ಸರ್ಕಾರಿ ನೌಕರರ ಚಲನವಲನ ವಹಿ ನಿರ್ವಹಣೆ ಮತ್ತು ನಗದು ಘೋಷಣೆ ವಹಿ ಕುರಿತು ಹೊಸ ಸುತ್ತೋಲೆಯೊಂದು ಪ್ರಕಟವಾಗಿದೆ. ಸಭ್ಯ ಉಡುಗೆಗಳನ್ನು ತೊಡುವಂತೆ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಪಾಲನೆ ಮಾಡುವಂತೆಯೂ ಸೂಚನೆ ನೀಡಲಾಗಿದೆ.
ಈ ಕುರಿತು ವಿಮಲಾಕ್ಷಿ.ಬಿ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು-ತಪಾಸಣೆ ಮತ್ತು ಸ್ವೀಮರ) ಹೊಸ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಸರ್ಕಾರಿ ನೌಕರರು ಚಲನವಲನ ವಹಿ (Movement Register) ಮತ್ತು ನಗದು ಘೋಷಣೆ ವಹಿ (Cash Declaration Register) ಯನ್ನು ನಿರ್ವಹಣೆ ಮಾಡದಿರುವುದು, ಸಭ್ಯ ಉಡುಗೆ ತೊಡುಗೆಗಳನ್ನು ಧರಿಸದಿರುವ ಕುರಿತು ಸಾರ್ವಜನಿಕರಿಂದ/ ಸಂಘ ಸಂಸ್ಥೆಗಳಿಂದ ಹಲವಾರು ದೂರುಗಳು ಸ್ವೀಕೃತವಾಗುತ್ತಿವೆ.
ಈ ಕುರಿತು ಈ ಹಿಂದೆ ಹಲವು ಸುತ್ತೋಲೆಗಳನ್ನು ಹೊರಡಿಸಲಾಗಿರುತ್ತದೆ. ಆದಾಗ್ಯೂ ಸದರಿ ಸುತ್ತೋಲೆಗಳನ್ನು ಪಾಲನೆ ಮಾಡದಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಿದೆ ಎಂದು ಹೇಳಿದ್ದಾರೆ.
ಚಲನವಲನ ವಹಿ ನಿರ್ವಹಣೆ: ಕಚೇರಿ ವೇಳೆಯಲ್ಲಿ ಸರ್ಕಾರಿ ನೌಕರರ ಚಲನವಲನವನ್ನು ನಿಯಂತ್ರಿಸಲು ಚಲನವಲನ ವಹಿಯ ನಿರ್ವಹಣೆ ಬಗ್ಗೆ ಸುತ್ತೋಲೆಯನ್ನು ದಿನಾಂಕ 12.04.2016, ದಿನಾಂಕ 07.02.2020 ಹಾಗೂ ದಿನಾಂಕ 25.07.2022 ಅನ್ನು ಹೊರಡಿಸಲಾಗಿದ್ದು, ಅದರಂತೆ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಲನವಲನ ವಹಿ (Movement Register) ಯನ್ನು ಕಡ್ಡಾಯವಾಗಿ ನಿರ್ವಹಿಸುವಂತೆ ಸೂಚಿಸಿದೆ.
ಎಲ್ಲಾ ಅಧಿಕಾರಿ/ ಸಿಬ್ಬಂದಿಗಳು ಸರ್ಕಾರಿ ಕಚೇರಿಗಳ ನಿಗದಿತ ಪ್ರಾರಂಭ ಸಮಯವಾದ ಬೆಳಗ್ಗೆ 10.10 ಗಂಟೆಗೆ ಕಾರ್ಯಾಲಯಕ್ಕೆ ಹಾಜರಾಗಬೇಕು ಹಾಗೂ ಕಛೇರಿ ಸಮಯ ಮುಗಿಯುವವರೆಗೂ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ಹಾಜರಿರಬೇಕು. ಕಚೇರಿ ಸಮಯದಲ್ಲಿ ಅಧಿಕೃತ ಕಾರ್ಯಕ್ಕಾಗಿ ಹೊರ ಹೋಗಬೇಕಾದ್ದಲ್ಲಿ:
- ಚಲನವಲನ ವಹಿಯಲ್ಲಿ ಹೊರ ಹೋಗುವ ಕಾರಣ/ ಉದ್ದೇಶವನ್ನು ದಾಖಲಿಸಬೇಕು.
- ಮೇಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು.
- ಹೊರ ಹೋಗುವ ಸಮಯ ಹಾಗೂ ಹಿಂದಿರುಗಿದ ಸಮಯವನ್ನು ಸಹಿ ಮತ್ತು ದಿನಾಂಕದೊಂದಿಗೆ ದಾಖಲಿಸಬೇಕು.
- ಚಲನವಲನ ವಹಿಯಲ್ಲಿ ದಾಖಲು ಮಾಡದೇ ಕರ್ತವ್ಯ ಸ್ಥಳದಲ್ಲಿ ಹಾಜರಿಲ್ಲದ ಅಧಿಕಾರಿ/ ಸಿಬ್ಬಂದಿಗಳನ್ನು ಅನಧಿಕೃತವಾಗಿ ಗೈರು ಹಾಜರಿ ಎಂದು ಪರಿಗಣಿಸುವುದು ಮತ್ತು ಮೇಲಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳುವುದು.
- ಕಚೇರಿ ಸಮಯದಲ್ಲಿ ಅನಧಿಕೃತವಾಗಿ ಹೊರ ಹೋಗುವ ನೌಕರರನ್ನು ಮೇಲಾಧಿಕಾರಿಗಳು ನಿಯಂತ್ರಿಸುವುದು.
ನಗದು ಘೋಷಣೆ ವಹಿ (Cash Declaration Register): ನಗದು ಘೋಷಣೆ ವಹಿಯನ್ನು ನಿರ್ವಹಿಸುವ ಕುರಿತು ದಿನಾಂಕ 04.02.2022 ಮತ್ತು 14.03.2022 ರಲ್ಲಿ ಸುತ್ತೋಲೆಗಳನ್ನು ಹೊರಡಿಸಲಾಗಿದೆ.
ಸರ್ಕಾರಿ ನೌಕರರು ಅಧಿಕೃತ ಸಹಿ ಹಾಜರಾತಿ ವಹಿ/ ಎಎಂಎಸ್ ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿದ ತಕ್ಷಣ, ಕಛೇರಿಗೆ ತಂದ ನಗದು ಮೊತ್ತವನ್ನು ನಗದು ಘೋಷಣೆ ವಹಿಯ ನಿಗದಿತ ನಮೂನೆಯಲ್ಲಿ ಸಹಿಯೊಂದಿಗೆ ಘೋಷಿಸತಕ್ಕದ್ದು.
ಮೇಲಾಧಿಕಾರಿಗಳು ತಮ್ಮ ಎಲ್ಲಾ ಸಿಬ್ಬಂದಿಗಳು ನಗದು ಘೋಷಣಾ ವಹಿಯಲ್ಲಿ ನಮೂದಿಸುತ್ತಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸಲು ಸೂಚಿಸಿದೆ.
ಸಭ್ಯ ಉಡುಗೆ ತೊಡುಗೆಗಳನ್ನು ಧರಿಸುವುದು: ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ/ ನೌಕರರುಗಳು ಸರ್ಕಾರದ ಘನತೆಗೆ ಧಕ್ಕೆ ಬಾರದಂತೆ ಮತ್ತು ಶೋಭೆಯನ್ನು ತರುವಂತಹ ಸಭ್ಯ ಉಡುಗೆ ತೊಡುಗೆಗಳನ್ನು ಮಾತ್ರ ಧರಿಸಬೇಕೆಂದು ಸರ್ಕಾರವು ಪರಿಷ್ಕೃತ ಸುತ್ತೋಲೆಯನ್ನು ದಿನಾಂಕ 16.09.2013ರಂದು ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ ಎಂದು ತಿಳಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


