ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಿದ್ದರಾಮಯ್ಯನವರಿಗಾಗಿ ಸಿದ್ದರಾಮಯ್ಯನವರಿಗೋಸ್ಕರ ಸಿದ್ದರಾಮಯ್ಯನವರೇ ಕೈ ಹಿಡಿದು ಬರೆಸಿದ್ದೇ ಈ ಜಾತಿ ಗಣತಿ ಎಂದು ಶಾಸಕ ಹಾಗೂ ಮಾಜಿ ಸಚಿವ ವಿ ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಲೆ ಏರಿಕೆ, ನಾಯಕತ್ವ ಬದಲಾವಣೆ, ಹನಿ ಟ್ರ್ಯಾಪ್ ನಂಥ ವಿಚಾರಗಳು ತಮ್ಮ ಖುರ್ಚಿಗೆ ಧಕ್ಕೆ ತಂದಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಮತ್ತೆ ಜಾತಿ ಗಣತಿಯ ಹೆಲ್ಮೆಟ್ ಧರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸಮೀಕ್ಷಾ ವರದಿಯ ಸೋರಿಕೆಯಾದ ಭಾಗಗಳ ಪ್ರಕಾರ ಮುಸ್ಲಿಂಮರು ಅತಿದೊಡ್ಡ ಜನ ಸಮುದಾಯ. ಹಿಂದುಗಳನ್ನು ಜಾತಿಯ ಹೆಸರಿನಲ್ಲಿ ಛಿದ್ರಗೊಳಿಸಿ ಮುಸ್ಲಿಮರನ್ನು ಪೋಷಿಸಿ ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ನಡೆಸಿದ್ದಾರೆ. ಈಗಿನ ಲೆಕ್ಕಾಚಾರ ಗಮನಿಸಿದರೆ ಸಿದ್ದರಾಮಯ್ಯರಿಗೆ ಈ ಸಮೀಕ್ಷಾ ವರದಿ ಅನುಷ್ಠಾನಗೊಳಿಸುವ ಯಾವ ಬದ್ಧತೆಯೂ ಇದ್ದಂತಿಲ್ಲ ಎಂದು ವಾಗ್ದಾ ನಡೆಸಿದ್ದಾರೆ.
ಎಲ್ಲ ಸಮಾಜವನ್ನು ಸಂಖ್ಯಾಬಲ ಪ್ರದರ್ಶನಕ್ಕೆ ಬಿಟ್ಟಿರುವ ಸಿದ್ದರಾಮಯ್ಯ ಮೀಸಲಾತಿ ವಂಚಿತರು, ಮೀಸಲಾತಿಯನ್ನು ಅತಿಯಾಗಿ ಭಕ್ಷಿಸಿದ ಹಿಂದುಳಿದ ಜಾತಿಗಳು, ಮೀಸಲಾತಿ ಹೆಚ್ಚಳದ ಅನಿವಾರ್ಯತೆ ಇತ್ಯಾದಿ ವಿಚಾರಗಳ ಚರ್ಚೆ ಬೇಕಿಲ್ಲ ವಿಶೇಷ ಕ್ಯಾಬಿನೆಟ್, ಸಂಪುಟ ಉಪಸಮಿತಿ ಹೆಸರಿನಲ್ಲಿ ಒಂದಿಷ್ಟು ಕಾಲಹರಣ ನಡೆಸುವುದು ಸದ್ಯದ ಲೆಕ್ಕಾಚಾರ. ಹಿಂದುಳಿದ ವರ್ಗಗಳ ಛಾಂಪಿಯನ್ ಎಂದು ಸ್ವಯಂ ಘೋಷಿಸಿಕೊಂಡ ಸಿದ್ದರಾಮಯ್ಯನವರೇ ಈ ವರದಿಯಿಂದ ಹಿಂದುಳಿದ ವರ್ಗದವರಿಗೆ ಆಗುವ ಪ್ರಯೋಜನ ಏನೆಂಬುದರ ಬಗ್ಗೆ ಮೊದಲು ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಅದಕ್ಕಿಂತ ಹೆಚ್ಚಾಗಿ ಒಟ್ಟಾರೆ ಸಮಾಜದ ಮೇಲಿನ ಪರಿಣಾಮವೇನೆಂಬುದು ವಿಶ್ಲೇಷಣೆಗೆ ಒಳಪಡಬೇಕು. ವರದಿಯ ವೈಜ್ಞಾನಿಕತೆ ಹಾಗೂ ಪ್ರಸ್ತುತತೆಯ ಬಗ್ಗೆ ತುರ್ತು ಅಧ್ಯಯನಕ್ಕೆ ಉಭಯಸದನದ ಜಂಟಿ ಸದನ ಸಮಿತಿ ರಚನೆ ಮಾಡಿ. ಸುಮ್ಮನೆ ವರದಿ ಮಂಡಿಸಿ ಗಾಳಿಯಲ್ಲಿ ಗುಂಡು ಹೊಡೆದರೆ ಮನೆಗೆ ಮಗನಲ್ಲ ಎಂಬಂತಾಗುತ್ತದೆಯಷ್ಟೇ ಎಂದು ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


