ಇಂಡಿಗೋ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಶುಕ್ರವಾರ ಸಹ ಮುಂದುವರೆದಿದೆ. ದೇಶದ ವಿವಿಧ ವಿಮಾನ ನಿಲ್ದಾಣದಲ್ಲಿ ಇಂದು ಸಹ ಹಲವು ವಿಮಾನಗಳು ರದ್ದುಗೊಂಡಿವೆ. ಗುರುವಾರ ಒಟ್ಟು 719 ಇಂಡಿಗೋ ವಿಮಾನಗಳ ಹಾರಾಟ ರದ್ದುಗೊಂಡಿತ್ತು ಎಂಬ ಮಾಹಿತಿ ಸಿಕ್ಕಿದೆ.
ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಬಿಕ್ಕಟ್ಟಿನ ಹಿನ್ನಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮಹತ್ವದ ತೀರ್ಮಾನವೊಂದನ್ನು ಶುಕ್ರವಾರ ಕೈಗೊಂಡಿದೆ. ಈ ಕುರಿತು ವಿಮಾನಯಾನ ಸಂಸ್ಥೆಗಳು, ಪೈಲೆಟ್ಗಳಿಗೆ ಮಾಹಿತಿ ನೀಡಿದೆ.
ಇಂಡಿಗೋ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಡಿಜಿಸಿಎ ಪೈಲೆಟ್ಗಳ ವಿಶ್ರಾಂತಿ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಿದೆ. ಈ ಹಿಂದೆ ಹೊರಡಿಸಿದ್ದ ಆದೇಶವನ್ನು ತತ್ಕ್ಷಣದಿಂದಲೇ ವಾಪಸ್ ಪಡೆದುಕೊಂಡಿದೆ.
ಕಳೆದ 4 ದಿನಗಳಲ್ಲಿ 1000ಕ್ಕೂ ಅಧಿಕ ಇಂಡಿಗೋ ವಿಮಾನಗಳು ಸಿಬ್ಬಂದಿಗಳ ಕೊರತೆ ಕಾರಣ ರದ್ದುಗೊಂಡಿರುವುದು, ವಿಳಂಬವಾಗಿರುವ ಹಿನ್ನಲೆಯಲ್ಲಿ ತುರ್ತು ಕ್ರಮವಾಗಿ ಶುಕ್ರವಾರ ಪೈಲೆಟ್ಗಳ ವಿಶ್ರಾಂತಿ ನಿಯಮದ ಕುರಿತು ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆದಿದೆ.
ಪೈಲೆಟ್ಗಳಿಗೆ ವಾರದ ವಿಶ್ರಾಂತಿ ನೀಡುವ ಕುರಿತು ಹೊಸದಾಗಿ ಹೊರಡಿಸಿದ್ದ ನಿಯಮವನ್ನು ವಾಪಸ್ ಪಡೆಯಲಾಗಿದೆ. ಆದರೆ ಶುಕ್ರವಾರ ಸಹ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ವಿವಿಧ ನಗರದಲ್ಲಿ ಹಲವಾರು ಇಂಡಿಗೋ ವಿಮಾನಗಳು ರದ್ದುಗೊಂಡಿದ್ದು, ಪ್ರಯಾಣಿಕರು ವಿಮಾನಯಾನ ಸಂಸ್ಥೆ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಡಿಜಿಸಿಎ ಪ್ರಕಟಣೆ: ಡಿಜಿಸಿಎ ತನ್ನ ಪ್ರಕಟಣೆಯಲ್ಲಿ, ಪ್ರಸ್ತುತ ಕಾರ್ಯಾಚರಣೆ ವ್ಯತ್ಯಯಗಳು ಹಾಗೂ ಕಾರ್ಯಾಚರಣೆಗಳ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯದ ಬಗ್ಗೆ ವಿವಿಧ ಏರ್ಲೈನ್ಸ್ಗಳಿಂದ ಬಂದ ಮನವಿಗಳನ್ನು ಪರಿಗಣಿಸಿ, ಸಾಪ್ತಾಹಿಕ ವಿಶ್ರಾಂತಿಗೆ ಬದಲಾಗಿ ಯಾವುದೇ ರಜೆಯನ್ನು ಬಳಸಬಾರದು ಎಂದು ಉಲ್ಲೇಖಿತ ಪರಿಚ್ಛೇದದಲ್ಲಿ ನೀಡಲಾಗಿದ್ದ ಸೂಚನೆಯನ್ನು ತಕ್ಷಣದಿಂದಲೇ ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳ ಸಹಕಾರ, ಪೈಲೆಟ್ಗಳನ್ನು ಒದಗಿಸುವ ಸಂಸ್ಥೆಗಳ ಸಹಕಾರ, ಪೈಲೆಟ್ಗಳ ಸಹಕಾರ ನಮಗೆ ಅಗತ್ಯವಾಗಿದೆ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ನೀವು ಕೈಜೋಡಿಸಿ ಎಂದು ಡಿಜಿಸಿಎ ಮನವಿಯನ್ನು ಮಾಡಿದೆ.
ಇಂಡಿಗೋ ತನ್ನ ಪ್ರಕಟಣೆಯಲ್ಲಿ ಡಿಸೆಂಬರ್ 5ರಂದು ದೆಹಲಿ ವಿಮಾನ ನಿಲ್ದಾಣದಿಂದ ಹೊರಡುವ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳು ರಾತ್ರಿ 11:59ರವರೆಗೆ ರದ್ದುಗೊಂಡಿವೆ. ಈ ಕಾರಣಕ್ಕಾಗಿ ಗ್ರಾಹಕರಿಂದ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ.
ಪ್ರಯಾಣಿಕರಿಗೆ ಸಹಾಯ ಮಾಡಲು ಅವರಿಗೆ ಮುಂದೆ ಲಭ್ಯವಾಗುವ ವಿಮಾನ, ತಿನಿಸು, ಪಾನೀಯಗಳು, ಹೋಟೆಲ್ ವಸತಿ, ಬ್ಯಾಗೇಜ್ ಹಿಂತಿರುಗಿಸಿಕೊಳ್ಳುವ ಸಹಾಯ ಹಾಗೂ ಸಂಪೂರ್ಣ ಮರುಪಾವತಿ ಇವೆಲ್ಲವನ್ನು ನಾವು ಒದಗಿಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂಡಿಗೋ ವಿಮಾನ ಸೇವೆ ರದ್ದುಗೊಂಡ ಕಾರಣ ಉತ್ತರ ಪ್ರದೇಶದ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರು ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳ ನಡುವೆ ಗಲಾಟೆ ನಡೆದಿದೆ. ಪೊಲೀಸರು ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಬಹಳ ಶ್ರಮಪಡೆಬೇಕಾಯಿತು.
ಇಂಡಿಗೋ ನಾವು ಕ್ಷಮೆಯಾಚಿಸುತ್ತೇವೆ ಮತ್ತು ಕಳೆದ ಕೆಲವು ದಿನಗಳು ನಿಮ್ಮಲ್ಲಿ ಅನೇಕರಿಗೆ ಎಷ್ಟು ಕಷ್ಟ ಎದುರಾದವು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಇದು ಒಂದೇ ರಾತ್ರಿ ಸರಿಯಾಗುವುದಿಲ್ಲವೆಂದು ನಮಗೆ ತಿಳಿದಿದೆ. ಆದರೆ ಈ ಅವಧಿಯಲ್ಲಿ ನಿಮಗೆ ಸಹಾಯ ಮಾಡಲು ಮತ್ತು ನಮ್ಮ ಕಾರ್ಯಾಚರಣೆಗಳನ್ನು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಮರಳಿಸಲು ನಾವು ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂಬ ವಿಶ್ವಾಸವನ್ನು ನೀಡುತ್ತೇವೆ ಎಂದು ಹೇಳಿದೆ.
ನಮ್ಮ ಸೇವೆಗಾಗಿ ನಾವು ಪ್ರಸಿದ್ಧರಾಗಿದ್ದರೂ, ಕಳೆದ ಕೆಲವು ದಿನಗಳಲ್ಲಿ ನಾವು ಗಂಭೀರ ಕಾರ್ಯಾಚರಣೆಯ ಸಂಕಷ್ಟವನ್ನು ಎದುರಿಸಿದ್ದೇವೆ. ಅನೇಕ ಜನರ ಪ್ರಯಾಣಗಳು ರದ್ದಾಗಿವೆ ಮತ್ತು ಅನೇಕರು ವಿಮಾನ ನಿಲ್ದಾಣಗಳಲ್ಲಿ ದೀರ್ಘ ಕಾಲ ಕಾಯುವಂತೆ ಆಗಿದೆ. ನಮ್ಮ ಎಲ್ಲಾ ವ್ಯವಸ್ಥೆಗಳು ಮತ್ತು ವೇಳಾಪಟ್ಟಿಗಳನ್ನು ಮರುಪ್ರಾರಂಭಿಸಲು, ನಾಳೆಯಿಂದ ಹಂತ ಹಂತವಾಗಿ ಸುಧಾರಣೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


