ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥ ವಿಧಾನಸೌಧದ ಆವರಣದಲ್ಲಿ ಹಾಗೂ ಆಲಮಟ್ಟಿ ಜಲಾಶಯದ ಬಳಿ ಅವರ ಪುತ್ಥಳಿಯನ್ನು ನಿರ್ಮಿಸಬೇಕೆಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಮನವಿ ಮಾಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ಕೃಷ್ಣ ಅವರು ಸಾಕಷ್ಟು ಒತ್ತು ನೀಡಿದ್ದರು. ಅಲ್ಲದೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ಶೇ.೩೭ರಷ್ಟು ಬಜೆಟ್ ಅನುದಾನವನ್ನು ಒದಗಿಸಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆ ಸೇರಿದಂತೆ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಇದೆ ಎಂದರು.
ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದ ಅವರು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು.
ರಾಜ್ಯದ ಹಿಂದುಳಿದ ತಾಲ್ಲೂಕುಗಳನ್ನು ಗುರುತಿಸಲು ನಂಜುಂಡಪ್ಪ ವರದಿಯನ್ನು ಪಡೆಯಲಾಗಿತ್ತು ಎಂದ ಅವರು, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಸ್ತ್ರೀ ಶಕ್ತಿ ಬಂದವು. ಅವು ಇಂದು ದೊಡ್ಡ ಶಕ್ತಿಯಾಗಿವೆ. ವಿಶೇಷವಾದ ಮುಂದಾಲೋಚನೆ ಉಳ್ಳವರಾಗಿದ್ದರು. ನನಗೆ ತಂದೆಯ ಸಮಾನರಾಗಿ ಮಾರ್ಗದರ್ಶನ ನೀಡುತ್ತಿದ್ದರು ಎಂದು ಅವರ ಒಡನಾಟದ ಹಲವು ಘಟನೆಗಳನ್ನು ಮೆಲಕು ಹಾಕಿದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಯೋಜನೆಯನ್ನು ಕೃಷ್ಣ ಅವರು ಆರಂಭಿಸಿದರು. ಮುಂದಿನ ಪೀಳಿಗೆಗೆ ಒಂದು ವ್ಯಕ್ತಿತ್ವವನ್ನು ಬಿಟ್ಟು ಹೋಗಿದ್ದಾರೆ. ಈ ದೇಶ ಕಂಡ ರಾಜಕಾರಣಿಗಳಲ್ಲಿ ವಿಶೇಷ ವ್ಯಕ್ತಿತ್ವ ಬಿಟ್ಟು ಹೋದವರಲ್ಲಿ ಕೃಷ್ಣ ಕೂಡ ಒಬ್ಬರು. ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿಯಾಗಿದ್ದರು.
ಅವರ ಅವಧಿಯಲ್ಲಿ ಪ್ರಾರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಉತ್ತಮ ನಿಲ್ದಾಣವಾಗಿದೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೧೨ ಮಂದಿ ಉಪಾಧ್ಯಕ್ಷರಾಗಿದ್ದರು. ಐಟಿ ಕ್ರಾಂತಿಗೆ ಕಾರಣಕರ್ತರಾದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಪರಿಚಯವಾಗಲು ಅವರು ಕಾರಣಕರ್ತರು ಎಂದು ಅವರ ಒಡನಾಟದ ಹಲವು ಘಟನೆಗಳನ್ನು ಉಲ್ಲೇಖಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಬೆಂಗಳೂಗರಿಗು ಎಸ್.ಎಂ.ಕೃಷ್ಣ ಅವರನ್ನು ಮರೆಯಲು ಸಾಧ್ಯವಿಲ್ಲ. ಬೆಂಗಳೂರಿಗೆ ಘನತೆ ತಂದುಕೊಟ್ಟ ಮುಖ್ಯಮಂತ್ರಿಯಾಗಿದ್ದರು. ವಿದೇಶಗಳ ಪ್ರಧಾನಿಗಳು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಬರುತ್ತಿದ್ದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರ ಜೊತೆ ಉತ್ತಮ ಒಡನಾಟವಿತ್ತು. ಯಾರೊಬ್ಬರಿಗೂ ನೊವಾಗುವ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಮದ್ದೂರಿನ ಕೃಷ್ಣ ಅವರ ಮನೆಗೆ ಮಹಾತ್ಮ ಗಾಂಧೀಜಿಯವರು ಬಂದಿದ್ದರು. ಅವರ ಆಡಳಿತಾವಧಿಯಲ್ಲಿ ಹಲವಾರು ಸವಾಲುಗಳು ಎದುರಾಗಿದ್ದರು. ನೆಮ್ಮದಿಯಿಂದ ಕೆಲಸ ಮಾಡಲು ಆಗಲಿಲ್ಲ. ಟೆನಿಸ್ ಪ್ರೇಮಿಯಾಗಿದ್ದರು. ನಿಜವಾದ ಬ್ರಾಂಡ್ ಬೆಂಗಳೂರು ಮಾಡಿದವರು ಕೃಷ್ಣ ಎಂದು ಬಣ್ಣಿಸಿದರು.
ಸಚಿವ ಜಮೀರ್ ಅಹಮ್ಮದ್ ಖಾನ್, ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಜೆಡಿಎಸ್ ಶಾಸಕಾಂಗ ಪಕ್ಷದ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹಲವು ಶಾಸಕರು ಪಕ್ಷಬೇಧ ಮರೆತು ಎಸ್.ಎಂ.ಕೃಷ್ಣ ಅವರ ಗುಣಗಾನ ಮಾಡಿ ಸಂತಾಪ ಸೂಚಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


