ಭಾರತ–ರಷ್ಯಾದ 23ನೇ ವಾರ್ಷಿಕ ಶೃಂಗಸಭೆ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ ಹೌಸ್ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ವ್ಲಾದಿಮಿರ್ ಪುಟಿನ್, “ಬೆಳೆಯುತ್ತಿರುವ ಭಾರತದ ಆರ್ಥಿಕತೆಗೆ ಅಗತ್ಯವಾದ ಇಂಧನವನ್ನು ನಿರಂತರವಾಗಿ ಸರಬರಾಜು ಮಾಡಲು ನಾವು ಸಿದ್ಧರಾಗಿದ್ದೇವೆ” ಎಂದು ಹೇಳುವ ಮೂಲಕ ಅಮೆರಿಕದ ಎಚ್ಚರಿಕೆ ನಡೆಯುವೆಯೂ ಭಾರತಕ್ಕೆ ಅಭಯ ನೀಡಿದರು.
ಭಾರತ–ರಷ್ಯಾದ 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾರತದ 2 ಹೊಸ ರಷ್ಯಾ ರಾಯಭಾರ ಕಚೇರಿ ಸ್ಥಾಪನೆ, ರಷ್ಯಾ ನಾಗರೀಕರಿಗೆ 30 ದಿನದ ಉಚಿತ ಪ್ರವಾಸ ವೀಸಾ ನೀಡುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಗಳು ನಡೆದವು. ಬಳಿಕ ಉಭಯ ನಾಯಕರು ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, “ಈ ವರ್ಷ ಅಕ್ಟೋಬರ್ನಲ್ಲಿ ಲಕ್ಷಾಂತರ ಭಕ್ತರು ಕಲ್ಮೈಕಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಬೌದ್ಧ ವೇದಿಕೆಯಲ್ಲಿ ಭಗವಾನ್ ಬುದ್ಧರ ಆಶೀರ್ವಾದವನ್ನು ಪಡೆದಿದ್ದರು. ರಷ್ಯಾ ನಾಗರಿಕರಿಗಾಗಿ ಉಚಿತ 30 ದಿನಗಳ ಇ-ಟೂರಿಸ್ಟ್ ಗುಂಪು ವೀಸಾ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ” ಎಂದು ಹೇಳಿದರು.
“ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಷ್ಯಾ ಬಹಳ ಕಾಲದಿಂದಲೂ ಪರಸ್ಪರ ಹೆಗಲಿಗೆ ಹೆಗಲುಕೊಟ್ಟು ನಿಂತಿವೆ. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಆಗಲಿ ಅಥವಾ ಕ್ರೊಕಸ್ ಸಿಟಿ ಹಾಲ್ ಮೇಲೆ ನಡೆದ ದಾಳಿ ಆಗಲಿ ಈ ಎಲ್ಲಾ ಘಟನೆಗಳ ಬೇರು ಒಂದೇ. ಭಯೋತ್ಪಾದನೆ ಮಾನವೀಯ ಮೌಲ್ಯಗಳ ಮೇಲೆ ನೇರ ದಾಳಿ ಎಂದು ಭಾರತ ದೃಢವಾಗಿ ನಂಬುತ್ತದೆ ಮತ್ತು ಅದರ ವಿರುದ್ಧ ಜಾಗತಿಕ ಏಕತೆ ನಮ್ಮ ಅತ್ಯಂತ ದೊಡ್ಡ ಶಕ್ತಿ. ಜಿ20, ಬ್ರಿಕ್ಸ್, ಎಸ್ಸಿಒ ಮತ್ತು ಇತರೆ ವೇದಿಕೆಗಳಲ್ಲಿ ಭಾರತ ಮತ್ತು ರಷ್ಯಾ ಆಪ್ತ ಸಹಕಾರವನ್ನು ಹೊಂದಿವೆ. ಈ ಎಲ್ಲಾ ವೇದಿಕೆಗಳಲ್ಲಿ ನಮ್ಮ ಸಹಕಾರವನ್ನು ಮುಂದುವರಿಸುತ್ತೇವೆ” ಎಂದು ಮೋದಿ ತಿಳಿಸಿದರು.
ನರೇಂದ್ರ ಮೋದಿ, “ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಆದ್ಯತೆಯಾಗಿದೆ. ಆದ್ದರಿಂದ ನಾವು 2030ರ ತನಕ ಆರ್ಥಿಕ ಸಹಕಾರ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ದೇವೆ” ಎಂದರು.
“ಮೊದಲಿನಿಂದಲೂ ಭಾರತ ಉಕ್ರೇನ್ನಲ್ಲಿ ಶಾಂತಿಯನ್ನು ಬಯಸುತ್ತದೆ. ಶಾಂತಿ ಸ್ಥಾಪನೆಗಾಗಿ ಮಾಡುತ್ತಿರುವ ಎಲ್ಲಾ ಪ್ರಯತ್ನ ಮತ್ತು ಕೈಗೊಂಡಿರುವ ಕ್ರಮಗಳನ್ನು ಭಾರತ ಸ್ವಾಗತಿಸುತ್ತದೆ. ಇದಕ್ಕಾಗಿ ಭಾರತ ಈಗ ನೀಡುತ್ತಿರುವ ಸಹಕಾರವನ್ನು ಭವಿಷ್ಯದಲ್ಲಿಯೂ ಮುಂದುವರೆಸಲು ಸಿದ್ಧವಾಗಿದೆ” ಎಂದು ನರೇಂದ್ರ ಮೋದಿ ಹೇಳಿದರು.
ವ್ಲಾದಿಮಿರ್ ಪುಟಿನ್ ಮಾತು: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತನಾಡಿ, “ನಾನು ರಷ್ಯಾದ ನಿಯೋಗಕ್ಕೆ ಅದ್ದೂರಿಯ ಸ್ವಾಗತಕ್ಕಾಗಿ ಭಾರತದ ರಾಷ್ಟ್ರಪತಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ನೀಡಿದ ಔತಣಕೂಟಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದರು.
“ಕಳೆದ ಅರ್ಧ ಶತಮಾನದ ಕಾಲದಿಂದ ನಮ್ಮ ದೇಶವು ಭಾರತೀಯ ಸೇನೆಗೆ ವಾಯು ರಕ್ಷಣಾ ಪಡೆಗಳು, ವಿಮಾನಯಾನ ಹಾಗೂ ನೌಕಾಪಡೆಯನ್ನು ಶಸ್ತ್ರಸಜ್ಜಿತಗೊಳಿಸಲು ಮತ್ತು ಆಧುನಿಕಗೊಳಿಸಲು ಸಹಾಯ ಮಾಡುತ್ತಿದೆ. ನಾವು ನಡೆಸಿದ ಮಾತುಕತೆಗಳ ಫಲಿತಾಂಶಗಳಿಂದ ಯಾವುದೇ ಸಂದೇಹವಿಲ್ಲದೆ ನಾವು ತೃಪ್ತರಾಗಿದ್ದೇವೆ” ಎಂದು ವ್ಲಾದಿಮಿರ್ ಪುಟಿನ್ ಹೇಳಿದರು.
“ಪ್ರಸ್ತುತ ಭೇಟಿ ಹಾಗೂ ಮಾಡಿಕೊಂಡ ಒಪ್ಪಂದಗಳು ಭಾರತ ಮತ್ತು ರಷ್ಯಾ ಜನರ ಹಿತಕ್ಕೆ ಸಹಾಯಕವಾಗಿವೆ. ಇದು ರಷ್ಯಾ–ಭಾರತದ ಸಹಭಾಗಿತ್ವವನ್ನು ಇನ್ನಷ್ಟುಗಟ್ಟಿಗೊಳಿಸಲು ನೆರವಾಗುತ್ತದೆ ಎಂಬ ವಿಶ್ವಾಸವನ್ನು ನಾನು ವ್ಯಕ್ತಪಡಿಸುತ್ತೇನೆ” ಎಂದರು.
“ಬ್ರಿಕ್ಸ್ನ ರಾಷ್ಟ್ರಗಳಾದ ರಷ್ಯಾ ಮತ್ತು ಭಾರತ ಸಂಸ್ಥೆಯ ಗೌರವ ಮತ್ತು ಪ್ರಭಾವವನ್ನು ಹೆಚ್ಚಿಸಲು ಈಗಾಗಲೇ ಬಹಳಷ್ಟು ಕಾರ್ಯಗಳನ್ನು ಮಾಡಿವೆ ಇನ್ನೂ ಮುಂದುವರಿಸುತ್ತಿವೆ. ಮುಂದಿನ ವರ್ಷದ ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ಸ್ವೀಕರಿಸಿದೆ. ನಮ್ಮ ಸ್ನೇಹಿತ ಭಾರತಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ನಾವು ಒದಗಿಸುತ್ತೇವೆ” ಎಂದು ಪುಟಿನ್ ಹೇಳಿದರು.
“ರಷ್ಯಾ ಅಥವಾ ಬೆಲಾರಸ್ನಿಂದ ಭಾರತೀಯ ಸಮುದ್ರ ತೀರದವರೆಗೆ ಉತ್ತರ–ದಕ್ಷಿಣ ಸಾರಿಗೆ ಮಾರ್ಗವನ್ನು ನಿರ್ಮಿಸುವ ಯೋಜನೆ ಸೇರಿದಂತೆ, ಹೊಸ ಅಂತರರಾಷ್ಟ್ರೀಯ ಸಾರಿಗೆ ಮಾರ್ಗಗಳನ್ನು ನಿರ್ಮಿಸಲು ನಾವು ನಮ್ಮ ಭಾರತೀಯ ಭಾಗಿದಾರರ ಜೊತೆ ಕೆಲಸ ಮಾಡುತ್ತಿದ್ದೇವೆ. ಭಾರತದ ಅತಿ ದೊಡ್ಡ ಅಣು ವಿದ್ಯುತ್ ಸ್ಥಾವರವನ್ನು ನಿರ್ಮಿಸುವ ಯೋಜನೆಯ ಮೇಲೂ ನಾವು ಕೆಲಸ ಮಾಡುತ್ತಿದ್ದೇವೆ. 6 ರಿಯಾಕ್ಟರ್ಗಳಲ್ಲಿ ಮೂರು ಈಗಾಗಲೇ ವಿದ್ಯುತ್ ಜಾಲಕ್ಕೆ ಸಂಪರ್ಕಗೊಂಡಿವೆ” ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


