ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಈಗಿನ ಅನಿರೀಕ್ಷಿತ ಹವಾಮಾನದಲ್ಲಿ ರೈತನೋರ್ವ ತಾನಂದುಕೊಂಡ ಹಾಗೆ ಬೆಳೆ ಬೆಳೆದು ಅದನ್ನು ಗ್ರಾಹಕನಿಗೆ ತಲುಪಿಸಿ ನಿಟ್ಟುಸಿರು ಬಿಡುವುದು ತೀರಾ ಕಡಿಮೆ. ಈ ಸಮಸ್ಯೆಗೆ ಈಗಾಗಲೇ ಪರಿಹಾರವೆಂದು ಹಲವು ವೆಬ್ತಾಣ ಹಾಗೂ ಅಪ್ಲಿಕೇಶನ್ಗಳು ಬಂದಿದ್ದರೂ ಸಹ ಅನ್ನದಾತನ ಮನ ಗೆಲ್ಲುವಲ್ಲಿ ಹೆಚ್ಚೇನೂ ಯಶಸ್ಸು ಕಂಡಿಲ್ಲ.
ಆದರೆ ಸದ್ಯ ತಂತ್ರಜ್ಞಾನ ಕ್ಷೇತ್ರದಲ್ಲಿ ಬೃಹತ್ ಮಟ್ಟದಲ್ಲಿ ಸದ್ದು ಮಾಡುತ್ತಿರುವ ʼಎಐʼ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕೃಷಿ ಕ್ಷೇತ್ರಕ್ಕೆ ಈ ಹಿಂದೆ ಯಾರೂ ನೀಡದ ಕೊಡುಗೆಯನ್ನೇದರೂ ನೀಡಬಹುದಾ ಎಂಬ ನಿರೀಕ್ಷೆ ಕೃಷಿಕರಲ್ಲಿ ಹಾಗೂ ಟೆಕ್ನಾಲಜಿ ಪ್ರಿಯರಲ್ಲಿ ಇತ್ತು.
ಅದರಂತೆ ಬರಹಗಾರ ಕೆಎನ್ ನಾಗೇಶ್ ಅವರು ವಿನೂತನ ಎಐ ಸರ್ಚ್ ಎಂಜಿನ್ ʼಕೆಎನ್ಎನ್ – ಅಗ್ರಿಕ್ವೇರಿʼಯನ್ನು ಚಿರಂತನ ಮೀಡಿಯಾ ಸೊಲ್ಯೂಷನ್ಸ್ ಅಡಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ರೈತನೋರ್ವ ಬೆಳೆಯನ್ನು ಹೇಗೆ ನಿರ್ವಹಣೆ ಮಾಡಬೇಕು, ಯಾವ ಬೆಳೆಗೆ ಯಾವ ಕೀಟ ನಾಶಕ ಬಳಸಬೇಕು, ಎಷ್ಟು ಪ್ರಮಾಣದ ಕೀಟನಾಶಕ ಬಳಸಿದರೆ ಉತ್ತಮ, ಯಾವ ಬೆಳೆಗೆ ಯಾವ ಪೋಷಕಾಂಶ ಅಗತ್ಯ ಹೀಗೆ ಹಲವಾರು ಮಾಹಿತಿಗಳನ್ನು ವಿಸ್ತಾರವಾಗಿ ಈ ಸರ್ಚ್ ಎಂಜಿನ್ ನೀಡಲಿದೆ.
ಈ ಸರ್ಚ್ ಎಂಜಿನ್ ಸಾಮಾನ್ಯರೂ ಸಹ ಕೃಷಿ ಮೈಲಿಗಲ್ಲಿನಂತಹ ಕೃಷಿ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸರ್ಚ್ ಎಂಜಿನ್ ಉಪಯೋಗಿಸಿ ನೀವೇನಾದರೂ ಕೃಷಿ ಮೈಲಿಗಲ್ಲು ಎಂದು ಸರ್ಚ್ ಮಾಡಿದರೆ ಸಾಕು “ಬೆಳೆ ಬೆಳೆದ ಸ್ಥಳದಿಂದ ಅದು ಅಂತಿಮವಾಗಿ ಫಲಾನುಭವಿಯನ್ನು ತಲುಪುವುದನ್ನು ಕೃಷಿ ಮೈಲಿಗಲ್ಲು ಎಂದು ಕರೆಯುತ್ತಾರ್. ಕೃಷಿಕರಿಗೆ ಈ ಕೃಷಿ ಮೈಲಿಗಲ್ಲು ಪ್ರಮುಖ ಅಂಶವಾಗಿದ್ದು, ಇದು ಸುಸ್ಥಿರ ಕೃಷಿ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಪರಿಕಲ್ಪನೆಯಾಗಿದೆ. ಕೃಷಿ ಮೈಲಿಗಲ್ಲನ್ನು ಒಂದು ಉತ್ಪನ್ನ ಅಥವಾ ಸಂಪೂರ್ಣ ಸರಬರಾಜು ಸರಪಳಿಗೆ ಲೆಕ್ಕ ಹಾಕಬಹುದಾಗಿದೆ. ಈ ಪರಿಕಲ್ಪನೆಯು ಆಹಾರ ಉತ್ಪಾದನೆ ಹಾಗೂ ಆಹಾರ ಸರಬರಾಜಿನಲ್ಲಿ ಇರುವ ಕಾರ್ಬನ್ ಫುಟ್ಪ್ರಿಂಟ್ ಅನ್ನು ಕಡಿಮೆ ಮಾಡುವುದರ ಮೇಲೆ ಗಮನ ಹರಿಸಲಿದೆ” ಎಂಬ ನಿಖರವಾದ ಮಾಹಿತಿಯನ್ನು ನೀಡಲಿದೆ.
ಇದಷ್ಟೇ ಅಲ್ಲದೇ ಈ ವಿಷಯದ ಕುರಿತಾಗಿ ಇರುವ ಇತರೆ ಮೂಲಗಳು ಹಾಗೂ ಪುಸ್ತಕಗಳ ಲಿಂಕ್ ಅನ್ನೂ ಸಹ ಈ ಸರ್ಚ್ ಎಂಜಿನ್ ಬಳಕೆದಾರರಿಗೆ ನೀಡಿ ಇನ್ನೂ ಹೆಚ್ಚಿನ ಮಾಹಿತಿ ನೀಡಲಿದೆ.
ನಾಗೇಶ್ ಅವರ ಪ್ರಕಾರ ಮುಂಚೂಣಿಯಲ್ಲಿರುವ ಹೊಸ ಎಐ ಆಪರೇಟಿಂಗ್ ಸಿಸ್ಟಮ್ ಇಮ್ಯಾಜಿಕಾದಲ್ಲಿ ಈ ಸರ್ಚ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಕುರಿತಾದ ಜ್ಞಾನ ಭಂಡಾರವನ್ನು ಹೊಂದಿದೆ, ನಂಬುಗೆಯ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಲಿದೆ.
ಇನ್ನು ಸುಧಾರಿತ ಆಲ್ಗರಿದಂ ( ವಿಷಯವೊಂದರ ಕುರಿತು ಹೇಗೆ ಕಲಿಯಬೇಕು, ದತ್ತಾಂಶವನ್ನು ಹೇಗೆ ವಿಶ್ಲೇಷಿಸಬೇಕು ಹಾಗೂ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಂಪ್ಯೂಟರ್ಗೆ ತಿಳಿಸುವ ಸಲಹೆಗಳ ಗುಚ್ಛವೇ ಆಲ್ಗರಿದಂ ) ಬಳಸಿಕೊಂಡು ಈ ಸರ್ಚ್ ಎಂಜಿನ್ ಏಕಕಾಲಕ್ಕೆ ಸರಣಿ ಪ್ರಶ್ನೆಗಳನ್ನು ಆಲಿಸಿ ಅದಕ್ಕೆ ನಿಖರವಾದ ಮಾಹಿತಿಯನ್ನು ನೀಡಲಿದೆ.
ಅಲ್ಲದೇ ಕೃಷಿ ಕ್ಷೇತ್ರದಲ್ಲಾದ ಇತ್ತೀಚೆಗಿನ ಸಂಶೋಧನೆಗಳ ಕುರಿತೂ ಸಹ ಮಾಹಿತಿ ಹಂಚಿಕೊಳ್ಳುವ ಈ ಎಂಜಿನ್ ಬಳಕೆದಾರರ ನಿರ್ದಿಷ್ಟ ದತ್ತಾಂಶವನ್ನು ಬಳಸಿಕೊಂಡು ಅವರಿಗೆ ಅಗತ್ಯವಾದ ಮಾಹಿತಿಯನ್ನು ತಾನಾಗಿಯೇ ನೀಡಲಿದೆ. ಅಂದರೆ ಬಳಕೆದಾರನ ಆಸಕ್ತಿ, ಆದ್ಯತೆ ಹಾಗೂ ಹಿಂದಿನ ಹುಡುಕಾಟದ ಅಂಶಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಲಿದೆ.
ಕೃಷಿ ಕ್ಷೇತ್ರದ ಅನುಭವಿ ವಿಜ್ಞಾನಿಗಳನ್ನು ಈ ಸರ್ಚ್ ಎಂಜಿನ್ ಅನುಕರಣೆ ಮಾಡಲಿದ್ದು, ಅವರ ಹಾಗೆಯೇ ನಿಖರವಾದ ಸಲಹೆ, ಮಾಹಿತಿಯನ್ನು ಹಂಚಿಕೊಳ್ಳಲಿದೆ ಎನ್ನುತ್ತಾರೆ ನಾಗೇಶ್.
ಈ ಎಂಜಿನ್ ಅನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬಹುದಾಗಿದ್ದು, ಇದರಿಂದ ಹೊಸ ಸಂಶೋಧನೆಗಳನ್ನು ಮಾಡಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸಹಕಾರಿಯಾಗಲಿದೆ. ರೈತರು ಈ ಎಂಜಿನ್ ಬಳಸಿಕೊಂಡು ಉತ್ತಮ ಬೆಳೆ ನಿರ್ವಹಣೆ ಮಾಡಬಹುದಾಗಿದೆ, ಕೃಷಿ ವೆಚ್ಚ ಕಡಿಮೆ ಮಾಡಬಹುದಾಗಿದೆ, ಇಳುವರಿಯನ್ನು ಹೆಚ್ಚಿಸಬಹುದಾಗಿದೆ.
ನಾಗೇಶ್ ಅವರ ಜತೆ ಕೆಲಸ ಮಾಡಿದ ತಜ್ಞರ ಪ್ರಕಾರ ಕಳೆದ 5 ತಿಂಗಳಿನಲ್ಲಿ 10,000 ಜನರು ಈ ಎಂಜಿನ್ ಅನ್ನು ಬಳಕೆ ಮಾಡಿದ್ದಾರಂತೆ.
ತಾವು ಅಭಿವೃದ್ಧಿಪಡಿಸಿದ ಈ ವಿಶಿಷ್ಟ ಎಂಜಿನ್ ಕುರಿತು ಮಾತನಾಡಿದ ನಾಗೇಶ್ “ರೈತರು, ವಿದ್ಯಾರ್ಥಿಗಳು, ಸಂಶೋಧಕರು, ವಿಶ್ವವಿದ್ಯಾನಿಲಯಗಳು ಮತ್ತು ಅಧಿಕಾರಿಗಳಿಗೆ ನಿರ್ದಿಷ್ಟ ಮಾಹಿತಿ ಮತ್ತು ಬೆಳೆ ನಿರ್ವಹಣೆಯ ವೈಜ್ಞಾನಿಕ ಜ್ಞಾನವನ್ನು ಸಹಾಯ ಮಾಡಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಾನು ಈ AI ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಯೋಚಿಸಿದೆ, ಸಾಫ್ಟ್ವೇರ್ ಎಂಜಿನಿಯರ್ಗಳು ಮತ್ತು ತಂತ್ರಜ್ಞರಾದ ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದರು” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


