ಬೆಂಗಳೂರು (ನವೆಂಬರ್ 28, 2025): ನವೆಂಬರ್ 25ರಂದು ಇನ್ಕಮ್ ಟ್ಯಾಕ್ಸ್ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಬೆಂಗಳೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೇ ಸಿನಿಮಾ ಕೆಲಸಗಳಲ್ಲಿ ನಿರತರಾಗಿರುವ ಯಶ್ ಈ ಕಾರ್ಯಕ್ರಮಕ್ಕೆ ಪತ್ನಿ ಸಮೇತ ಹಾಜರಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಕಾರ್ಯಕ್ರಮಕ್ಕೆ ಬಂದದ್ದು ಖುಷಿಯಾಯಿತು. ಬಹಳ ದಿನಗಳಿಂದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ, ಜನರ ಜತೆ ಬೆರೆಯಲು ಸಹ ಸಾಧ್ಯವಾಗಿರಲಿಲ್ಲ. ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದರು.
ಟ್ಯಾಕ್ಸ್ ಕಟ್ಟುವ ಕುರಿತು ಮಾತನಾಡಿದ ಯಶ್ ಟ್ಯಾಕ್ಸ್ ಪಾವತಿಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿರುವುದನ್ನು ಕೇಳಿ ಖುಷಿಯಾಯಿತು. ಆದಷ್ಟು ಬೇಗ ಮೊದಲ ಸ್ಥಾನಕ್ಕೇರುವುದು ನಮ್ಮ ಗುರಿಯಾಗಬೇಕು. ಭಾಷೆ ವಿಷಯಕ್ಕೆ ಬಂದರೆ ಇಲ್ಲಿ ಕನ್ನಡ ಬರದವರಿಗೂ ಸಹ ಸ್ಪರ್ಧೆ ಇಟ್ಟು ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಬಹಳ ಜನರಿಗೆ ಕನ್ನಡ ಗೊತ್ತಿಲ್ಲ ಎನಿಸುತ್ತದೆ. ನನಗನಿಸುವುದು ಎಲ್ಲೇ ಹೋದರೂ ಅಲ್ಲಿನ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟರೆ ಅದರ ಹತ್ತು ಪಟ್ಟು ತಿರುಗಿಬರುತ್ತದೆ. ಅದನ್ನೇ ಕರ್ನಾಟಕ, ಕನ್ನಡ ನನಗೆ ಕಲಿಸಿದೆ. ನೀವೆಲ್ಲ ಕನ್ನಡ ಕಲಿಯಲು ಯತ್ನಿಸಿದ್ದು ಖುಷಿ ಎಂದರು.
ಅಲ್ಲದೇ ಕರ್ನಾಟಕಕ್ಕೆ ಬೇರೆ ಕಡೆಯಿಂದ ಬಂದವರು ಇಲ್ಲಿನ ಜನರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ. ಅದು ನಮ್ಮ ಸಂಸ್ಕೃತಿಯಾಗಿದ್ದು, ನಾವೆಲ್ಲರೂ ಬೇರೆಯವರಿಗೆ ಕನ್ನಡ ಕಲಿಸೋಣ. ಎಲ್ಲರಲ್ಲೂ ಒಂದು ಮನವಿ ಬಲವಂತವಾಗಿ ಯಾರಿಗೂ ಏನನ್ನೂ ಕಲಿಸಲು ಸಾಧ್ಯವಿಲ್ಲ. ಬೇರೆಯವರು ಕನ್ನಡ ಕಲಿಯಲಿ ಎಂದು ಹೊಡೆದಾಡುವ ಅಥವಾ ಗಲಾಟೆ ಮಾಡುವ ಬದಲು ಕನ್ನಡ ಗೊತ್ತಿರದಿದ್ದರೆ ಇಲ್ಲಿ ಕಷ್ಟ ಎನ್ನುವ ಭಾವನೆ ಬರುವಂತೆ ಮಾಡಬೇಕು. ನನ್ನ ಪ್ರಕಾರ ಎಲ್ಲ ಭಾಷೆ ಹೊಟ್ಟೆ ತುಂಬಿಸುತ್ತವೆ. ಎಲ್ಲ ಕಡೆ ಕನ್ನಡಕ್ಕೆ ಪ್ರಾಮುಖ್ಯತೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಇನ್ನು ಯಶ್ ಇಷ್ಟೆಲ್ಲ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಬಲವಂತವಾಗಿ ಕಲಿಸುವುದು ಬೇಡ ಎಂಬ ವಿಡಿಯೊವನ್ನಷ್ಟೇ ಹಂಚಿಕೊಂಡಿರುವ ಕೆಲವರು ಯಶ್ ಹೀಗೆ ಹೇಳಬಾರದಿತ್ತು ಎಂದು ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


