ಕರ್ನಾಟಕ ಸರ್ಕಾರ ಕೈಗೊಂಡಿದ್ದ ಜಾತಿ ಗಣತಿ ಅಥವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025 ಮುಕ್ತಾಯಗೊಂಡಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ಗೌರವಧನವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈಗ ಸಿಬ್ಬಂದಿಗೆ ಬದಲಿ ರಜೆಯನ್ನು ನೀಡಿ ಆದೇಶಿಸಲಾಗಿದೆ.
ಈ ಕುರಿತು ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರವುಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದವರು ನಡೆಸಿದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025ರ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಿದವರಿಗೆ ಬದಲಿ ರಜೆಯನ್ನು ಮಂಜೂರು ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಪ್ರಸ್ತಾವನೆ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದವರು ದಿನಾಂಕ 04.10.2025 ರಿಂದ ದಿನಾಂಕ 31.10.2025 ರವರೆಗೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025ಯನ್ನು ನಡೆಸಿದ್ದಾರೆ.
ಸದರಿ ಸಮೀಕ್ಷೆಯ ಕಾರ್ಯದಲ್ಲಿ ಮಂಡಳಿಯ ‘ಬಿ’ ಮತ್ತು ‘ಸಿ’ ದರ್ಜೆಯ ಸುಮಾರು 1000ಕ್ಕೂ ಹೆಚ್ಚು ನೌಕರರು ಭಾಗವಹಿಸಿರುತ್ತಾರೆ. ಮುಂದುವರೆದು, ಸದರಿ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ರಜಾ ದಿನಗಳಲ್ಲಿ (2ನೇ/ 4ನೇ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಲ್ಲಿ) ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಕರ್ನಾಟಕ ವಿದ್ಯುತ್ ನಿಗಮವು ತನ್ನ ಸಿಬ್ಬಂದಿಗಳಿಗೆ 5 ದಿನಗಳಿಗೆ ಸೀಮಿತಗೊಳಿಸಿ ಬದಲಿ ರಜೆಯನ್ನು ಮಂಜೂರು ಮಾಡಿ ಆದೇಶಿಸಿದಂತೆ, ಮಂಡಳಿಯೂ ಸಹ ತನ್ನ ಸಿಬ್ಬಂದಿಗಳಿಗೆ ಬದಲಿ ರಜೆಯನ್ನು ಮಂಜೂರು ಮಾಡುವ ಕುರಿತು ಮನವಿಯನ್ನು ಸಲ್ಲಿಸಿರುತ್ತಾರೆ.
ಈ ಸಂಬಂಧ, ದಿನಾಂಕ 04.10.2025 ರಿಂದ ದಿನಾಂಕ 31.10.2025 ರವರೆಗೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025ರಲ್ಲಿ ಕಾರ್ಯನಿರ್ವಹಿಸಿದ ಮಂಡಳಿಯ ಸಿಬ್ಬಂದಿಗಳಿಗೆ ಷರತ್ತುಗಳಿಗೆ ಒಳಪಡಿಸಿ ಈ ಮುಂದಿನಂತೆ ರಜೆ ನೀಡಿ ಆದೇಶಿಸಿದೆ.
ಆದೇಶದ ವಿವರ: ಈ ಮೇಲೆ ವಿವರಿಸಿದಂತೆ ದಿನಾಂಕ 04.10.2025 ರಿಂದ ದಿನಾಂಕ 31.10.2025 ರವರೆಗೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025 ರಲ್ಲಿ ಕಾರ್ಯನಿರ್ವಹಿಸಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿಬ್ಬಂದಿಗಳಿಗೆ ಷರತ್ತಿಗೊಳಪಡಿಸಿ 5 ದಿನಗಳಿಗೆ ಸೀಮಿತಗೊಳಿಸಿ ಬದಲಿ ರಜೆಯನ್ನು ಮಂಜೂರು ಮಾಡುವಂತೆ ಆದೇಶಿಸಿದೆ.
- ಮಂಜೂರು ಮಾಡಿರುವ ಬದಲಿ ರಜೆಯನ್ನು 20250 ವಿತ್ತೀಯ ವರ್ಷದೊಳಗೆ ವಿನಿಯೋಗಿಸಿಕೊಳ್ಳತಕ್ಕದ್ದು.
- ರಜಾ ಸೌಲಭ್ಯ ಪಡೆಯುವ ಅಧಿಕಾರಿ/ ನೌಕರರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025ರ ಹಾಜರಾತಿ ಪಟ್ಟಿಯನ್ನು ಕಡ್ಡಾಯವಾಗಿ ತಮ್ಮ ಬಟವಾಡೆ ಅಧಿಕಾರಿಗಳಿಗೆ ಸಲ್ಲಿಸಿ ರಜೆಯನ್ನು ಪಡೆಯುವುದು.
ಜಾತಿ ಗಣತಿಯನ್ನು ಕರ್ನಾಟಕ ಸರ್ಕಾರ ದಸರಾ ರಜೆ ಅವಧಿಯಲ್ಲಿ ಕೈಗೊಂಡಿತ್ತು. ಆದ್ದರಿಂದ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ದಸರಾ ರಜೆಯ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಸಿಬ್ಬಂದಿಗಳಿಗೆ ಬದಲಿ ರಜೆಯನ್ನು ಮಂಜೂರು ಮಾಡಲಾಗಿದೆ.
ಜಾತಿ ಗಣತಿ ಅಕ್ಟೋಬರ್ 31ಕ್ಕೆ ಮುಕ್ತಾಯಗೊಂಡಿದೆ. ಆದರೆ ಹಿಂದುಳಿದ ವರ್ಗಗಳ ಆಯೋಗದವರು ನಡೆಸಿದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2025ರ ವರದಿ ಇನ್ನೂ ಸರ್ಕಾರದ ಕೈ ಸೇರಿಲ್ಲ.
ಆದರೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ಗಣತಿ ವರದಿ ಎಂದು ಕೆಲವು ಅಂಕಿ ಅಂಶಗಳನ್ನು ಹಾಕಲಾಗುತ್ತಿದೆ. ಇವು ನಕಲಿಯಾಗಿದ್ದು ಈ ಮಾದರಿ ಅಂಕಿ ಅಂಶಗಳನ್ನು ಶೇರ್ ಮಾಡಿದರೆ, ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಆಯೋಗ ಈಗಾಗಲೇ ಎಚ್ಚರಿಕೆ ಕೊಟ್ಟಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


