ರಿಷಬ್ ಶೆಟ್ಟಿ ಕನ್ನಡ ಚಲನಚಿತ್ರರಂಗ ಕಂಡ ಅಪ್ಪಟ ಪ್ರತಿಭೆ. ನಟನೆ ಜತೆಗೆ ನಿರ್ದೇಶನದಲ್ಲಿಯೂ ಸಹ ನೈಪುಣ್ಯತೆ ಹೊಂದಿರುವ ಕೆಲವೇ ನಟರಲ್ಲಿ ರಿಷಬ್ ಸಹ ಒಬ್ಬರು. ಕನ್ನಡದಲ್ಲಿ ವಿಭಿನ್ನ ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಈ ಚಿತ್ರದ ಬಳಿಕ ರಿಷಬ್ ಶೆಟ್ಟಿಗೆ ರಾಜ್ಯ ಮಾತ್ರವಲ್ಲದೇ ಯಶ್ ರೀತಿ ದೇಶಾದ್ಯಂತ ಬೇಡಿಕೆ ಹುಟ್ಟಿದ್ದು ನಿಜ. ಹೀಗಾಗಿಯೇ ರಿಷಬ್ ಸದ್ಯ ಕನ್ನಡಕ್ಕಿಂತ ಬೇರೆ ಭಾಷೆಯ ಸಿನಿಮಾಗಳನ್ನೇ ಆರಿಸಿಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರತೊಡಗಿವೆ.
ಕಾಂತಾರ ಪ್ರೀಕ್ವೆಲ್ ಘೋಷಣೆ ಮಾಡಿದ್ದ ರಿಷಬ್ ಶೆಟ್ಟಿ ಬಳಿಕ ತೆಲುಗಿನ ಜೈ ಹನುಮಾನ್ ಚಿತ್ರವನ್ನು ಘೋಷಿಸಿದರು. ಸದ್ಯ ಹಿಂದಿಯಲ್ಲಿ ʼದ ಪ್ರೈಡ್ ಆಫ್ ಭಾರತ್; ಛತ್ರಪತಿ ಶಿವಾಜಿ ಮಹಾರಾಜ್ʼ ಎಂಬ ಚಿತ್ರದಲ್ಲಿಯೂ ಸಹ ರಿಷಬ್ ಶೆಟ್ಟಿ ನಟಿಸಲಿರುವುದು ಘೋಷಣೆಯಾಗಿದೆ.
ಸಂದೀಪ್ ಸಿಂಗ್ ಎನ್ನುವವರು ನಿರ್ದೇಶಿಸಲಿರುವ ಈ ಚಿತ್ರದಲ್ಲಿ ರಿಷಬ್ ಶಿವಾಜಿ ಮಹಾರಾಜ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಇದೇ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಅವರು ಹಿಂದೆಂದೂ ಟ್ರೋಲ್ ಆಗದ ಮಟ್ಟಕ್ಕೆ ಟ್ರೋಲ್ ಆಗುವಂತೆ ಮಾಡಿದೆ.
ಹೌದು, ಶಿವಾಜಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ದ್ವೇಷ ವ್ಯಕ್ತಪಡಿಸುವುದು ಗೊತ್ತಿರುವ ವಿಚಾರವೇ. ಇದೇ ಕಾರಣಕ್ಕಾಗಿ ಸದ್ಯ ರಿಷಬ್ ಟ್ರೋಲ್ಗೀಡಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಸಿನಿಮಾ ಮಾಡಿ ಬೆಳೆದು ಈಗ ಕನ್ನಡಿಗರ ವಿರೋಧಿ ಛತ್ರಪತಿ ಶಿವಾಜಿ ಪಾತ್ರ ಮಾಡುವುದು ಕನ್ನಡಿಗರಿಗೆ ಮಾಡುವ ಅಪಮಾನ ಎಂದು ಕಿಡಿಕಾರಿದ್ದಾರೆ. ಕೆಲವರು ರಿಷಬ್ ಈ ಚಿತ್ರವನ್ನು ಇಲ್ಲಿಗೇ ನಿಲ್ಲಿಸುವುದು ಉತ್ತಮ ಎಂದೂ ಸಹ ಕಾಮೆಂಟ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


