ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಹೇಳುತ್ತಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕುರ್ಚಿಗೆ ಕುತ್ತು ಬಂದಿದೆ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಅಶೋಕ್ ಅವರು ಬೇರೆಯವರ ಭವಿಷ್ಯವನ್ನು ನೋಡುವ ಭರದಲ್ಲಿ ತಮ್ಮ ಭವಿಷ್ಯವನ್ನು ಮರೆತು ಹೋದಂತೆ ಕಾಣುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸುನೀಲ್ಕುಮಾರ್ ಅವರನ್ನು ನೇಮಿಸಲಾಗುವುದು ಎಂಬ ಚರ್ಚೆಗಳಾಗುತ್ತಿವೆ.
ಖ್ಯಾತ ಜ್ಯೋತಿಷಿಯಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಕುರ್ಚಿಗಳ ಬಗ್ಗೆ ಅಶೋಕ್ ಭವಿಷ್ಯ ಹೇಳುತ್ತಿದ್ದರು. ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ಅಶೋಕ್ ಅವರನ್ನೇ ಆಹ್ವಾನಿಸಿಲ್ಲ. ಮೊದಲ ಬಾರಿಗೆ ಶಾಸಕರಾಗಿರುವ ಯುವ ನಾಯಕ ಬಿ.ವೈ. ವಿಜಯೇಂದ್ರ ಅವರಿಗೆ ಆಹ್ವಾನ ಇದೆ. ಹಿರಿಯರಾದ ಆರ್.ಅಶೋಕ್ ಅವರನ್ನು ಕಡೆಗಣಿಸಿ, ಮೂಲೆಗುಂಪು ಮಾಡಲಾಗುತ್ತಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಅಶೋಕ್ ಅವರ ಬಗ್ಗೆ ನಮಗೆ ಗೌರವ ಭಾವನೆ ಇದೆ. ಅದರೆ ಅವರನ್ನು ಬಿಜೆಪಿಯಲ್ಲಿ ಕಡೆಗಣನೆ ಮಾಡುತ್ತಿರುವುದು ನೋವಿನ ವಿಚಾರ. ಅಶೋಕ್ ಅಂತಹ ಹಿರಿಯರಿಗೆ ಮಾನ್ಯತೆ ಇಲ್ಲ ಎಂದ ಮೇಲೆ ಚಿಕ್ಕಬಳ್ಳಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಸಂಸದರ ಕಾರು ಚಾಲಕನಿಗೆ ಬಿಜೆಪಿಯಿಂದ ನ್ಯಾಯ ಸಿಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.
ಛಲವಾದಿ ನಾರಾಯಣಸ್ವಾಮಿ ದಲಿತರ ಬಗ್ಗೆ ಹೆಚ್ಚು ಮಾತನಾಡುತ್ತಾರೆ, ಚಿಕ್ಕಬಳ್ಳಾಪುರದಲ್ಲಿ ದಲಿತ ಹುಡುಗನೊಬ್ಬನ ಆತ್ಮಹತ್ಯೆಯಾಗಿದೆ. ಈವರೆಗೂ ಏಕೆ ಅವರ ಮನೆಗೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಸಂಸದ ಡಾ. ಕೆ.ಸುಧಾಕರ್ ಒಕ್ಕಲಿಗ, ಕುರುಬ, ಎಸ್ಸಿಎಸ್ಟಿ ಸಮುದಾಯದ ಅನೇಕರನ್ನು ತುಳಿದಿದ್ದಾರೆ, ಕಿರುಕುಳ ನೀಡಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಜೈಲಿಗೆ ಹಾಕಿಸಿದ್ದಾರೆ. ಸಂಸದರ ಕಿರುಕುಳದಿಂದ ಬೇಸತ್ತು ತಿರುಗಿ ಬಿದ್ದವರು ಇಂದು ರಾಜಕೀಯದಲ್ಲಿ ಮುನ್ನಲೆಗೆ ಬಂದು ಶಾಸಕರಾಗಿದ್ದಾರೆ ಎಂದು ಹೇಳಿದರು.
ನಾನು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರೆ ಇಷ್ಟೊತ್ತಿಗೆ ಸುಧಾಕರ್ ಅವರು ಜೈಲಿನಲ್ಲಿರುತ್ತಿದ್ದರು. ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ, ದೊಡ್ಡದಾಗಿ ಯೋಚಿಸಲು ನನಗೆ ಗೊತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರದೇ ಪಕ್ಷದ ಸಂಸದರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದರು.
ಪ್ರತಾಪ್ ಸಿಂಹ ಮೊಬೈಲ್ ಎಸ್ಐಟಿ ತನಿಖೆ ನಡೆಸಿದ್ರೆ ಜೈಲುಶಿಕ್ಷೆ ಪಕ್ಕಾ: ಎಂ.ಲಕ್ಷ್ಮಣ್ ಹೊಸ ಬಾಂಬ್
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


