ಮೈಸೂರು: ಇಷ್ಟು ದಿನ ಬೇರೆ ಪಕ್ಷದ ಶಾಸಕರ ಜೊತೆಗೂಡಿ ಸಮ್ಮಿಶ್ರ ಸರ್ಕಾರ ನಡೆಸುವುದನ್ನು ನೋಡಿದ್ದೆವು. ಆದರೆ ಈಗ ಒಂದೇ ಪಕ್ಷದಲ್ಲಿ ಶಾಸಕರನ್ನು ಖರೀದಿಸಿ ಸಮ್ಮಿಶ್ರ ಸರ್ಕಾರದಂತೆ ಆಡಳಿತ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು, ಕಾಂಗ್ರೆಸ್ ನಲ್ಲಿ A, B, C ಎಂದು ಮೂರು ಗ್ರೂಪ್ ಇದೆ. A ಗ್ರೂಪ್ನಿಂದ Bನ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದೀಗ C ಗ್ರೂಪ್ ಬೇರೆ ಸೃಷ್ಟಿಯಾಗಿದೆ. ಒಬ್ಬರಿಗೆ 15-20 ಇದ್ದ ಸಂಖ್ಯೆ ಈಗ 65ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ಒಬ್ಬ ಶಾಸಕರಿಗೆ 50 ರಿಂದ ಶುರು ಆಗಿದೆಯಂತೆ.
ಮುಂದೆ ಇದು ಎಷ್ಟಕ್ಕೆ ಹೋಗಿ ನಿಲ್ಲುತ್ತೆ ಗೊತ್ತಿಲ್ಲ. ಶಾಸಕರನ್ನು ಖರೀದಿಸುವ ಕೆಲಸ ಸೃಷ್ಟಿಯಾಗಿದೆ. ಆದರೆ ರೈತರ ಬೆಳೆ ಖರೀದಿಸುವ ಕೇಂದ್ರವಿಲ್ಲ, ಇದು ಬೇಸರದ ಸಂಗತಿ. ಶಾಸಕರನ್ನು ಖರೀದಿಸುವ ಕೇಂದ್ರ ದೆಹಲಿಯಲ್ಲಿಲ್ಲ ಬೆಂಗಳೂರಿನಲ್ಲಿದೆ. ಏಕೆಂದರೆ ಕಾಂಗ್ರೆಸ್ ಹೈಕಮಾಂಡ್ ಡೆಡ್ ಆಗಿದೆ. ಇಷ್ಟು ದಿನ ಬೇರೆ ಪಕ್ಷದ ಶಾಸಕರ ಜೊತೆಗೂಡಿ ಸಮ್ಮಿಶ್ರ ಸರ್ಕಾರ ನಡೆಸುವುದನ್ನು ನೋಡಿದ್ದೆವು. ಈಗ ಒಂದೇ ಪಕ್ಷದಲ್ಲಿ ಶಾಸಕರನ್ನು ಖರೀದಿಸಿ ಸಮ್ಮಿಶ್ರ ಸರ್ಕಾರದಂತೆ ಆಡಳಿತ ನಡೆಸಲಾಗುತ್ತಿದೆ ಎಂದು ಲೇವಡಿ ಮಾಡಿದರು.
ಇನ್ನು ರಾಜ್ಯ ಕಾಂಗ್ರೆಸ್ ದಲಿತ ನಾಯಕರು ಶುಗರ್ ಲೆಸ್ ಇದ್ದ ಹಾಗೆ ಎಂದು ವ್ಯಂಗ್ಯವಾಡಿದ ಅವರು, ದಲಿತ ನಾಯಕರು ಅಧಿಕಾರ ವಂಚಿತರಾಗಿರುವುದು ಸಿದ್ದರಾಮಯ್ಯನ ತಾಕತ್ತಿನಿಂದ. ದಲಿತ ನಾಯಕರ ಪರಿಸ್ಥಿತಿ ಶುಗರ್ ಲೆಸ್, ಪವರ್ ಲೆಸ್ ತರ ಆಗಿದೆ. ಕಳೆದ 2013ರಲ್ಲೇ ಜಿ ಪರಮೇಶ್ವರ್ ಸಿಎಂ ಆಗಬೇಕಿತ್ತು. ಆದರೆ ಸಿದ್ದರಾಮಯ್ಯ ಅವರ ಕ್ಷೇತ್ರವನ್ನೇ ಮುಗಿಸಿಬಿಟ್ಟರು ಎಂದು ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಆಕ್ರೋಶ ಹೊರಹಾಕಿದರು.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಸ ಹೊಡೆಯಲು ಅಧ್ಯಕ್ಷರಾಗಿದ್ದಾರಾ? ಎಂದು ವ್ಯಂಗ್ಯವಾಡಿದ ಅವರು, ಖರ್ಗೆ ನನ್ನ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ನಿರ್ಧರಿಸುತ್ತೆ ಎನ್ನುತ್ತಾರೆ. ಹಾಗಾದರೆ ನೀವೇನು ಕಸ ಹೊಡೆಯಲು AICC ಅಧ್ಯಕ್ಷರಾಗಿದ್ದೀರಾ? ಕಾಂಗ್ರೆಸ್ನ ಕೊನೆಯ ಮೊಳೆ ಹೊಡೆಯಲು ಖರ್ಗೆಗೆ ಅಧಿಕಾರ ನೀಡಿದ್ದಾರಾ.? ಮುಳುಗುತ್ತಿರುವ ಕಾಂಗ್ರೆಸ್ಗೆ ದಲಿತರಿಗೆ ಅಧಿಕಾರ ಕೊಟ್ಟು, ದಲಿತರಿಂದ ಕಾಂಗ್ರೆಸ್ ಮುಳುಗಿತ್ತು ಎಂದು ಹೇಳಿ ದಲಿತರಿಗೆ ಕೆಟ್ಟ ಹೆಸರು ತರಲು ಮುಂದಾಗಿದ್ದೀರಾ? ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದರು.
ಮೈಸೂರು: ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


