ಕೊಪ್ಪಳ ಜಿಲ್ಲೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಜನ್ಮಸ್ಥಳ ಅಂಜನಾದ್ರಿಯಲ್ಲಿ ಎರಡು ದಿನಗಳ ಕಾಲ ನಡೆದ ಹನುಮಮಾಲಾ ಕಾರ್ಯಕ್ರಮ ಬುಧವಾರ ಸಂಪನ್ನವಾಗಿದೆ. ಸಾವಿರಾರು ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟದ ತುದಿಯನ್ನು ಏರಿ, ಹನುಮಮಾಲೆಯನ್ನು ವಿಸರ್ಜನೆ ಮಾಡಿದ್ದಾರೆ.
ಆದರೆ ಯುವಕನೋರ್ವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಫೋಟೋವನ್ನು ಹಿಡಿದು ಅಂಜನಾದ್ರಿ ಬೆಟ್ಟವನ್ನು ಏರಿದ್ದಾನೆ ಎಂಬ ಮಾಹಿತಿ ಸಿಕ್ಕಿದ್ದು, ಯುವಕನಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದಾರೆ.
ಅಂಜನಾದ್ರಿ ಬೆಟ್ಟವನ್ನು ಹತ್ತುವಾಗ ಯುವಕ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಫೋಟೋವನ್ನು ಹಿಡಿದಿದ್ದ ಮತ್ತು ಲಾರೆನ್ಸ್ಗೆ ಜಯವಾಗಲಿ, ಭಜರಂಗಬಲಿ ಇನ್ನಷ್ಟು ಶಕ್ತಿ ನೀಡಲಿ, ನಾನು ಬಿಷ್ಣೋಯ್ ಅಭಿಮಾನಿ ಎಂದು ಘೋಷಣೆಗಳನ್ನು ಕೂಗುತ್ತಿದ್ದ.
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಫೋಟೋವನ್ನು ಹಿಡಿದು ಬೆಟ್ಟವನ್ನು ಹತ್ತುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಯುವಕ ಯಾರು? ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿರಾರು ಯುವಕರು ಆಗಮಿಸಿದ್ದ ಕಾರಣ ಯುವಕನನ್ನು ಹುಡುಕುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಫೋಟೋ ಹಿಡಿದು ಅಂಜನಾದ್ರಿ ಬೆಟ್ಟ ಹತ್ತಿದ ಯುವಕ ಬೆಳಗಾವಿ ಮೂಲದವನು. ಈತ ತನ್ನನ್ನು ಲಾರೆನ್ಸ್ ಬಿಷ್ಣೋಯ್ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ.
ಪೊಲೀಸರು ಈ ಕುರಿತು ಮಾಹಿತಿ ಪಡೆದ ಹಿನ್ನಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ನಿರೀಕ್ಷೆ ಇದೆ.
ಲಾರೆನ್ಸ್ ಬಿಷ್ಣೋಯ್ ಫೋಟೋ ಹಿಡಿದು ಯುವಕ ಬೆಟ್ಟ ಏರಿದ ಪ್ರಕರಣದ ಕುರಿತು ಕೊಪ್ಪಳ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯುವಕ ಬೆಟ್ಟ ಏರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಲಾರೆನ್ಸ್ ಬಿಷ್ಣೋಯ್ ಯಾರು?: ಫೆಬ್ರವರಿ 12, 1993ರಂದು ಜನಿಸಿದ ಲಾರೆನ್ಸ್ ಬಿಷ್ಣೋಯ್ ಭಾರತದ ಒಬ್ಬ ಗ್ಯಾಂಗ್ಸ್ಟಾರ್. 2014ರಿಂದಲೂ ಈಗ ಜೈಲಿನಲ್ಲಿದ್ದಾನೆ, ‘ಬಿಷ್ಣೋಯ್’ ಹೆಸರಿನ ಗ್ಯಾಂಗ್ಗೆ ಈತನೇ ಮುಖ್ಯಸ್ಥ.
ಲಾರೆನ್ಸ್ ಬಿಷ್ಣೋಯ್ ಶೂಟರ್ಗಳ ಜೊತೆ ಸಂಪರ್ಕ ಹೊಂದಿದ್ದು, ಭಾರತದಲ್ಲಿ ಬೇರೆ ಬೇರೆ ಕಡೆ ನಡೆದ ದರೋಡೆ, ಶೂಟ್ ಔಟ್ಗಳ ಹಿಂದೆ ಈ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ. ಕೆಲವು ದಿನಗಳ ಹಿಂದೆ ಎನ್ಐಎ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧಿಸಿ, ಅಮೆರಿಕದಿಂದ ಭಾರತಕ್ಕೆ ಕರೆದುಕೊಂಡು ಬಂದಿದೆ.
ಲಾರೆನ್ಸ್ ಬಿಷ್ಣೋಯ್ 2014ರಿಂದ ಜೈಲಿನಲ್ಲಿದ್ದಾನೆ. ಆದರೆ ಆತನ ಹೆಸರಿನಲ್ಲಿರುವ ಬಿಷ್ಣೋಯ್ ಗ್ಯಾಂಗ್ ದೇಶದಲ್ಲಿ ಹಲವಾರು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದೆ. ಗಾಯಕ ಸಿಧು ಮೂಸೆವಾಲಾ, ಎನ್ಸಿಪಿ ನಾಯಕ ಬಾಬಾ ಸಿದ್ಧಿಕ್ಕಿ ಹತ್ಯೆ ಪ್ರಕರಣದಲ್ಲಿಯೂ ಈ ಗ್ಯಾಂಗ್ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದ ಗುಂಡಿನ ದಾಳಿ, ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿಯೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಕೃಷ್ಣಮೃಗವನ್ನು ದೇವರೆಂದು ಪೂಜಿಸುವ ಬುಡಕಟ್ಟು ಸಮುದಾಯಕ್ಕೆ ಸೇರಿದವನು. 1998ರಲ್ಲಿ ಸಲ್ಮಾನ್ ಖಾನ್ ಹಾಗೂ ಬಾಲಿವುಡ್ನ ಇತರ ನಟರು ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಆದ್ದರಿಂದ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
2014ರಲ್ಲಿ ಲಾರೆನ್ಸ್ ಬಿಷ್ಣೋಯ್ ರಾಜಸ್ಥಾನದಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದ. ಬಳಿಕ ಆತನನ್ನು ಬಂಧಿಸಲಾಗಿದೆ. ಆದರೆ ಭದ್ರತೆಯ ಕಾರಣಕ್ಕೆ ಆತನನ್ನು ದೇಶದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗುತ್ತದೆ.
ಅಂಜನಾದ್ರಿ ಬೆಟ್ಟ ಆಂಜಯೇಯ ಸ್ವಾಮಿ ಜ್ಮನಸ್ಥಳ ಎಂಬ ನಂಬಿಕೆ ಇದೆ. ಹನುಮ ಜಯಂತಿ ಹಿನ್ನಲೆಯಲ್ಲಿ ಇಲ್ಲಿ ಮಂಗಳವಾರದಿಂದಲೇ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಅಂಜನಾದ್ರಿಯಲ್ಲಿ ಆರಂಭವಾಗಿತ್ತು. ಮಂಗಳವಾರ ಮತ್ತು ಬುಧವಾರ ಅಪಾರ ಸಂಖ್ಯೆಯ ಆಂಜನೇಯ ಸ್ವಾಮಿಯ ಭಕ್ತರು ಮತ್ತು ಹನುಮಮಲಾಧಾರಿಗಳು ಅಂಜನಾದ್ರಿಗೆ ಆಗಮಿಸಿದ್ದರು.
ಶ್ರೀ ರಾಮ ಜಯರಾಂ, ಪವನಸುತ ಆಂಜನೇಯನಿಗೆ ಜೈ ಸೇರಿದಂತೆ ಹಲವು ಜಯಘೋಷಗಳನ್ನು ಕೂಗುತ್ತಾ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಹನುಮ ನಾಮವನ್ನು ಜಪಿಸುತ್ತಾ ಸರತಿ ಸಾಲಿನಲ್ಲಿ ನಿಂತು ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಬಳಿಕ ಮಾಲೆ ವಿಸರ್ಜನೆ ಮಾಡಿದರು.
ಅಂಜನಾದ್ರಿಗೆ ಕೊಪ್ಪಳ ಮಾತ್ರವಲ್ಲ ಅಕ್ಕ-ಪಕ್ಕದ ಜಿಲ್ಲೆ ಮತ್ತು ಇತರೆ ರಾಜ್ಯಗಳಿಂದಲೂ ಸಾವಿರಾರು ಹನುಮಮಾಲಾಧಾರಿಗಳು ಆಗಮಿಸಿದ್ದರು. ಕೊಪ್ಪಳ ಪೊಲೀಸರು ಅಂಜನಾದ್ರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


