ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ ಅಂತಿಮಯಾತ್ರೆ ಬೆಂಗಳೂರಿನಿಂದ ಮದ್ದೂರಿನವರೆಗೆ ನಡೆಯಿತು.
ಸಂಜೆ ಮದ್ದೂರಿನ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ ಸದಾಶಿವನಗರದ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು. ಬಳಿಕ 8.30ರ ಸುಮಾರಿಗೆ ಪಾರದರ್ಶಕ ವಾಹನದಲ್ಲಿ ಆರಂಭವಾದ ಅಂತಿಮಯಾತ್ರೆಯಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ಅಂತಿಮದರ್ಶನ ಪಡೆದು, ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾರದರ್ಶಕ ವಾಹನದ ಒಳಗೆ ಪಾರ್ಥಿವ ಶರೀರದ ಪಕ್ಕದಲ್ಲೇ ಆಸೀನರಾಗುವ ಮೂಲಕ ಯಾತ್ರೆಯುದ್ದಕ್ಕೂ ಸಾಗಿದರು. ಅಲ್ಲಲ್ಲಿ ಅವರು ಗದ್ಗದಿತರಾಗಿ ದುಃಖಿಸುತ್ತಿರುವುದು ಕಂಡುಬರುತ್ತಿತ್ತು.
ಸದಾಶಿವನಗರದಿಂದ ಮೇಖ್ರಿ ಸರ್ಕಲ್ ವೃತ್ತವನ್ನು ಬಳಸಿ ಬಳ್ಳಾರಿ ರಸ್ತೆ ಮೂಲಕ ವಿಂಡ್ಸರ್ಮ್ಯಾನರ್, ಚಾಲುಕ್ಯ ವೃತ್ತ, ಕೆ.ಆರ್.ವೃತ್ತ, ಹಡ್ಸನ್ ಸರ್ಕಲ್, ಚಾಮರಾಜಪೇಟೆ, ಶಿರಸಿ ಮೇಲ್ಸೇತುವೆ ಮೂಲಕ ಅಂತಿಮ ಯಾತ್ರೆ ಹಾದುಹೋಯಿತು.
ಬೆಳಗಿನ ಸಮಯವಾದ್ದರಿಂದ ವಾಹನಗಳ ಸಂಚಾರ ಕಡಿಮೆಯಿತ್ತು. ಮುಂಜಾಗ್ರತಾ ಕ್ರಮವಾಗಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಸೂಕ್ತ ಪೊಲೀಸ್ ಬಂದೋಬಸ್ತನ್ನು ಆಯೋಜಿಸಲಾಗಿತ್ತು.
ಶಿರಸಿ ವೃತ್ತ, ನಾಯಂಡಹಳ್ಳಿ ಮಾರ್ಗವಾಗಿ ಕೆಂಗೇರಿ ತಲುಪಿದ ಯಾತ್ರೆ ಮಧು ಪೆಟ್ರೋಲ್ ಬಂಕ್ ಸಮೀಪ ಕೃಷ್ಣಪ್ರಿಯ ಕಲ್ಯಾಣಮಂಟಪದ ಬಳಿ ಕೆಲ ನಿಮಿಷಗಳ ಕಾಲ ನಿಂತಿತ್ತು. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ತಮ್ಮ ಬೆಂಬಲಿಗರ ಜೊತೆಯಲ್ಲಿ ಹಾಜರಿದ್ದು, ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಪುಷ್ಪಾರ್ಚನೆ ಮೂಲಕ ಅಭಿಮಾನಿಗಳು ನಮನ ಸಲ್ಲಿಸಿದರು.
ನಂತರ ಬಿಡದಿಯಲ್ಲೂ ಅಭಿಮಾನಿಗಳು ನೆರೆದಿದ್ದು, ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಮಾಗಡಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಗುಬ್ಬಿ ಕ್ಷೇತ್ರದ ಎಸ್.ಆರ್.ಶ್ರೀನಿವಾಸ್ ಅವರು ಈ ವೇಳೆ ಹಾಜರಿದ್ದು, ಜನನಾಯಕನಿಗೆ ತಮ್ಮ ಅಶ್ರುತರ್ಪಣ ಸಲ್ಲಿಸಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಸ್ಕೈವಾಕ್ಗಳ ಮೇಲೆ ನಿಂತಿದ್ದ ಸಾರ್ವಜನಿಕರು ಪುಷ್ಪವೃಷ್ಟಿಗರೆಯುವ ಮೂಲಕ ತಮ್ಮ ಅಭಿಮಾನ ಮೆರೆದರು.
ರಾಮನಗರದ ಐಜೂರು ವೃತ್ತದಲ್ಲಿ ಕೆಲಕಾಲ ಅಂತಿಮ ಯಾತ್ರೆಗೆ ನಿಲುಗಡೆ ಮಾಡಿದ್ದ ಸಂದರ್ಭದಲ್ಲಿ ಹಾಗೂ ಚನ್ನಪಟ್ಟಣದಲ್ಲಿ ನೂರಾರು ಅಭಿಮಾನಿಗಳು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಮದ್ದೂರಿನ ಸೋಮನಹಳ್ಳಿ ತಲುಪಿದ ಪಾರ್ಥಿವ ಶರೀರವನ್ನು ಹೆದ್ದಾರಿ ಸಮೀಪದಲ್ಲೇ ಇರುವ ಕಾಫಿ ಡೇ ಸಮೀಪದಲ್ಲಿ ಇರಿಸಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಮತ್ತು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


