ಬೆಂಗಳೂರು: ನಿನ್ನೆ ( ಮಾರ್ಚ್ 9 ) ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ಗಳ ಅಂತರದಿಂದ ಮಣಿಸಿದ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 50 ಒವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದ ನ್ಯೂಜಿಲೆಂಡ್ ಭಾರತಕ್ಕೆ 252 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿತು. ಈ ಗೆಲುವಿನ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು, ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎಂಬ ದಾಖಲೆ ಬರೆಯಿತು.
ಈ ಮೂಲಕ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆದ್ದ ಭಾರತ ತಂಡದ ಸಮತೋಲನವಾದ ಪ್ರದರ್ಶನದಿಂದ ಮಾತ್ರ ಇಂತಹ ಸಾಧನೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ. ಹೌದು, ಟೂರ್ನಿಯಲ್ಲಿ ಎಲ್ಲ ವಿಭಾಗದ ಎಲ್ಲಾ ಆಟಗಾರರೂ ಅನಿವಾರ್ಯವಿದ್ದ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ.
ಅದರಲ್ಲಿಯೂ ಜಸ್ಪ್ರೀತ್ ಬುಮ್ರಾ ಇಲ್ಲದೇ ಟೂರ್ನಿಯಲ್ಲಿ ಭಾರತದ ಬೌಲಿಂಗ್ ಕುರಿತು ಅನುಮಾನ ವ್ಯಕ್ತಪಡಿಸಿದ್ದವರಿಗೆ ಭಾರತದ ಬೌಲಿಂಗ್ ಪಡೆ ಟ್ರೋಫಿಯ ಮೂಲಕ ಉತ್ತರ ನೀಡಿದೆ. ಎಲ್ಲ ಪಂದ್ಯಗಳಲ್ಲಿಯೂ ಭಾರತ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಮಿಡಲ್ ಆರ್ಡರ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಮಿಂಚಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ದ್ರಾವಿಡ್, ಕುಂಬ್ಳೆ, ಜಾವಗಲ್ ಶ್ರೀನಾಥ್ ಹಾಗೂ ವಿನಯ್ ಕುಮಾರ್ ಬಳಿಕ ಚಾಂಪಿಯನ್ಸ್ ಟ್ರೋಫಿ ಗೆದ್ದ ಐದನೇ ಕರ್ನಾಟಕದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
ಆದರೆ ಇದೇ ತಂಡದಲ್ಲಿ ಮತ್ತೋರ್ವ ಕನ್ನಡಿಗನಿದ್ದಾರೆ, ಅವರೇ ವರುಣ್ ಚಕ್ರವರ್ತಿ. ಟೂರ್ನಿಯಲ್ಲಿ 9 ವಿಕೆಟ್ ಪಡೆದು ತಂಡದ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ವರುಣ್ ಚಕ್ರವರ್ತಿ ಮೂಲತಃ ಕರ್ನಾಟಕದವರು. ಬೀದರ್ ಜಿಲ್ಲೆಯಲ್ಲಿ ಜನಿಸಿದ ವರುಣ್ ಚಕ್ರವರ್ತಿ ಚೆನ್ನೈನಲ್ಲಿ ಬೆಳೆದಿದ್ದು, ರಣಜಿಯಲ್ಲಿ ತಮಿಳುನಾಡು ಪರ ಆಡುತ್ತಾರೆ. ತಂದೆ ತಮಿಳಿನವರಾದರೆ, ವರುಣ್ ತಾಯಿ ಮಾಲಿನಿ ಕನ್ನಡತಿ. ಹೀಗೆ ಬೀದರ್ನಲ್ಲಿ ಹುಟ್ಟಿದ ವರುಣ್ ಚಕ್ರವರ್ತಿ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


