ಕಠ್ಮಂಡು: ರಾಜಕೀಯ ಆಸ್ಥಿರತೆಗೆ ಕಾರಣವಾಗಿದ್ದ ಭಾರತದ ನೆರೆಯ ರಾಷ್ಟ್ರ ನೇಪಾಳ ಸಹಜ ಸ್ಥಿತಿಗೆ ಮರಳುತ್ತಿದ್ದು, ಇದೀಗ ಕಫ್ರ್ಯೂವನ್ನು ತೆಗೆದುಹಾಕಲಾಗಿದೆ.
ಜೆನ್ ಝೀ ಪ್ರತಿಭಟನೆ ಹಿಂಸಾರೂಪ ಪಡೆದು ಪ್ರಧಾನಿ ರಾಜೀನಾಮೆ, ಹಲವು ಸಾವು ನೋವು ಸಂಭವಿಸಿ ಪ್ರಕ್ಷುಬ್ದ ಸ್ಥಿತಿಗೆ ತಿರುಗಿದ್ದ ನೇಪಾಳದಲ್ಲಿ ಶಾಂತಿ ನಿಧಾನವಾಗಿ ಮರಳುತ್ತಿದೆ.
ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ರಾತ್ರಿ ಪ್ರಮಾಣವಚನ ಸ್ವೀಕರಿಸಿದ ನಂತರ ನೇಪಾಳದ ರಾಜಧಾನಿ ಕಠಂಡುವಿನಲ್ಲಿ ಬೆಳಿಗ್ಗೆ 5 ಗಂಟೆಯಿಂದ ಕಫ್ರ್ಯೂವನ್ನು ತೆಗೆದುಹಾಕಲಾಗಿದೆ. ಮಧ್ಯಂತರ ಸರ್ಕಾರ ರಚನೆಯಾದ ನಂತರ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ಆದರೆ, ನೇಪಾಳದ ಬೀದಿಗಳಲ್ಲಿ ಸೈನ್ಯದ ಉಪಸ್ಥಿತಿಯು ಇನ್ನೂ ಕೆಲವು ದಿನಗಳವರೆಗೆ ಉಳಿಯುವ ನಿರೀಕ್ಷೆಯಿದೆ.
ಸುಶೀಲಾ ಕರ್ಕಿ ಅವರು ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾದ ನಂತರ, ನೇಪಾಳದ ಜನರು ಭ್ರಷ್ಟಾಚಾರ ಮುಕ್ತ ಆಡಳಿತದ ನಿರೀಕ್ಷೆ ಮಾತ್ರವಲ್ಲದೇ, ಈ ಹಿಂದೆ ಭ್ರಷ್ಟಾಚಾರ ಆರೋಪಗಳಲ್ಲಿ ಭಾಗಿಯಾಗಿರುವ ಮಾಜಿ ಪ್ರಧಾನಿ ಸೇರಿದಂತೆ ಎಲ್ಲಾ ಸಚಿವರ ಆಸ್ತಿಯನ್ನು ತನಿಖೆ ಮಾಡುವುದರ ಜೊತೆಗೆ ನೇಪಾಳವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುವ ಭರವಸೆಯಲ್ಲಿದ್ದಾರೆ.
2,500 ಕೋಟಿ ರೂಪಾಯಿ ನಷ್ಟ :
ನೇಪಾಳದಲ್ಲಿ ಜೆನ್ ಝೀ ಯುವ ಜನರು ನಡೆಸಿದ ಪ್ರತಿಭಟನೆಗಳ ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇದರಲ್ಲಿ 21 ಪ್ರತಿಭಟನಾಕಾರರು, 9 ಖೆ?ದಿಗಳು, 3 ಪೊಲೀಸರು ಮತ್ತು 18 ಇತರ ಜನರು ಸೇರಿದ್ದಾರೆ. ಇನ್ನೊಂದು ಮುಖ್ಯ ಸಂಗತಿ ಅಂದರೆ, ಈ ಹಿಂಸಾಚಾರದಿಂದಾಗಿ ನೇಪಾಳದ ಹೋಟೆಲ್ ಉದ್ಯಮದ ಮೇಲೆ ಅತಿ ದೊಡ್ಡ ಪರಿಣಾಮ ಬೀರಿದ್ದು, ವರದಿಗಳ ಪ್ರಕಾರ, ನೂರಾರು ಹೋಟೆಲ್ಗಳಲ್ಲಿ ನಡೆದ ವಿಧ್ವಂಸಕ ಕೃತ್ಯ, ಲೂಟಿ ಮತ್ತು ಬೆಂಕಿ ಹಚ್ಚುವಿಕೆ ಘಟನೆಗಳಿಂದಾಗಿ ಹೋಟೆಲ್ ಉದ್ಯಮವು ಸುಮಾರು 2,500 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ.
ನೇಪಾಳದಾದ್ಯಂತ ನಡೆದ ಹಿಂಸಾಚಾರ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಘಟನೆಗಳ ಬಗ್ಗೆ ನೇಪಾಳ ಪೊಲೀಸರು ಸಾರ್ವಜನಿಕರು ಶಾಂತಿಯಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದ ವೀಡಿಯೊಗಳು ಅಥವಾ ಸಾಕ್ಷಿಗಳನ್ನು ಹೊಂದಿರುವವರು ಅವುಗಳನ್ನು ನಮ ಜೊತೆ ಹಂಚಿಕೊಳ್ಳಬೇಕು, ಇದರಿಂದ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕಾಗಿ, ಪೊಲೀಸರು ಅಧಿಕೃತ ಇಮೇಲ್ ಅನ್ನು ಬಿಡುಗಡೆ ಮಾಡಿದ್ದು, ಅಂತಹ ಎಲ್ಲಾ ವೀಡಿಯೊಗಳನ್ನು ಕಳುಹಿಸಲು ಮನವಿ ಮಾಡಿದ್ದಾರೆ.
ಮುಂದಿರುವ ಸವಾಲುಗಳು :
ದೇಶಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು, ಆರು ತಿಂಗಳೊಳಗೆ ಸಂಸತ್ತಿನ ಚುನಾವಣೆಗಳನ್ನು ನಡೆಸುವುದು, ಭ್ರಷ್ಟಾಚಾರದ ಸಮಸ್ಯೆಗಳನ್ನು ನಿಭಾಯಿಸುವುದು ಮತ್ತು ಜನರಲ್ ಜೆನ್ ಝೀ ನೇತೃತ್ವದ ಪ್ರಚಾರಕರಲ್ಲಿ ಹೊರಹೊಮ್ಮಿರುವ ವಿವಿಧ ಒತ್ತಡ ಗುಂಪುಗಳನ್ನು ಪ್ರತಿರೋಧಿಸುವುದರಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ನೇಪಾಳವು ಸಮರ್ಥವಾಗಿದೆಯೇ ಎಂಬುದನ್ನು ಮಧ್ಯಂತರ ಸರ್ಕಾರವು ನೋಡಬೇಕಾಗುತ್ತದೆ.
ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳು, ಹಿಂಸಾಚಾರಗಳು ಈಗ ಹತೋಟಿಗೆ ಬಂದಿದ್ದರೂ ಸಹ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ ಅನ್ನೋದು ಸತ್ಯ. ಹೀಗಾಗಿ ನೇಪಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಕೂಡ ನೂತನ ಪ್ರಧಾನಿಯ ಮುಂದಿರುವ ಕಠಿಣ ಸವಾಲಾಗಿದೆ. ಈ ಪ್ರತಿಭಟನಾ ಸಮಯದಲ್ಲಿ ಕನಿಷ್ಠ 11,505 ಕೈದಿಗಳು ವಿವಿಧ ಜೈಲುಗಳಿಂದ ತಪ್ಪಿಸಿಕೊಂಡಿದ್ದಾರೆ. ಜೈಲಿನಿಂದ ಪರಾರಿಯಾಗಿದ್ದ ಸುಮಾರು 1,459 ಕೈದಿಗಳನ್ನು ಭದ್ರತಾ ಪಡೆಗಳು ಮರುಬಂಧಿಸಿದ್ದಾರೆ. ಆದರೆ ಗಮನಾರ್ಹ ಸಂಖ್ಯೆಯ ಕೈದಿಗಳು ಹೊರಗಿರುವುದರಿಂದ, ಅವರು ದೇಶದ ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲನ್ನು ಒಡ್ಡುವ ಸಾಧ್ಯತೆ ಇದೆ. ಹೀಗಾಗಿ ಅಂತಹ ಖೆ?ದಿಗಳನ್ನು ಬಂಧಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವುದು ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಇರುವ ದೊಡ್ಡ ತಲೆನೋವಾಗಿದೆ.
ಹಾಸನ ಗಣೇಶೋತ್ಸವ ದುರಂತ; ಅಯ್ಯೋ ದುರ್ವಿಧಿಯೇ.. ಸಾವನ್ನಪ್ಪಿದ ಎಲ್ಲರೂ ಮನೆಗೆ ಆಧಾರಸ್ತಂಭವಾಗಬೇಕಿದ್ದ ಯುವಕರೇ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


