ನ್ಯೂ ಚಂಡೀಗಢ್: ಮುಲ್ಲಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 20 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್ ಆರಿಸಿಕೊಂಡಿದ್ದು, ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಇದು ಇತ್ತಂಡಗಳು ಟೂರ್ನಿಯಲ್ಲಿ ಮುಖಾಮುಖಿಯಾಗಲಿರುವ ಎರಡನೇ ಪಂದ್ಯವಾಗಿದ್ದು, ಮಳೆ ಕಾರಣದಿಂದಾಗಿ 14 ಓವರ್ಗಳಿಗೆ ಸೀಮಿತವಾಗಿ ನಡೆದಿದ್ದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲನ್ನು ಕಂಡಿತ್ತು. ಪಂಜಾಬ್ ಕಿಂಗ್ಸ್ ಬೌಲಿಂಗ್ ದಾಳಿ ಮುಂದೆ ಮಂಕಾಗಿದ್ದ ಆರ್ಸಿಬಿ ಮೂರನೇ ಬಾರಿಗೆ ತವರಿನಲ್ಲಿ ಮುಖಭಂಗ ಅನುಭವಿಸಿತು.
ಹೀಗೆ ಕಳೆದ ಪಂದ್ಯದಲ್ಲಿ ಸೋತು ಮುಖಭಂಗಕ್ಕೊಳಗಾಗಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ಸದ್ಯ ಐದನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಇಂದಿನ ಪಂದ್ಯ ಗೆಲ್ಲಲೇಬೇಕಾಗಿರಯವ ಆರ್ಸಿಬಿ ತಂಡಕ್ಕೆ ಬದಲಾವಣೆಯನ್ನು ತಂದಿದೆ.
ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡದ ಲಿಯಾಮ್ ಲಿವಿಂಗ್ಸ್ಟನ್ ಅವರನ್ನು ಈ ಪಂದ್ಯದಿಂದ ಕೈಬಿಟ್ಟಿರುವ ಆರ್ಸಿಬಿ ಬದಲಾಗಿ ರೊಮಾರಿಯೊ ಶೆಫರ್ಡ್ ಅವರನ್ನು ತಂಡಕ್ಕೆ ಕರೆತಂದಿದೆ.
ನಾಯಕ ರಜತ್ ಪಾಟಿದಾರ್ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದ್ದು, ಒಳ್ಳೆಯ ನಿರ್ಧಾರ ಎಂದಿದ್ದಾರೆ. ಅಂದಹಾಗೆ ಕಳೆದ ಎರಡು ಪಂದ್ಯಗಳಿಂದಲೂ ಲಿಯಾಮ್ ಲಿವಿಂಗ್ಸ್ಟನ್ ಅವರನ್ನು ತಂಡದಿಂದ ಕೈಬಿಡಿ ಎಂಬ ಕೂಗು ಆರ್ಸಿಬಿ ಅಭಿಮಾನಿಗಳಿಂದಲೇ ಕೇಳಿಬಂದಿತ್ತು. ಹೀಗಾಗಿ ಇಂದು ಲಿವಿಂಗ್ಸ್ಟ್ ಕೈಬಿಟ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


