“ಎಂಇಎಸ್ನವರೂ ಕನ್ನಡಿಗರೇ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಅದನ್ನು ಮಟ್ಟ ಹಾಕುತ್ತೇವೆ. ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ, ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಭಾಗ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
70ನೇ ಕನ್ನಡ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಬೆಳಗಾವಿಯಲ್ಲಿ ಶನಿವಾರ ಕರಾಳ ದಿನಾಚರಣೆ ಆಚರಿಸಿದ್ದಾರೆ. ಕರಾಳ ದಿನಾಚರಣೆಯ ಬಂದೋಬಸ್ತ್ಗೆ ಹೋಗಿದ್ದ ಪೊಲೀಸ್ ಅಧಿಕಾರಿ ಸೆಲ್ಫೀ ತೆಗೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಂಇಎಸ್ ಬೆಳಗಾವಿಯಲ್ಲಿ ಶನಿವಾರ ಕರಾಳ ದಿನಾಚಣೆ ಆಚರಿಸಲು ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೆ ಎಂಇಎಸ್ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನಗರದ ವಿವಿಧ ರಸ್ತೆಯಲ್ಲಿ ಮೆರಣಿಗೆ ಮಾಡಿದ್ದಾರೆ.
ಮಕ್ಕಳನ್ನು ಸಹ ಈ ಮೆರವಣಿಗೆಗೆ ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ವೈಶಾಲಿ ಭಾತಕಾಂಡೆ ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಕನ್ನಡ ಪರ ಸಂಘಟನೆಗಳ ಮನವಿಗೆ ಸ್ಪಂದಿಸಿ, ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದರು.
ಆದರೆ ಎಂಇಎಸ್ ಮೆರವಣಿಗೆಯಲ್ಲಿ ಇರುವುದಾದರೆ ಮಹಾರಾಷ್ಟ್ರದಲ್ಲಿ ಇಲ್ಲವೇ ಜೈಲಿನಲ್ಲಿ ಎಂಬ ಘೋಷಣೆಗಳನ್ನು ಕೂಗಲಾಗಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಲಾಗಿದೆ.
ಬಾಂಧುರ್ ಗಲ್ಲಿ, ಮುಖ್ಯ ಅಂಚೆ ಕಚೇರಿ ವೃತ್ತ, ರಾಮಲಿಂಗಖಿಂಡ ಗಲ್ಲಿ ಮುಂತಾದ ಕಡೆ ಎಂಇಎಸ್ ಮೆರವಣಿಗೆ ನಡೆಸಿದೆ. ರೈಲ್ವೆ ಮೇಲ್ಸೇತುವೆ ಬಳಿ ಇರುವ ಮರಾಠ ಮಂದಿರದಲ್ಲಿ ಎಂಇಎಸ್ ಮುಖಂಡರು ಸಭೆಯನ್ನು ಸಹ ನಡೆಸಿದ್ದಾರೆ.
ಎಂಇಎಸ್ ಮೆರವಣಿಗೆ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಪ್ರತಿಕ್ರಿಯೆ ನೀಡಿದ್ದು, ಎಂಇಎಸ್ ಮೆರವಣಿಗೆಗೆ ಅನುಮತಿ ನೀಡಿರಲಿಲ್ಲ. ಅದರ ನಾಯಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಎಂಇಎಸ್ ಮುಖಂಡರ ಜೊತೆ ಸೆಲ್ಫೀ: ಎಂಇಎಸ್ ಮೆರವಣಿಗೆ ಭದ್ರತೆಗೆ ನಿಯೋಜನೆಗೊಂಡಿದ್ದ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಜೆ.ಎಂ.ಕಾಲಿಮಿರ್ಚಿ ಎಂಇಎಸ್ ನಾಯಕರ ಜೊತೆ ಸೆಲ್ಫೀ ತೆಗೆದುಕೊಂಡ ವಿಡಿಯೋ, ಫೋಟೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, “ಎಂಇಎಸ್ ಮುಖಂಡರ ಜತೆಗೆ ಸೆಲ್ಫಿ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸೆಲ್ಫೀ ತೆಗೆದುಕೊಂಡ ಮಾತ್ರಕ್ಕೆ ಕನ್ನಡ ವಿರೋಧಿ ಮನಃಸ್ಥಿತಿ ಎಂದು ಭಾವಿಸಲಾಗದು. ನಾಡಿನ ಬದ್ಧತೆ, ತತ್ವಕ್ಕೆ ವಿರುದ್ಧವಾಗಿ ಯಾವುದೇ ಅಧಿಕಾರಿ ಹೋದರೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


