ಬೆಂಗಳೂರು ನಗರದಲ್ಲಿ ಮನೆ ನಿರ್ಮಾಣ ಮಾಡಬೇಕು ಎಂಬುದು ನಗರಕ್ಕೆ ಉದ್ಯೋಗಕ್ಕಾಗಿ ಆಗಮಿಸುವ ಪ್ರತಿಯೊಬ್ಬರ ಕನಸು. ನಗರದಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಒಬ್ಬ ನಿರ್ಮಾಣ ಹಂತದ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತಪಟ್ಟ ಟೆಕ್ಕಿಯನ್ನು 45 ವರ್ಷದ ಮುರಳಿ ಗೋವಿಂದರಾಜು ಎಂದು ಗುರುತಿಸಲಾಗಿದೆ. ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಟೆಕ್ಕಿ ಮೂಲತಃ ನಲ್ಲೂರಹಳ್ಲಿ ಮೂಲದವರು ಎಂದು ತಿಳಿದುಬಂದಿದೆ.
ಮುರಳಿ ಗೋವಿಂದರಾಜು ಉಷಾ ನಂಬಿಯಾರ್ ಅವರ ಬಳಿ ಜಾಗವನ್ನು ಖರೀದಿ ಮಾಡಿ ಮನೆಯನ್ನು ಕಟ್ಟಿಸುತ್ತಿದ್ದರು. ನಿರ್ಮಾಣ ಹಂತದ ಮನೆಯ 2ನೇ ಮಹಡಿಯಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರುಕುಳ ಆರೋಪ: ಟೆಕ್ಕಿ ಮುರಳಿ ಗೋವಿಂದರಾಜು ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿಯಂತೆ ಮನೆ ನಿರ್ಮಾಣ ಮಾಡಲು ಜಾಗ ಖರೀದಿ ಮಾಡಿದ್ದ ಉಷಾ ನಂಬಿಯಾರ್ ಅವರಿಂದ ಆಗುತ್ತಿರುವ ಕಿರುಕುಳದ ಹಿನ್ನಲೆಯಲ್ಲಿ ಸಾವಿಗೆ ಶರಣಾಗಿದ್ದಾರೆ.
ಖರೀದಿ ಮಾಡಿದ್ದ ಜಾಗದಲ್ಲಿ ಮುರಳಿ ಗೋವಿಂದರಾಜು ನಿಯಮಗಳನ್ನು ಮೀರಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದರು. ಇದನ್ನು ಗಮನಿಸಿದ್ದ ಉಷಾ ನಂಬಿಯಾರ್ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ಅಧಿಕಾರಿಗಳಿಗೆ ದೂರು ನೀಡಿದ್ದರು.
ಜಿಬಿಎ ಅಧಿಕಾರಿಗಳು ಮುರಳಿ ಗೋವಿಂದರಾಜುಗೆ ನೋಟಿಸ್ ನೀಡಿದ್ದರು. ಅಲ್ಲದೇ ಅಧಿಕಾರಿಗಳ ಜೊತೆ ಸೇರಿ 20 ಲಕ್ಷ ಲಂಚ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಡಿಸೆಂಬರ್ 5ರೊಳಗೆ ಹಣ ನೀಡಬೇಕು ಎಂದು ಮುರಳಿ ಗೋವಿಂದರಾಜುಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಮಾಹಿತಿ ಇದೆ. ಆದ್ದರಿಂದ ಡಿಸೆಂಬರ್ 3ರಂದು ಅವರು ನಿರ್ಮಾಣ ಹಂತದ ಮನೆಯ 2ನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
10 ಪುಟದ ಡೆತ್ನೋಟ್: ಮುರಳಿ ಗೋವಿಂದರಾಜು ಡೆತ್ನೋಟ್ ಬರೆದಿದ್ದು, ಅದರಲ್ಲಿ ತಮ್ಮ ಸಾವಿಗೆ ಉಷಾ ನಂಬಿಯಾರ್ ಕಾರಣ ಎಂದು ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವೈಟ್ಫೀಲ್ಡ್ ಠಾಣೆ ಪೊಲೀಸರು ಈ ಕುರಿತು ಪ್ರಕರಣದ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಮುರಳಿ ಗೋವಿಂದರಾಜು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಶಿ ನಂಬಿಯಾರ್, ಉಷಾ ನಂಬಿಯಾರ್ ಮತ್ತು ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈ ಪ್ರಕರಣದ ಸಂಬಂಧ ಇದುವರೆಗೂ ಯಾರನ್ನು ಸಹ ಬಂಧಿಸಿಲ್ಲ.
10 ಪುಟದ ಡೆತ್ನೋಟ್ನಲ್ಲಿ ಮುರಳಿ ಗೋವಿಂದರಾಜು ಪಕ್ಕದ ಬಿಲ್ಡಿಂಗ್ನ ಮಾಲೀಕರು ಸಹ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಐಟಿಪಿಎಲ್ನಲ್ಲಿ ಕೆಲಸ ಮಾಡುತ್ತಿದ್ದ ಮುರಳಿ ಗೋವಿಂದರಾಜುವಿಗೆ ಇಬ್ಬರು ಹೆಣ್ಣು ಮಕ್ಕಳು.
ಮುರಳಿ ಗೋವಿಂದರಾಜು ಡೆತ್ನೋಟ್ನಲ್ಲಿ ಶಶಿ ನಂಬಿಯಾರ್, ಉಷಾ ನಂಬಿಯಾರ್, ವರುಣ್ ಎಂಬ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಮುರಳಿ ಗೋವಿಂದರಾಜು ತಾಯಿ ಲಕ್ಷ್ಮೀ ಗೋವಿಂದರಾಜು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಕಟ್ಟಡ ನಿರ್ಮಾಣ ನಕ್ಷೆ ಉಲ್ಲಂಘನೆ ಮಾಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ 20 ಲಕ್ಷ ಹಣ ನೀಡುವಂತೆ ಮುರಳಿ ಗೋವಿಂದರಾಜುಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉಷಾ ನಂಬಿಯಾರ್ ಮುರಳಿ ಗೋವಿಂದರಾಜುಗೆ ಸಂಬಂಧಿಯಾಗಿದ್ದು, 2018ರಲ್ಲಿ 40*60 ಅಳತೆಯ ನಿವೇಶವನ್ನು ಅವರಿಂದ ಖರೀದಿ ಮಾಡಿದ್ದರು. ಈಗ ಮನೆ ನಿರ್ಮಾಣ ಆರಂಭಿಸಿದ ಬಳಿಕ ಶಶಿ ಮತ್ತು ಉಷಾ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.
ಹಣ ನೀಡಲು ಮುರಳಿ ಗೋವಿಂದರಾಜು ನಿರಾಕರಿಸಿದ ಹಿನ್ನಲೆಯಲ್ಲಿ ಜಿಬಿಎ ಅಧಿಕಾರಿಗಳಿಗೆ ದೂರು ನೀಡಿ ಉಷಾ ಅವರು ಅಧಿಕಾರಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಮಾಡಿದ್ದರು. ಬುಧವಾರ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರಟಿದ್ದ ಮುರಳಿ ಗೋವಿಂದರಾಜು ಬಳಿಕ ನಿರ್ಮಾಣ ಹಂತದ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


