ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ವರದಿಗೆ ಹತ್ತು ವರ್ಷವಾಗಿರುವ ಹಿನ್ನೆಲೆಯಲ್ಲಿ ವರದಿಗೆ ಇಡೀ ನಮ್ಮ ಜನಾಂಗದ ವಿರೋಧವಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದ ಗಣ್ಯರು ಹಾಗೂ ಶಾಸಕರು ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ವೈಜ್ಞಾನಿಕವಾಗಿ ಜಾತಿಜನಗಣತಿ ಮಾಡಬೇಡಿ ಎಂದು ಯಾರೂ ಹೇಳುತ್ತಿಲ್ಲ.ಆದರೆ, ಈ ವರದಿ 10 ವರ್ಷಗಳ ಹಿಂದೆ ಆಗಿರುವುದನ್ನು ಸಂಪುಟ ಸಭೆಯ ಮುಂದೆ ತರಲಾಗಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದರು.
ಈ ವರದಿಗೆ ಲಿಂಗಾಯಿತರು,ಒಕ್ಕಲಿಗರು ಈಗಾಗಲೇ ವಿರೋಧ ಮಾಡಿದ್ದಾರೆ. ಈ ವರದಿಯನ್ನು ಸರ್ಕಾರ ಒಪ್ಪಬಾರದು. ಒಂದು ವೇಳೆ ಅನುಷ್ಠಾನಕ್ಕೆ ತರಲು ಮುಂದಾದರೆ, ನಾವು ಮಾತ್ರ ಸುಮ್ಮನೆ ಕುಳಿತುಕೊಳ್ಳಲ್ಲ. ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹೋರಾಟ ಮಾಡುತ್ತೇವೆ. ರಾಜ್ಯದಾದ್ಯಂತ ಲಿಂಗಾಯತರನ್ನು ನಮ್ಮ ಜೊತೆ ಸೇರಿಸಿಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಲ್ಲ ಜಾತಿಯವರು ಸಹೋದರರಂತೆ ಇರಬೇಕು. ಈ ವರದಿ ಮುಂದೆ ಇಟ್ಟುಕೊಂಡು ಯಾಕೆ ಮುಖ್ಯಮಂತ್ರಿಗಳು ಪದೇ ಪದೇ ಪ್ರಸ್ತಾಪ ಮಾಡುತ್ತಾರೆ? ವೈಜ್ಞಾನಿಕವಾಗಿ ಜಾತಿಗಣತಿಯನ್ನು ಮತ್ತೊಮ್ಮೆ ಮಾಡಲಿ. ಈಗಿರುವ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ.
ಹತ್ತು ವರ್ಷಗಳ ನಂತರ ವರದಿಯನ್ನು ಸ್ವೀಕರಿಸುವುದು ಎಷ್ಟರಮಟ್ಟಿಗೆ ಸರಿ ಇದೆ? ಅನಂತರ ಬದಲಾವಣೆಯಾಗಿಲ್ಲವೆ? ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಜಾತಿಯಲ್ಲಿ ಜನ ಹುಟ್ಟಿಲ್ಲವೇ? ಜನಸಂಖ್ಯೆ ಜಾಸ್ತಿಯಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಜಾತಿಜನಗಣತಿ ಮಾಡಿದಾಗ ಒಕ್ಕಲಿಗರಲ್ಲಿ ಸಾಕಷ್ಟು ಉಪಜಾತಿಗಳಿವೆ. ಅವರು ಈ ಜಾತಿ ಅಲ್ಲ , ಬೇರೆ ಜಾತಿ ಅಂತ ಮಾಡಿದ್ದಾರೆ. ಒಕ್ಕಲಿಗರಲ್ಲಿ 115 ಪಂಗಡಗಳಿವೆ, ಅವರೆಲ್ಲರೂ ಒಕ್ಕಲಿಗರೇ. ಅವುಗಳಲ್ಲಿ ಮತ್ತೆ ಉಪಪಂಗಡಗಳಿವೆ. ಅವರನ್ನು ಬೇರೆ ಮಾಡಿ ಒಕ್ಕಲಿಗರು ಕಡಿಮೆ ಇದ್ದಾರೆ ಅಂತ ತೋರಿಸಿದ್ದಾರೆ. ಕಂಪ್ಯೂಟರ್ ಮತ್ತು ಡಿಜಿಟಲ್ ಯುಗದಲ್ಲಿ ಬೇಗ ವರದಿ ಪಡೆಯುವ ಅವಕಾಶವಿದೆ ಎಂದಿದ್ದಾರೆ.
ಸಮೀಕ್ಷೆ ಮಾಡುವಾಗ ನಮ್ಮ ಮನೆಗೆ ಯಾರೂ ವರದಿ ಮಾಡಲು ಬಂದಿಲ್ಲ. ಮನೆಗೆ ಬಂದು ನಿಮ್ಮ ಮನೆಯಲ್ಲಿ ಎಷ್ಟು ಜನ ಇದೀರಾ? ಯಾವ ಜಾತಿಗೆ ಸೇರಿದವರು ಅಂತ ಯಾರೂ ನಮ್ಮನ್ನು ಪ್ರಶ್ನೆ ಮಾಡಿಲ್ಲ. ಬಹುತೇಕರು ಇದೇ ಮಾತನ್ನು ಹೇಳುತ್ತಿದ್ದಾರೆ. ಪ್ರತಿ ಗ್ರಾಮದ ಮನೆಮನೆಗೆ ಹೋಗಿ ವರದಿ ತಯಾರಿಸಬೇಕು. ಆ ರೀತಿ ಆಗಿಲ್ಲ ಎಂಬ ಆರೋಪಗಳಿವೆ ಎಂದು ಅವರು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


