ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಸದ್ಯ ಭಾರತದಲ್ಲಿ ಅತಿಹೆಚ್ಚು ವಿವಾದಕ್ಕೀಡಾಗಿರುವ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದೇ ವರ್ಷ ಅಹ್ಮದಾಬಾದ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹೀಗೆ ಚಾಂಪಿಯನ್ ಆದ ಆರ್ಸಿಬಿ ತವರಿಗೆ ಮರಳಿ ಚಿನ್ನಸ್ವಾಮಿಯಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನೂ ಸಹ ನಡೆಸಿತು. ಈ ವೇಳೆ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದರು. ಈ ಕಾರಣದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಭದ್ರತೆ ಕುರಿತು ಅನುಮಾನಗಳು ವ್ಯಕ್ತವಾಗಿ ಮುಂದಿನ ದಿನಗಳಲ್ಲಿ ಇಲ್ಲಿ ಪಂದ್ಯಗಳನ್ನು ನಡೆಸುವುದು ಸುರಕ್ಷಿತವಲ್ಲ ಎಂದು ಹೇಳಲಾಗಿತ್ತು. ಬಿಸಿಸಿಐ ಸಹ ಇಲ್ಲಿ ಪಂದ್ಯಗಳನ್ನು ಆಯೋಜಿಸಲು ಹಿಂದೇಟು ಹಾಕಿತ್ತು.
ಈ ಸಲುವಾಗಿ ಇಂದು ( ಡಿಸೆಂಬರ್ 10 ) ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ, ಕೆಎಸ್ಸಿಎನ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಚಿನ್ನಸ್ವಾಮಿಯಲ್ಲಿ ಕೇವಲ ಐಪಿಎಲ್ ಪಂದ್ಯಗಳಷ್ಟೇ ಅಲ್ಲ, ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಸಹ ಆಯೋಜಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ವೆಂಕಟೇಶ್ ಪ್ರಸಾದ್ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು ಖುಷಿಯಾಯಿತು, ಅವರ ಜತೆ ಹೆಚ್ಚಿನ ಸಮಯ ಕಳೆದದ್ದು ಸಂತಸ ತಂದಿದೆ ಎಂದರು. ಡಿಕೆಶಿ ಅವರ ಜತೆಗೆ ಚಿನ್ನಸ್ವಾಮಿಯಿಂದ ಐಪಿಎಲ್ ಪಂದ್ಯಗಳು ಕೈತಪ್ಪಿ ಹೋಗಬಾರದು ಎಂಬುದರ ಕುರಿತು ಚರ್ಚಿಸಿದೆವು ಎಂದ ವೆಂಕಟೇಶ್ ಪ್ರಸಾದ್ ಕೇವಲ ಐಪಿಎಲ್ ಅಷ್ಟೇ ಅಲ್ಲ, ಮುಂಬರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯ ಹಾಗೂ ಫೆಬ್ರವರಿಯಲ್ಲಿ ನಡೆಯುವ ಟಿ20 ವಿಶ್ವಕಪ್ನ ಕೆಲ ಪಂದ್ಯಗಳು ಸೇರಿದಂತೆ ಇನ್ನೂ ಕೆಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಇಲ್ಲಿ ನಡೆಸಲು ಚರ್ಚೆ ನಡೆಸಲಾಯಿತು ಎಂದರು. ಇನ್ನು ಈ ಚರ್ಚೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಕೆ ಶಿವಕುಮಾರ್ ಈ ವಿಷಯದಲ್ಲಿ ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ತಿಳಿಸಿದರು.
ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೆ ಸ್ವತಃ ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಮಾತನಾಡಿ ಯಾವುದೇ ಕಾರಣಕ್ಕೂ ಚಿನ್ನಸ್ವಾಮಿಯಿಂದ ಐಪಿಎಲ್ ಪಂದ್ಯಗಳು ಕೈತಪ್ಪಿ ಹೋಗಲು ಬಿಡುವುದಿಲ್ಲ ಎಂದಿದ್ದರು.
ಆನ್ಲೈನ್ನಲ್ಲಿ ಆರೋಗ್ಯ ವಿಮೆ ಖರೀದಿಸುವ ಸಾಮಾನ್ಯ ತಪ್ಪುಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


