ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರು ಮಹಿಳಾ ಪತ್ರಕರ್ತೆಯೋರ್ವರ ಪ್ರಶ್ನೆಗೆ ನೀಡಿದ ಉಡಾಫೆಯ ಉತ್ತರದಿಂದ ಭಾರೀ ವಿವಾದಕ್ಕೆ ಸಿಲುಕಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ಉತ್ತಮ ಸರ್ಕಾರಿ ಆಸ್ಪತ್ರೆಯ ಕೊರತೆಯ ಬಗ್ಗೆ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಪ್ರಶ್ನಿಸಿದಾಗ, ದೇಶಪಾಂಡೆ ಅವರು ನೀಡಿದ ಅಸಂಬದ್ಧ ಮತ್ತು ಅಸಭ್ಯ ಉತ್ತರ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜೋಯಿಡಾ ತಾಲ್ಲೂಕು ದಶಕಗಳಿಂದ ಉತ್ತಮ ಆಸ್ಪತ್ರೆ ಇಲ್ಲದೆ ಪರದಾಡುತ್ತಿದ್ದು, ವಿಶೇಷವಾಗಿ ಗರ್ಭಿಣಿಯರು ವೈದ್ಯಕೀಯ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಎತ್ತಿ ಹಿಡಿದ ಪತ್ರಕರ್ತೆ, “ಈ ಭಾಗಕ್ಕೆ ಆಧುನಿಕ ದರ್ಜೆಯ ಸರ್ಕಾರಿ ಆಸ್ಪತ್ರೆ ಯಾವಾಗ ದೊರೆಯುತ್ತದೆ?” ಎಂದು ಕೇಳಿದಾಗ, ದೇಶಪಾಂಡೆ ಅವರು “ಚಿಂತಿಸಬೇಡಿ, ನಿಮ್ಮ ಹೆರಿಗೆಯನ್ನು ನಾವು ಬೇರೆಡೆ ಮಾಡಿಸುತ್ತೇವೆ” ಎಂದು ಹೇಳಿ ಕಣ್ಣು ಮಿಟುಕಿಸಿದ್ದಾರೆ.
ದೇಶಪಾಂಡೆ ಅವರ ಈ ಹೇಳಿಕೆಯಿಂದ ಆಘಾತಕ್ಕೊಳಗಾದ ಪತ್ರಕರ್ತೆ, ಏನ್ ಸರ್ ಎಂದು ಮರುಪ್ರಶ್ನಿಸಿದ್ದಾರೆ. ಘಟನೆಯ ನಂತರ ಪತ್ರಕರ್ತೆ, ಇಂತಹ ಅಸಂಬದ್ಧ ಹೇಳಿಕೆಯನ್ನು ನಾನು ಅವರ ಬಾಯಿಂದ ಎಂದಿಗೂ ಕೇಳಿರಲಿಲ್ಲ ಎಂದು ಹೇಳಿದ್ದಾರೆ ಮತ್ತು ದೇಶಪಾಂಡೆ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದೇಶಪಾಂಡೆಯವರ ವರ್ತನೆಯನ್ನು ತೀವ್ರವಾಗಿ ಖಂಡಿಸಿವೆ. ಮಹಿಳೆಯರಿಗೆ ಕಾಂಗ್ರೆಸ್ ನೀಡುವ ಗೌರವ ಇದೇನಾ?” ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಹಾಗೆಯೇ, ಬಿಜೆಪಿ ಅಥವಾ ಜೆಡಿಎಸ್ ಶಾಸಕರು ಹೀಗೆ ಹೇಳಿದ್ದರೆ ಕಾಂಗ್ರೆಸ್ ನಾಯಕರು ಸುಮ್ಮನಿರುತ್ತಿದ್ದರೇ? ಎಂದು ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ. ಈ ವಿವಾದ ರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾಗಿದ್ದು, ದೇಶಪಾಂಡೆಯವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಎಸ್ಎಸ್ಎಲ್ಸಿ, ಪಿಯುಸಿ ಮಾಡಿರುವವರಿಗೆ ರೈಲ್ವೆಯಲ್ಲಿವೆ 3518 ಹುದ್ದೆಗಳು
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


