ದುಬೈ: ನಿನ್ನೆ (ಮಾರ್ಚ್ 4) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಆಟದ ನೆರವಿನಿಂದ 4 ವಿಕೆಟ್ಗಳ ಗೆಲುವನ್ನು ಕಂಡಿದೆ. ಈ ಮೂಲಕ ಭಾರತ ಫೈನಲ್ ತಲುಪಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ 264 ರನ್ ಕಲೆಹಾಕಿ ಆಲ್ಔಟ್ ಆಗಿ ಭಾರತಕ್ಕೆ 265 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 48.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 267 ರನ್ ಕಲೆಹಾಕಿದೆ.
ತಂಡದ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳು ಉತ್ತಮ ಪ್ರದರ್ಶನ ನೀಡಿದ್ದೇ ಗೆಲುವಿಗೆ ಕಾರಣವಾಗಿದ್ದು, ಸಮತೋಲನದ ಆಟದಿಂದ ಭಾರತ ಗೆದ್ದು ಬೀಗಿದೆ.
ಪಂದ್ಯದಲ್ಲಿ ವಿರಾಟ್ ಕೊಹ್ಲಿ 84 ರನ್ ಗಳಿಸಿದ್ದು, ತಂಡದ ಪರ ಅತಿಹೆಚ್ಚು ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
ಇನ್ನು ಕೊಹ್ಲಿಗೆ ಶತಕ ಬಾರಿಸುವ ಅವಕಾಶವಿದ್ದರೂ ಸಹ ಬೇಡದ ಶಾಟ್ ಬಾರಿಸಲು ಹೋಗಿ ಜಂಪಾ ಎಸೆದ ಎಸೆತದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ಔಟ್ ಆಗುತ್ತಿದ್ದಂತೆ ಕೆಎಲ್ ರಾಹುಲ್ ವಿರಾಟ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಕೊಹ್ಲಿ ಶತಕ ವಂಚಿತರಾದ ಕಾರಣ ಬೇಸರಗೊಂಡ ರಾಹುಲ್ ‘ನಾನು ಹೊಡೆಯುತ್ತಿದ್ದೆನಲ್ಲ ಗುರೂ’ ಎಂದು ಹೇಳಿದ್ದಾರೆ.
ಅತ್ತ ಪಂದ್ಯ ಮುಗಿದ ಬಳಿಕ ಈ ಕುರಿತು ಇನ್ನಷ್ಟು ಮಾಹಿತಿ ಹಂಚಿಕೊಂಡ ರಾಹುಲ್ ಕೊಹ್ಲಿಗೆ ಆ ರೀತಿ ಹೇಳಲು ಕಾರಣವನ್ನು ಬಿಚ್ಚಿಟ್ಟರು. ‘ನಾನು ಆಡಲು ಬಂದ ಕೂಡಲೇ ವಿರಾಟ್ಗೆ ಕೊನೆಯವರೆಗೂ ಇರಬೇಕು. ಪ್ರತಿ ಓವರ್ನಲ್ಲೂ ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ ಎಂದಿದ್ದೆ. ಸೆಟ್ ಆಗಿರುವ ಬ್ಯಾಟ್ಸ್ಮನ್ ಆದ ಕಾರಣ ತಂಡಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದಿದ್ದೆ. ಅದನ್ನು ಕೇಳದೇ ಕೊಹ್ಲಿ ರಿಸ್ಕ್ ತೆಗೆದುಕೊಂಡರು’ ಎಂದು ರಾಹುಲ್ ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


