ಬಿಹಾರ ವಿಧಾನಸಭೆ ಚುನಾವಣೆ ಮತದಾನ ನಡೆದು, ಫಲಿತಾಂಶ ಪ್ರಕಟವಾಗುವ ಮೊದಲೇ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ದಿನಾಂಕ ಘೋಷಣೆ ಮಾಡಿದ್ದಾರೆ. ಬಿಹಾರದ ವಿರೋಧ ಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ ಈಗಾಗಲೇ ತೇಜಸ್ವಿ ಯಾದವ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎ, ಕಾಂಗ್ರೆಸ್-ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಚುನಾವಣೆಯಲ್ಲಿ ಎದುರಾಳಿಗಳು.
ಪ್ರಮಾಣ ವಚನ ದಿನಾಂಕ ಘೋಷಣೆ: ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ದಿನಾಂಕ ಘೋಷಣೆ ಮಾಡಿದ್ದಾರೆ.
ತೇಜಸ್ವಿ ಯಾದವ್ ಮಾತನಾಡಿ, “ನವೆಂಬರ್ 14ರಂದು ನಾವು ಗೆಲ್ಲುತ್ತೇವೆ. ನವೆಂಬರ್ 1ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದೇನೆ” ಎಂದು ಘೋಷಣೆ ಮಾಡಿದರು.
“ರಾಜ್ಯದಲ್ಲಿ ಅಪರಾಧ ರಹಿತವಾದ ಒಂದು ದಿನವೂ ಇಲ್ಲ ಎಂಬದನ್ನು ಎಲ್ಲರೂ ಗಮನಿಸಬೇಕು. ಆದರೆ ಮಹಾಘಟಬಂಧನ್ ಸರ್ಕಾರ ರಚನೆ ಬಳಿಕ ಅದೆಲ್ಲವೂ ನಿಲ್ಲಲಿದೆ. ನವೆಂಬರ್ 14ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ನವೆಂಬರ್ 18ಕ್ಕೆ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವೆ” ಎಂದು ತೇಜಸ್ವಿ ಯಾದವ್ ಹೇಳಿದರು.
“ನವೆಂಬರ್ 26 ರಿಂದ ಜನವರಿ 26ರ ಅವಧಿ ಖಾರ್ ಮಾಸ. ಈ ಅವಧಿಯಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ವೇಳೆ ಜಾತಿ, ಧರ್ಮ ಎನ್ನುವ ಯಾವುದೇ ಭೇದವಿಲ್ಲದೇ ರಾಜ್ಯದ ಎಲ್ಲಾ ಕ್ರಿಮಿನಲ್ಗಳನ್ನು ಜೈಲಿಗೆ ಹಾಕುತ್ತೇನೆ” ಎಂದು ತೇಜಸ್ವಿ ಯಾದವ್ ಘೋಷಿಸಿದರು.
ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದನ್ನು ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟದ ಪಕ್ಷಗಳು ಲೇವಡಿ ಮಾಡಿವೆ. ಚುನಾವಣಾ ಪ್ರಚಾರದಲ್ಲಿ ಈ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಆರ್ಜೆಡಿಯನ್ನು ವ್ಯಂಗ್ಯವಾಡುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ, “ಕಾಂಗ್ರೆಸ್ನವರಿಗೆ ಆರ್ಜೆಡಿ ನಾಯಕ ತೇಜಸ್ವಿಯಾದವ್ ಕಂಡರೆ ಆಗುವುದಿಲ್ಲ. ಆದರೆ ಲಾಲೂ ಪಕ್ಷ ಕಾಂಗ್ರೆಸ್ ನಾಯಕರ ಹಣೆಗೆ ಬಂದೂಕು ಇಟ್ಟು ಸಿಎಂ ಪಟ್ಟವನ್ನು ಪಡೆದುಕೊಂಡಿದೆ” ಎಂದು ಹೇಳಿದ್ದಾರೆ.
“ಆರ್ಜೆಡಿಗೆ ಸಿಎಂ ಸ್ಥಾನ ಬಿಟ್ಟುಕೊಡುವುದು ಕಾಂಗ್ರೆಸ್ಗೆ ಎಂದಿಗೂ ಇಷ್ಟ ಇರಲಿಲ್ಲ. ಆದರ ಆರ್ಜೆಡಿ ಹಣೆಗೆ ಗುಂಡಿಟ್ಟು ಸಿಎಂ ಸ್ಥಾನವನ್ನು ಪಡೆದುಕೊಂಡಿತು. ಇದನ್ನು ಅವರು ಜಂಗಲ್ ರಾಜ್ಯದ ಶಾಲೆಯಲ್ಲಿ ಕಲಿತಿದ್ದಾರೆ. ಇದು ಬಿಹಾರಕ್ಕೆ ಖಂಡಿತ ಒಳ್ಳೆಯದಲ್ಲ” ಎಂದು ಮೋದಿ ತಿಳಿಸಿದ್ದಾರೆ.
“ಜಂಗಲ್ ರಾಜ್ಯದ ಯುವರಾಜ ಮತ್ತೊಬ್ಬ ಯುವರಾಜ ನಡೆಸಿದ ಮತ ಅಧಿಕಾರ ಯಾತ್ರೆ ತನಗೆ ಧಕ್ಕೆ ತರಬಹುದು ಎಂದು ಲೆಕ್ಕಾಚಾರ ಹಾಕಿದ್ದಾರೆ. ಆದ್ದರಿಂದ ಆರ್ಜೆಡಿ ಕಾಂಗ್ರೆಸ್ ರಾಜ್ಯಾಧ್ಯಕ್ಷರ ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಚುನಾವಣೆ ಬಳಿಕ ಎರಡೂ ಪಕ್ಷಗಳ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ” ಎಂದು ಮೋದಿ ಭವಿಷ್ಯ ನುಡಿದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಪ್ರಚಾರ ಮಾಡುವಾಗ, “ತೇಜಸ್ವಿ ಯಾದವ್ ಗೆದ್ದರೆ ರಾಜ್ಯದಲ್ಲಿ ಕೊಲೆ, ಸುಲಿಗೆ, ಅಪಹರಣ ಖಚಿತ. ರಾಜ್ಯದ ಸಂಪುಟದಲ್ಲಿ ಕೊಲೆ, ಸುಲಿಗೆ, ಅಪಹರಣ ಎನ್ನುವ ಮೂರು ಖಾತೆಗಳನ್ನು ರಚನೆ ಮಾಡಲಾಗುತ್ತದೆ. ಜಂಗಲ್ ರಾಜ್ಯವನ್ನು ತರಲು ಆರ್ಜೆಡಿ ಬಯಸುತ್ತಿದೆ. ನೀವು ಎನ್ಡಿಎಗೆ ಮತ ನೀಡಿದರೆ ಜಂಗಲ್ ರಾಜ್ಯದಿಂದ ಬಿಹಾರನ್ನು ರಕ್ಷಿಸಬಹುದು” ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


