ಮಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ದೊಡ್ಡದಾಗಿ ಎದ್ದಿದ್ದ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಅಲೆಯನ್ನು ಸ್ವತಃ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಣ್ಣಗಾಗಿಸಲು ಮುಂದಾಗಿದ್ದರೂ, ಕಾಂಗ್ರೆಸ್ ಪಾಳಯದಲ್ಲಿ ಅದರ ಕುರಿತ ಚರ್ಚೆಗಳು ಮಾತ್ರ ಕಡಿಮೆಯಾಗಿಲ್ಲ.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಸಹ ಈ ಕುರಿತು ಮಾತನಾಡಿದ್ದು, ಇವತ್ತೇ ಡಿಕೆ ಶಿವಕುಮಾರ್ ಸಿಎಂ ಆಗಬೆಕು ಎಂದಿದ್ದಾರೆ. ನಗರಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಆಗಮಿಸುತ್ತಿದ್ದು, ಈ ವೇಳೆ ಡಿಕೆ ಡಿಕೆ ಎನ್ನುವ ಘೋಷಣೆ ಜೋರಾಗಿ ಕೇಳಿಬಂದಿದೆ. ಈ ಹೇಳಿಕೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ವರಿಷ್ಠರಿಗೆ ನೀಡಿದ ಸಂದೇಶವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಥುನ್ ರೈ ಕಾಂಗ್ರೆಸ್ನಲ್ಲಿ ಮೊದಲಿಗೆ ರಾಹುಲ್ ಗಾಂಧಿಯವರಿಗೆ ಜೈಕಾರ, ಬಳಿಕ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಜೈಕಾರ, ನಂತರ ರಾಜ್ಯಾಧ್ಯಕ್ಷರಿಗೆ ಜೈಕಾರ, ಇದು ಪಕ್ಷದ ಶಿಷ್ಟಾಚಾರವೂ ಆಗಿದೆ ಎಂದರು.
ಇನ್ನು ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮಿಥುನ್ ರೈ ಈಗ ಕಾರ್ಯಕ್ರಮಕ್ಕೆ ಅವರೂ ಬರುತ್ತಾರೆ, ಆಗ ನೋಡಿ ಜೈಕಾರವನ್ನು ಎಂದರು. ಅಲ್ಲದೇ ಅದೇ ಸ್ಥಳದಲ್ಲಿ ತಮ್ಮ ಸುತ್ತ ಇದ್ದ ಕಾರ್ಯಕರ್ತರಿಂದ ಸಿದ್ದರಾಮಯ್ಯನವರಿಗೆ ಜೈಕಾರ ಕೂಗಿಸಿದರು. ತಮ್ಮ ಪಕ್ಷದಲ್ಲಿ ಗುಂಪುಗಾರಿಕೆ, ಬಣಗಾರಿಕೆ ಇಲ್ಲ, ತಮ್ಮ ಮನಸ್ಸಿನಲ್ಲಿ ಹಾಗೂ ತಲೆಯಲ್ಲೂ ಗುಂಪುಗಾರಿಕೆ ಇಲ್ಲ , ಸಿದ್ದರಾಮಯ್ಯ ಹಾಗೂ ಡಿಕೆ ಸಾಹೇಬ್ರು ಜೋಡೆತ್ತುಗಳಾಗ ಕೆಲಸ ಮಾಡುತ್ತಿದ್ದಾರೆ, ತಮ್ಮ ಲಕ್ಷ್ಯ ಏನಿದ್ದರೂ 2028ರ ಚುನಾವಣೆ ಕಡೆಗೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವ ಪೈಪೋಟಿ ಇದೆ ಎನ್ನುವುದು ಸುಳ್ಳು ಎಂದ ಮಿಥುನ್ ರೈ ಸಿದ್ದರಾಮಯ್ಯ ರೀತಿಯ ನಾಯಕರನ್ನು ರಾಜ್ಯ ಕಂಡಿಲ್ಲ, ಅಂತಹ ಶ್ರೇಷ್ಠ ನಾಯಕರು ಮತ್ತೆ ಬರುವುದಿಲ್ಲ, ಅವರು ಅಧಿಕಾರದ ಹಿಂದ ಹೋದ ನಾಯಕರಲ್ಲ, ಅವರು ತಮ್ಮ ಸಚಿವ ಸಂಪುಟದಲ್ಲಿ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅನೇಕ ಯುವಕರಿಗೆ ಅವಕಾಶ ಕೊಟ್ಟಿದ್ದಾರೆ, ಇದು ಸಿದ್ದರಾಮಯ್ಯನವರ ಗುಣ. ಅಧಿಕಾರ ಹಂಚಿಕೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಆದರೆ ನನ್ನ ಮನಸ್ಸಿನ ಪ್ರಕಾರ ಇದಕ್ಕೆಲ್ಲ ಇತಿಶ್ರೀ ಹಾಡುವುದು ಸಿದ್ದರಾಮಯ್ಯ ಸಾಹೇಬ್ರೇ. ಯಾರಾದರೂ ಡಿಕೆ ಸಾಹೇಬ್ರನ್ನು ಮುಖ್ಯಮಂತ್ರಿ ಮಾಡಿದರೆ ಅದು ಸಿದ್ದರಾಮಯ್ಯ ಸಾಹೇಬ್ರೇ ನೀವು ನೋಡ್ತಾ ಇರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ತಾವೇ ನವರಾತ್ರಿ ಸಮಯಕ್ಕೆ ಡಿಕೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದ ಹೇಳಿಕೆ ಬಗ್ಗೆ ಮಾತನಾಡಿದ ಮಿಥುನ್ ರೈ ನಿಮಗೆ ನಟರಲ್ಲಿ ದರ್ಶನ್ ಅಥವಾ ಸುದೀಪ್ ಇಬ್ಬರಲ್ಲಿ ಒಬ್ಬರು ಇಷ್ಟವಿರಬಹುದು, ಹಾಗೆಯೇ ಇದು ನನ್ನ ವೈಯಕ್ತಿಕ ಅಭಿಪ್ರಾಯ, ಇವತ್ತೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ನನ್ನ ಹರಕೆ ತೀರುತ್ತದೆ, ನಾನು ತಾಯಿಯಲ್ಲಿ ಹರಕೆ ಹೊತ್ತುಕೊಂಡಿದ್ದೇನೆ ಎಂದರು.
ಶಿವಮೊಗ್ಗ: ವೃದ್ಧೆಯ ಭೀಕರ ಕೊಲೆಗೆ ಮಗನೇ ಕಾರಣ ಎಂದ ಅಳಿಯ; 45 ದಿನಗಳ ಬಳಿಕ ಅಸಲಿ ಕಥೆ ತೆರೆದಿಟ್ಟ ಪೊಲೀಸರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


