ಬೆಂಗಳೂರು: ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಹ ವೈಚಾರಿಕ, ವೈಜ್ಞಾನಿಕವಾದ ವಿದ್ಯೆಯನ್ನು ಶಿಕ್ಷಕರು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಹಮಿಕೊಂಡಿದ್ದ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣರವರ ಜನ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಆಯವ್ಯಯ 4,09,000 ಕೋಟಿ ಇದ್ದು, ಅದರಲ್ಲಿ ಶಿಕ್ಷಣ ಇಲಾಖೆಗೆ 65 ಸಾವಿರ ಕೋಟಿ ರೂ.ಗಳ ವೆಚ್ಚ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ಸರ್ಕಾರದ ನಿರೀಕ್ಷೆಯಾಗಿದೆ. ಶಿಕ್ಷಕರು ಇದನ್ನು ಅರ್ಥ ಮಾಡಿಕೊಂಡು ವೈಚಾರಿಕ, ವೈಜ್ಞಾನಿಕ ಹಾಗೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಹ ವಿದ್ಯೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.
ಕಲಿಕೆಯ ಕಿಡಿ ಹೊತ್ತಿಸುವಂತಹ ಶಿಕ್ಷಣ ನೀಡಬೇಕೆ ಹೊರತು ಕೇವಲ ಮಾಹಿತಿ ನೀಡುವುದಷ್ಟೇ ಶಿಕ್ಷಣವಲ್ಲ. ಇಂತಹ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸಂವಿಧಾನ ಜಾರಿಗೆ ಬಂದ ನಂತರ ಎಲ್ಲರಿಗೂ ವಿದ್ಯೆ ಕಲಿಯುವ ಅವಕಾಶವಿದೆ ಎಂದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮನುಷ್ಯತ್ವ ತಾನಾಗಿಯೇ ಬೆಳೆಯುತ್ತದೆ. ಮನುಷ್ಯತ್ವ ಇಲ್ಲದಿದ್ದರೆ ಒಳ್ಳೆಯ ನಾಗರಿಕರಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕರನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಹುಟ್ಟುಹಾಕಿದರು. ಮೌಢ್ಯ, ಕಂದಾಚಾರ ದೂರ ಮಾಡಿ ವ್ಯಕ್ತಿ ವಿಕಸನವಾಗುವ, ಮಾನವರಾಗಿ ಬದಲಾಗುವ ಶಿಕ್ಷಣ ಬೇಕು ಎಂದು ಅವರು ಪ್ರತಿಪಾದಿಸಿದರು.
ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ವೈಜ್ಞಾನಿಕತೆ, ಸಾಮಾಜಿಕ ಹರಿವು, ಪರಧರ್ಮ ಸಹಿಷ್ಣತೆ ಮೈಗೂಡಿಸಿಕೊಳ್ಳುವ ವ್ಯವಸ್ಥೆ ಆಗಬೇಕು. ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ಪದವಿ, ಪಿಎಚ್ಡಿ ಪದವಿ ಪಡೆದವರು, ಜಾತಿ, ಮೌಢ್ಯ, ಮೂಢನಂಬಿಕೆ ನಂಬುವುದಾದರೆ ಎಂಥಹ ಶಿಕ್ಷಣ ನೀಡಿದ್ದೇವೆ ಎಂಬುದನ್ನು ನಾವು ಚರ್ಚೆ ಮಾಡಬೇಕಿದೆ. ಪವಿತ್ರವಾದ ವೃತ್ತಿ ಶಿಕ್ಷಣ. ನಾಡು ಕಟ್ಟುವ ನಾಗರಿಕರನ್ನು ತಯಾರಿ ಮಾಡುವ ದೇಶದ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ಹುಡುಕುವ ಶಕ್ತಿಯನ್ನು ಶಿಕ್ಷಣ ತುಂಬಿದಾಗ ಸಾರ್ಥಕವಾಗುತ್ತದೆ ಎಂದರು.
ಯಾವ ದೇವರೂ ಹಣೆಯಲ್ಲಿ ಬರೆಯುವುದಿಲ್ಲ, ನೀವೂ ಬರೆದುಕೊಳ್ಳುವುದಿಲ್ಲ, ನಮ ಮನೆಯಲ್ಲಿ 6 ಜನ ಮಕ್ಕಳಿದ್ದೆವು. ನಾನೊಬ್ಬನೇ ವಿದ್ಯಾವಂತನಾದೆ. ಉಳಿದವರು ವಿದ್ಯಾವಂತರಾಗಲಿಲ್ಲ. ಒಬ್ಬರಿಗೆ ವಿದ್ಯೆ, ಮತ್ತೊಬ್ಬರಿಗೆ ವಿದ್ಯೆ ಬೇಡ ಎಂದು ಬರೆದರೆ ದೇವರು ಎಂದು ಕರೆಸಿಕೊಳ್ಳುವುದಿಲ್ಲ. ಶಿಕ್ಷಣದಿಂದ ಅಸಮಾನತೆ ನಿವಾರಣೆಯಾಗಲಿದೆ. ಎಲ್ಲರಿಗೂ ಎಲ್ಲಾ ಅವಕಾಶಗಳೂ ಸಿಕ್ಕಾಗ ಸಮಾನತೆ ಬರುತ್ತದೆ. ಆರ್ಥಿಕ ಸ್ವಾವಲಂಬನೆ ದೊರೆತಾಗ ಜಾತಿ ವ್ಯವಸ್ಥೆಗೂ ಚಲನೆ ದೊರೆಯುತ್ತದೆ ಎಂದು ಹೇಳಿದರು.
ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ಆದರ್ಶ ಶಿಕ್ಷಕರಾಗಿದ್ದರು. ಅವರ ಜನದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ರಾಧಾಕೃಷ್ಣ ಅವರ ಆದರ್ಶಗಳನ್ನು ಶಿಕ್ಷಕರು ಅಳವಡಿಸಿಕೊಂಡು ಅವರಂತೆ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನಾನಿಸಲಾಯಿತು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಡಿ.ಟಿ.ಶ್ರೀನಿವಾಸ್, ರಾಮೋಜಿಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ರಶಿ ಮಹೇಶ್, ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
60% ಕಮಿಷನ್ ಕೇಳಿದ ಆರೋಪ; ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ಗೆ ಕಾನೂನು ಸಂಕಷ್ಟ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


