟಹಲಸೂರು-ರಾಜಾನುಕುಂಟೆ ನಡುವೆ 6.14 ಕಿ.ಮೀ.ಉದ್ದದ ಬೈಪಾಸ್ ರೈಲು ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಜೋಡಿ ಹಳಿ ಮಾರ್ಗ ನಿರ್ಮಾಣದಿಂದ ಸರಕು ಸಾಗಣೆ ರೈಲುಗಳ ಸಂಚಾರ ಸುಲಭವಾಗಲಿದ್ದು, ಯಲಹಂಕ ಜಂಕ್ಷನ್ನಲ್ಲಿ ಪ್ರಯಾಣಿಕ ರೈಲುಗಳ ದಟ್ಟಣೆ ಕಡಿಮೆಯಾಗಲಿದೆ.
ಸರಕು ಸಾಗಣೆ ಮಾಡುವ ರೈಲುಗಳು ನಗರಕ್ಕೆ ಆಗಮಿಸದೇ ನೇರವಾಗಿ ಮುಂದೆ ಸಾಗಬಹುದಾಗಿದ್ದು, ಪ್ರಯಾಣಿಕ ರೈಲುಗಳ ಕಾಯುವ ಅವಧಿ ಕಡಿಮೆಯಾಗಲಿದೆ. ಬೆಂಗಳೂರು ಜಂಕ್ಷನ್ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕಕ್ಕೆ ಅನುಕೂಲವಾಗಲಿದೆ.
ಯೋಜನೆಯ ವಿವರ: ಬೆಟ್ಟಹಲಸೂರು-ರಾಜಾನುಕುಂಟೆ ನಡುವಿನ 6.14 ಕಿ.ಮೀ.ಉದ್ದದ ಬೈಪಾಸ್ ರೈಲು ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನದ ಅಧಿಸೂಚನೆ ಹೊರಡಿಸಲಾಗಿದೆ. ಬೆಟ್ಟಹಲೂಸೂರಿನಲ್ಲಿ 12, ರಾಜಾನುಕುಂಟೆಯಲ್ಲಿ 17 ಎಕರೆ ಪ್ರದೇಶವನ್ನು ಈ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಯೋಜನೆಗೆ ಗುರುತಿಸಿರುವ ಭೂಮಿಯಲ್ಲಿ ಒಣ ಮತ್ತು ಬೇಸಾಯ ಯೋಗ್ಯ ಭೂಮಿಯೂ ಸೇರಿದೆ. ಈ ಯೋಜನೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಭೂಮಿಯ ಸರ್ವೇ ನಂಬರ್ಗಳನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಈ ಯೋಜನೆಯನ್ನು ಕೈಗೊಳ್ಳಲಿದೆ. ಬೆಂಗಳೂರು ನಗರದಲ್ಲಿ ಭವಿಷ್ಯದಲ್ಲಿ ಉಂಟಾಗುವ ರೈಲುಗಳ ದಟ್ಟಣೆಯನ್ನು ಪರಿಹಾರ ಮಾಡಲು ಈ ಕಾರ್ಡ್ ಲೈನ್ ಅತ್ಯಗತ್ಯವಾಗಿದೆ ಎಂದು ಇಲಾಖೆ ಹೇಳಿದೆ.
2022ರಲ್ಲಿ ಬೆಂಗಳೂರು ರೈಲ್ವೆ ವಿಭಾಗ ಕಾರ್ಡ್ ಲೈನ್ ಪ್ರಸ್ತಾವನೆ ಸಿದ್ಧಗೊಳಿಸಿತ್ತು. ರೈಲ್ವೆ ಮಂಡಳಿಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಸಮೀಕ್ಷೆ ಮತ್ತು ಕಾರ್ಯ ಸಾಧ್ಯತಾ ವರದಿ ಬಳಿಕ ಯೋಜನೆಗೆ 248 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ರೈಲ್ವೆ ಮಂಡಳಿ ಯೋಜನೆಗೆ ಅನುಮೋದನೆ ನೀಡಿತ್ತು.
ಯೋಜನೆಯಲ್ಲಿ ಜೋಡಿ ಹಳಿ ನಿರ್ಮಾಣಕ್ಕೆ 216 ಕೋಟಿ, ಸಿಗ್ನಲ್ ಕಾಮಗಾರಿಗೆ 21 ಕೋಟಿ, ಎಲೆಕ್ಟ್ರಿಕ್ ಕಾಮಗಾರಿಗೆ 14 ಕೋಟಿ ರೂ. ಬೇಕು ಎಂದು ಅಂದಾಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯದ ನಡುವೆ ವೆಚ್ಚ ಹಂಚಿಕೆ ಇಲ್ಲ. ರೈಲ್ವೆ ಮಂಡಳಿಯೇ ಸಂಪೂರ್ಣ ವೆಚ್ಚವನ್ನು ಭರಿಸಲಿದೆ.
6.15 ಕಿ.ಮೀ. ಉದ್ದದ ನೂತನ ರೈಲು ಮಾರ್ಗ ನಿರ್ಮಾಣದಿಂದ ಆಗುವ ಪ್ರಯೋಜನಗಳು ಏನು? ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ರೈಲು ನಿರ್ಮಾಣವಾದರೆ ಚೆನ್ನೈ ಬಂದರಿನಿಂದ ಬರುವ ಸರಕು ಸಾಗಣೆ ರೈಲುಗಳು ರಾಜಾನುಕುಂಟೆ, ದೊಡ್ಡಬಳ್ಳಾಪುರ, ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಬಳ್ಳಾರಿ ಸಂಚಾರಿ ನಡೆಸಬಹುದು.
ರಾಜಾನುಕುಂಟೆ ಕಾರ್ಡ್ ಲೈನ್ ಮೂಲಕ ಬೆಟ್ಟಹಲಸೂರು, ಏರ್ಪೋರ್ಟ್, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಢ್ಲಘಟ್ಟ, ಶ್ರೀನಿವಾಸಪುರ ಮೂಲಕ ಕೋಲಾರದಿಂದ ಬಂಗಾರಪೇಟೆ ತಲುಪುಲು ಸಹಾಯಕವಾಗಲಿದೆ. ಸರಕು ಸಾಗಣೆ ರೈಲು ಸುಲಭವಾಗಿ ಸಂಚಾರ ನಡೆಸಲು ಅನುಕೂಲವಾಗಲಿದ್ದು, ಪ್ರಯಾಣಿಕ ರೈಲುಗಳು ಕಾಯುವ ಸಮಯ ಕಡಿಮೆಯಾಗಲಿದೆ.
ದೊಡ್ಡಬಳ್ಳಾಪುರ ಕಡೆಯಿಂದ ಚಿಕ್ಕಬಳ್ಳಾಪುರ, ದೇವನಹಳ್ಳಿ-ಕೋಲಾರ ಕಡೆಗೆ ಹೋಗುವ ರೈಲುಗಳು ಯಲಹಂಕ ಜಂಕ್ಷನ್ನಿಂದ ತಪ್ಪಿ ಬೈಪಾಸ್ ಕಾರ್ಡ್ ಲೈನ್ ಮೂಲಕ ಸಾಗಬಹುದು. ಆದ್ದರಿಂದ ಪ್ರಯಾಣಿಕ ರೈಲುಗಳು ಸುಲಭವಾಗಿ ಸಂಚಾರವನ್ನು ನಡೆಸಬಹುದು.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಯೋಜನೆ ಕುರಿತು ಮಾತನಾಡಿ, “ಬೆಂಗಳೂರು–ರಾಜಾನುಕುಂಟೆ ನಡುವಿನ 6.14 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ ಯೋಜನೆಯನ್ನು ವಿಶೇಷ ಯೋಜನೆಯೆಂದು ಕೇಂದ್ರ ರೈಲ್ವೆ ಸಚಿವಾಲಯ ಪರಿಗಣಿಸಿದೆ” ಎಂದು ಹೇಳಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


