ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣವೂ ಒಳ್ಳೆಯ ರಾಜಕಾರಣದ ಲಕ್ಷಣವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯಕರ ರಾಜಕೀಯ ಮಾಡಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೊಟ್ಟೆ ಎಸೆತದಿಂದ ಗಂಭೀರ ಗಾಯಗೊಂಡಿರುವ ಶಾಸಕ ಮುನಿರತ್ನ ಕೆ.ಸಿ.ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಸಿ.ಎನ್.ಮಂಜುನಾಥ್ ಅವರುನ ಮುನಿರತ್ನ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮುನಿರತ್ನ ಅವರನ್ನು ಪರೀಕ್ಷಿಸಿದ್ದೇನೆ. ಸಾಮಾನ್ಯವಾಗಿ ತಲೆಗೆ ಪೆಟ್ಟು ಬಿದ್ದಾಗ ವಾಂತಿ ಮತ್ತು ತಲೆ ಸುತ್ತು ಬರುವುದು ಸಹಜ. ಮುನಿರತ್ನ ಅವರ ತಲೆಯ ಹಿಂಭಾಗದಲ್ಲಿ ತೀವ್ರ ಪೆಟ್ಟು ಬಿದ್ದಿದೆ. ಕೆಮಿಕಲ್ ಮಾದರಿ ಪದಾರ್ಥದಿಂದ ಹೊಡೆದಿದ್ದಾರೆ. ಹೀಗಾಗಿ ಫಿಜಿ಼ಶಿಯನ್ಗೆ ಸಿಟಿ ಸ್ಕ್ಯಾನ್ ಮಾಡಲು ತಿಳಿಸಿದ್ದೇನೆ. ಸ್ಕ್ಯಾನ್ ಮಾಡಿದ ಬಳಿಕ ಎಲ್ಲಾ ಗೊತ್ತಾಗುತ್ತದೆ ಎಂದು ಹೇಳಿದರು.
ನಮ್ಮ ದೇಶಕ್ಕೆ ಸಂವಿಧಾನ ಬಂದು 75 ವರ್ಷಗಳು ಕಳೆದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಗೌರವ ನೀಡಬೇಕು. ಚುನಾವಣೆಯಲ್ಲಿ ಸ್ಪರ್ಧಾತ್ಮಕವಾಗಿದ್ದು, ಸೋಲು-ಗೆಲುವು ಸಹಜ. ಯಾರೇ ಆಗಲಿ ಸಂವಿಧಾನಕ್ಕೆ ಬೆಲೆ ಮತ್ತು ಗೌರವ ನೀಡುವಂತೆ ನಡೆದುಕೊಳ್ಳಬೇಕು. ಹೀಗಿದ್ದರೂ ಇಂತಹ ಘಟನೆಗಳು ನಡೆದಿದೆ ಎಂದರೆ ಇದು ಬಹಳ ಖಂಡನೀಯವಾಗಿದೆ. ಎಲ್ಲೋ ಒಂದು ಕಡೆ ಸರ್ಕಾರದ ವ್ಯವಸ್ಥೆ ಹಾದಿ ತಪ್ಪುತ್ತಿದೆ ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


