ಬಿಹಾರ ವಿಧಾನಸಭೆ ಚುನಾವಣೆ 2025ರ ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆಯಲಿದೆ. ಮತದಾನಕ್ಕೂ ಮುನ್ನ ಎನ್ಡಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದ್ದು, ಕೊಲೆ ಪ್ರಕರಣದಲ್ಲಿ ಜೆಡಿಯು ಅಭ್ಯರ್ಥಿ ಬಂಧಿಸಲಾಗಿದೆ.
ಈ ಬಾರಿಯ ಚುನಾವಣೆಗೆ ಮೊಕಾಮ ಕ್ಷೇತ್ರದ ಜೆಡಿಯು ಅಭ್ಯರ್ಥಿಯಾಗಿದ್ದ ಅನಂತ್ ಸಿಂಗ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಅನಂತ್ ಸಿಂಗ್ ಮಾಜಿ ಗ್ಯಾಂಗ್ ಸ್ಟಾರ್ ಮತ್ತು ಮಾಜಿ ಶಾಸಕ.
ಜನ್ ಸುರಾಜ್ ಪಕ್ಷದ ಕಾರ್ಯಕರ್ತ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಅನಂತ್ ಸಿಂಗ್ ಸೇರಿ ಮೂವರನ್ನು ಬಂಧಿಸಲಾಗಿದೆ. ತಮ್ಮ ಪಕ್ಷದ ಅಭ್ಯರ್ಥಿ ಪಿಯೂಶ್ ಪ್ರಿಯದರ್ಶಿನಿ ಪ್ರರವಾಗಿ ಚುನಾವಣಾ ಪ್ರಚಾರವನ್ನು ಮಾಡುವಾಗಲೇ ದುಲಾರ್ ಚಂದ್ ಹತ್ಯೆ ಮಾಡಲಾಗಿತ್ತು.
ಗುಂಡು ಹಾರಿಸಿದ್ದೇ ಅನಂತ್: ದುಲಾರ್ ಚಂದ್ ಹತ್ಯೆ ಕುರಿತು ಅವರ ಮೊಮ್ಮಗ ದೂರು ನೀಡಿದ್ದರು. ಈ ಕುರಿತು ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆಯನ್ನು ಪೊಲೀಸರು ಕೈಗೊಂಡಿದ್ದರು.
ಈ ಹತ್ಯೆ ಬಳಿಕ ಅನಂತ್ ಸಿಂಗ್ ಚಲನವಲನದ ಮೇಲೆ ಪೊಲೀಸರು ಕಣ್ಗಾವಲು ಇಟ್ಟಿದ್ದರು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಅಕ್ಟೋಬರ್ 30ರಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನಂತ್ ಸಿಂಗ್ ಮತ್ತು ದುಲಾರ್ ಚಂದ್ ನಡುವೆ ಘರ್ಷಣೆ ನಡೆದಿತ್ತು. ಆಗ ಅನಂತ್ ಬೆಂಬಲಿಗರು ದುಲಾರ್ ಚಂದ್ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅನಂತ್ ಗುಂಡು ಹಾರಿಸಿ ದುಲಾರ್ ಚಂದ್ ಹತ್ಯೆ ಮಾಡಿದ್ದ. ಹತ್ಯೆ ಬಳಿಕ ಆತನ ಮೇಲೆ ಎಸ್ಯುವಿ ವಾಹನ ಹತ್ತಿಸಲಾಗಿತ್ತು.
ಮಾಜಿ ಗ್ಯಾಂಗ್ ಸ್ಟಾರ್ ಅನಂತ್ ಸಿಂಗ್ ‘ಬಾಹುಬಲಿ’ ಎಂದು ಕುಖ್ಯಾತಿಗಳಿಸಿದ್ದಾನೆ. 1990ರ ಅವಧಿಯಲ್ಲಿ ಅನಂತ್ ಸಿಂಗ್ ಮತ್ತು ದುಲಾರ್ ಚಂದ್ ಯಾದವ್ ಇಬ್ಬರು ಗ್ಯಾಂಗ್ಸ್ಟಾರ್ ಆಗಿದ್ದರು. ಹಿಂದಿನಿಂದಲೂ ಇಬ್ಬರ ನಡುವೆ ದ್ವೇಷವಿತ್ತು.
ಬಿಹಾರದಲ್ಲಿ ಅನಂತ್ ಸಿಂಗ್ ‘ಬಾಹುಬಲಿ’ ಎಂದೇ ಕುಖ್ಯಾತಿ ಪಡೆದಿದ್ದಾನೆ. ಆತನ ಮೇಲೆ 28 ಕ್ರಿಮಿನಲ್ ಕೇಸ್ಗಳಿವೆ. ಮಾಜಿ ಶಾಸಕನೂ ಆದ ಆತನಿಗೆ ಈ ಬಾರಿ ಎನ್ಡಿಎ ಮೈತ್ರಿಕೂಟದ ಜೆಡಿಯು ಪಕ್ಷ ಮೊಕಾಮ ಕ್ಷೇತ್ರದ ಟಿಕೆಟ್ ನೀಡಿತ್ತು.
ಅನಂತ್ ಸಿಂಗ್ ಮೇಲೆ ಕೊಲೆ, ಅಪಹರಣ, ಹಲ್ಲೆ, ಅಪಹರಣ ಮಾಡಿ ಚಿತ್ರಹಿಂಸೆ ಸೇರಿದಂತೆ ವಿವಿಧ ಕೇಸುಗಳಿವೆ. ಈಗ ದುಲಾರ್ ಚಂದ್ ಯಾದವ್ ಕೊಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದ್ದು, ಮೊಕಾಮ ಕ್ಷೇತ್ರದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಮೊದಲು ಆರ್ಜೆಡಿಯಲ್ಲಿದ್ದ ಅನಂತ್ ಸಿಂಗ್ ಬಳಿಕ ಜೆಡಿಯು ಸೇರಿದ್ದ. 2022ರಲ್ಲಿ ಒಂದು ಕೇಸಿನಲ್ಲಿ ಆರೋಪ ಸಾಬೀತಾದ ಬಳಿಕ ಅನಂತ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಆ ಕ್ಷೇತ್ರದ ಶಾಸಕಿ ಅನಂತ್ ಸಿಂಗ್ ಪತ್ನಿ ನೀಲಂ ದೇವಿ.
ಬಿಜೆಪಿ ಮತ್ತು ಜೆಡಿಯು ತಲಾ 101 ಸೀಟುಗಳನ್ನು ಹಂಚಿಕೊಂಡು ಬಿಹಾರ ವಿಧಾನಸಭೆ ಚುನಾವಣೆ ಎದುರಿಸುತ್ತಿವೆ. ಈ ಮೈತ್ರಿಕೂಟದಲ್ಲಿ ಎಲ್ಜೆಪಿ (ಆರ್) 29, ಆರ್ಎಲ್ಎಂ 6 ಮತ್ತು ಹೆಚ್ಎಎಂ 6 ಸೀಟುಗಳನ್ನು ಪಡೆದುಕೊಂಡಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


