ಚನ್ನಪಟ್ಟಣ: ಜಾತ್ಯಾತೀತ ಜನತಾ ದಳದ ಕಾರ್ಯಕರ್ತರ ಜೊತೆಗೂಡಿ ಇಡೀ ರಾಜ್ಯ ಸರ್ಕಾರವನ್ನು ಎದುರಿಸಿದ್ದೇನೆ. ಯಾರೂ ಕೂಡ ನನ್ನ ಮೇಲೆ ಅನುಮಾನ ಪಡುವ ಅಗತ್ಯವಿಲ್ಲ. ಮುಂದೆಯೂ ನಿಮ್ಮ ಜೊತೆ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ.
ರಾಮನಗರದಲ್ಲಿಂದು ನಡೆದ ಕೃತಜ್ಞತಾ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಈ ಉಪಚಾನಾವಣೆಯಲ್ಲಿ ತಾವುಗಳು ತೋರಿಸಿದ ಪ್ರೀತಿಗೆ ನಿಮ್ಮ ಪಾದದ ಮೇಲೆ ಆಣೆ ಮಾಡಿ ನಿಮಗೆ ಧನ್ಯವಾದ ಹೇಳುತ್ತೇನೆ ಎಂದರು.
ಈ ಜಿಲ್ಲೆಯಿಂದ ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸಂದಿಗ್ಧ ಕಾಲದಲ್ಲಿ ಮಂಡ್ಯ ಕ್ಷೇತ್ರದ ಜನತೆ ತೋರಿಸಿದ ಪ್ರೀತಿಯಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರು ಕೂಡ ಆಗಿದ್ದಾರೆ. ಇದಕ್ಕೆ ಮಂಡ್ಯದ ಜನರು ಹಾಗೂ ರಾಮನಗರ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.
ಕಳೆದ 2019ರ ಲೋಕಸಭೆ ಚುನಾವಣೆ ಕಾರಣ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಬೇಕು ಎಂದು ನಿಮ್ಮಗಳ ಅಪೇಕ್ಷೆ ಇತ್ತು. ಆದರೆ ಕೆಲವು ಕಾರಣಗಳಿಂದ ನನಗೆ ಅಲ್ಲೂ ಕೂಡ ಹಿನ್ನಡೆಯಾಯಿತು. ಇದಕ್ಕೆ ಜನಸಾಮನ್ಯರು ಕಾರಣ ಅಲ್ಲ. ಈಗ ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.
2004ರಲ್ಲಿ ಜೆಡಿಎಸ್ಗೆ 58 ಸ್ಥಾನಗಳು ಬಂದಿದ್ದವು. ಆ ಸಮಯದಲ್ಲಿ ದೊಡ್ಡ ದೊಡ್ಡ ಸಮುದಾಯದ ನಾಯಕರು ಪಕ್ಷದಲ್ಲಿ ಇದ್ದರು. ಆದರೆ ಅವರು ಪಕ್ಷ ತ್ಯಜಿಸಿದ ನಂತರ ಏಕಾಂಗಿಯಾಗಿ ಸನ್ಮಾನ್ಯ ಕುಮಾರಣ್ಣನವರು ಕಳೆದ 20-25 ವರ್ಷಗಳಿಂದ ಪಕ್ಷದ ಉಸ್ತುವಾರಿ ನೋಡಿಕೊಂಡಿದ್ದಾರೆ.
ಸಮೃದ್ಧ ಕರ್ನಾಟಕವನ್ನು ಮಾಡಬೇಕು ಎಂದು ಕುಮಾರಸ್ವಾಮಿ ತಮ್ಮ ಆರೋಗ್ಯದ ಮೇಲೂ ಗಮನಕೊಡದೆ ದುಡಿಯುತ್ತಿದ್ದಾರೆ. ದೇವೇಗೌಡರ ನೀರಾವರಿ ಕೊಡುಗೆ ರಾಜ್ಯಕ್ಕೆ ತುಂಬಾ ಉಪಯೋಗವಾಗಿದೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


