ಶಿವಮೊಗ್ಗ: ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ 22 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಒಟ್ಟು ಫಲಿತಾಂಶ ಶೇ. 85.19ಕ್ಕೆ ಹೆಚ್ಚಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಸರ್ಕಾರದ ಮೂರು ಪರೀಕ್ಷೆಗಳ ಮಾದರಿಯನ್ನು ಕೇಂದ್ರ ಸರ್ಕಾರ ಅನುಸರಿಸಲಾರಂಭಿಸಿದ್ದು, ಮುಂದಿನ ವರ್ಷದಿಂದ ಸಿಬಿಎಸ್ಸಿಯಲ್ಲೂ ಎರಡು ಪರೀಕ್ಷೆಗಳನ್ನು ನಡೆಸುವುದಾಗಿ ಪ್ರಕಟಿಸಿದೆ ಎಂದರು.
ರಾಜ್ಯ ಸರ್ಕಾರ ಮೂರು ಪರೀಕ್ಷೆಗಳ ಪದ್ದತಿ ಜಾರಿಗೊಳಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ತಗ್ಗಿದೆ. ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಗೆ ಒಂದು ಲಕ್ಷ ಮಂದಿ ನೋಂದಣಿಯಾಗಿದ್ದು, ಅವರಲ್ಲಿ 72 ಸಾವಿರ ಮಂದಿ ಉತ್ತೀರ್ಣರಾಗಿದ್ದಾರೆ.
ಅಂಕಗಳ ಸುಧಾರಣೆಗೆ 17,395 ವಿದ್ಯಾರ್ಥಿಗಳು ಹೆಚ್ಚುವರಿ ಪರೀಕ್ಷೆ ತೆಗೆದುಕೊಂಡಿದ್ದು, 12 ಸಾವಿರ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿಕೊಂಡಿದ್ದಾರೆ. ಒಟ್ಟಾರೆ ಫಲಿತಾಂಶ ಶೇ.85.19ಕ್ಕೆ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ.
ಒಳ ಮೀಸಲಾತಿಯ ವಿಚಾರ ಇತ್ಯರ್ಥ ಆಗುತ್ತಿದ್ದಂತೆ 18 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಮುಖ ಚಹರೆ ಗುರುತಿಸಿ, ಹಾಜರಾತಿ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದನ್ನು ಹಂತಹಂತವಾಗಿ ವಿಸ್ತರಣೆ ಮಾಡುವುದಾಗಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ತಪ್ಪು ಮಾಹಿತಿಗಳೇ ಹರಿದಾಡುತ್ತಿವೆ. ನೀರಾವರಿ ಹಾಗೂ ಇತರೆ ವಿಷಯಗಳಿಗೆ ಸಂಬಂಧ ಪಟ್ಟಂತೆ ನಾವು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವ ಸಂಸದರು, ಹೋದ ಕಡೆಯಲೆಲ್ಲಾ ತಾವೆ ಸಾಧನೆ ಮಾಡಿದಂತೆ ಹೇಳಿಕೊಳ್ಳುತ್ತಿದ್ದಾರೆ. ಯಾರೋ ಕಟ್ಟಿದ ಮನೆಯನ್ನು ಇವರು ತಮ್ಮದು ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದರು.
ಮೆಗಾನ್ ಆಸ್ಪತ್ರೆ ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಅವ್ಯವಸ್ಥೆಗಳನ್ನು ಸರಿಪಡಿಸಲು ನನಗಿನ್ನೂ ಸಮಯ ಬೇಕು. ಹಿಂದಿನ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಅಧ್ವಾನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಸರ್ಕಾರದ ಭವಿಷ್ಯದ ಬಗ್ಗೆ ಬಿಜೆಪಿಯವರು ಅನಗತ್ಯವಾದ ಟೀಕೆಗಳನ್ನು ಮಾಡುತ್ತಿದ್ದಾರೆ, ಸರ್ಕಾರ ಬಿದ್ದು ಹೋಗುತ್ತದೆ ಎಂದು ಆರ್.ಅಶೋಕ್ ತಮ್ಮದೇ ಶೈಲಿಯಲ್ಲಿ ಹೇಳುವುದನ್ನು ಮಧುಬಂಗಾರಪ್ಪ ವ್ಯಂಗವಾಗಿ ಮಿಮಿಕ್ರಿ ಮಾಡಿ, ನನ್ನ ಭಾಷೆಯ ಬಗ್ಗೆ ಟೀಕೆ ಮಾಡುವವರು ಆರ್.ಅಶೋಕ್ ಅವರ ಕನ್ನಡ ಕೇಳಬೇಕೆಂದು ಲೇವಡಿ ಮಾಡಿದರು.
ಕೃಷಿ ಕನ್ನಡ ಎಐ ವೆಬ್ಸೈಟ್ಗೆ ಇಲ್ಲಿ ಕ್ಲಿಕ್ ಮಾಡಿ
ಆಯುರ್ವೇದ ವೈದ್ಯೆ ಡಾ ಪ್ರಿಯಾ ಪೂಜಾರ್ಗೆ ಗಿರಿನಗರ ರೋಟರಿ ಕ್ಲಬ್ನಿಂದ ಸನ್ಮಾನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


