ನಟ ದರ್ಶನ್ ಜೈಲಿಗೆ ಕಳಿಸಿದ ಹಿರಿಯ ವಕೀಲ ಪಿ.ಪ್ರಸನ್ನ ಕುಮಾರ್ ಮತ್ತೊಂದು ಹೈ ಪ್ರೋಫೈಲ್ ಕೇಸ್ಗೆ ಎಸ್ಪಿಪಿಯಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ನಗರದ ಮಾರತ್ಹಳ್ಳಿಯಲ್ಲಿ ನಡೆದ ಈ ಕೊಲೆ ಪ್ರಕರಣ ಸಹ ಸಂಚಲನಕ್ಕೆ ಕಾರಣವಾಗಿತ್ತು.
ಕರ್ನಾಟಕ ಸರ್ಕಾರ ಡಾ.ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ವಾದ ಮಂಡಿಸಲು ಪಿ.ಪ್ರಸನ್ನ ಕುಮಾರ್ ಅವರನ್ನು ಎಸ್ಪಿಪಿಯಾಗಿ ನೇಮಕ ಮಾಡಿದೆ. ಕೃತಿಕಾ ರೆಡ್ಡಿಯನ್ನು ಆಕೆಯ ಪತಿ ಡಾ. ಮಹೇಂದ್ರ ರೆಡ್ಡಿ ಅನಸ್ತೇಶಿಯಾ ನೀಡಿ ಹತ್ಯೆ ಮಾಡಿದ್ದರು.
ಕೃತಿಕಾ ರೆಡ್ಡಿ ಸಾವನ್ನಪ್ಪಿದ 6 ತಿಂಗಳ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಆಕೆಯನ್ನು ಅನಸ್ತೇಶಿಯಾ ನೀಡಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು. ಪೊಲೀಸರು ಆಕೆಯ ಪತಿ ಡಾ.ಮಹೇಂದ್ರ ರೆಡ್ಡಿ ಬಂಧಿಸಿದ್ದರು.
ಕೃತಿಕಾ ರೆಡ್ಡಿ ಹತ್ಯೆ ಮಾಡಿದ ಬಳಿಕ ಡಾ.ಮಹೇಂದ್ರ ರೆಡ್ಡಿ ಪ್ರಿಯತಮೆಗೆ ಮಾಡಿದ ಮೆಸೇಜ್ಗಳ ಚಾಟ್ಗಳು ಪೊಲೀಸರಿಗೆ ಸಿಕ್ಕಿತ್ತು. ಕೃತಿಕಾ ರೆಡ್ಡಿ ಪೋಷಕರು ನೀಡಿದ ದೂರಿನ ಅನ್ವಯ ಡಾ.ಮಹೇಂದ್ರ ರೆಡ್ಡಿ ಬಂಧಿಸಲಾಗಿತ್ತು. ಈಗ ಕೇಸ್ ಅನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಸ್ಪಿಪಿಯಾಗಿ ಪ್ರಸನ್ನ ಕುಮಾರ್ ನೇಮಕ ಮಾಡಲಾಗಿದೆ.
ದರ್ಶನ್ ಜೈಲಿಗೆ ಕಳಿಸಿ ಪಿ. ಪ್ರಸನ್ನ ಕುಮಾರ್: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ ಎಂಬ ಆರೋಪ ಕಳಿ ಬಂದ ತಕ್ಷಣ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು.
ಆಗ ಸರ್ಕಾರ ಈ ಪ್ರಕರಣದಲ್ಲಿ ವಾದ ಮಂಡಿಸಲು ಪಿ. ಪ್ರಸನ್ನ ಕುಮಾರ್ ಅವರನ್ನು ನೇಮಕ ಮಾಡಿತ್ತು. ಆದರೆ ಅವರನ್ನು ಬದಲಾವಣೆ ಮಾಡಲು ಸಹ ಪ್ರಯತ್ನ ನಡೆಸಲಾಗಿತ್ತು ಎಂಬ ಮಾಹಿತಿ ಇದೆ. ಆದರೆ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೇ ಅವರನ್ನು ಕೇಸ್ನಲ್ಲಿ ಮುಂದುವರೆಸಿತ್ತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎ-2 ಆರೋಪಿ. ಜೈಲಿನಲ್ಲಿದ್ದ ದರ್ಶನ್ಗೆ ಜಾಮೀನು ಸಿಗದಂತೆ ಸಮರ್ಥವಾಗಿ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು. ದರ್ಶನ್ ಹೈಕೋರ್ಟ್ನಿಂದ ಜಾಮೀನು ಪಡೆದರೂ ಪುನಃ ಅದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿ, ಜಾಮೀನು ರದ್ದುಗೊಳಿಸು ದರ್ಶನ್ ಜೈಲು ಸೇರುವಂತೆ ಮಾಡುವಲ್ಲಿ ಪಿ. ಪ್ರಸನ್ನ ಕುಮಾರ್ ಸಮರ್ಥವಾಗಿ ವಾದ ಮಂಡಿಸಿದ್ದಾರೆ.
ಕೃತಿಕಾ ರೆಡ್ಡಿ ಕೊಲೆ: ಡಾ. ಕೃತಿಕಾ ರೆಡ್ಡಿ ಮತ್ತು ಡಾ.ಮಹೇದ್ರ ರೆಡ್ಡಿ ವಿವಾಹ 2024ರ ಮೇ 26ರಂದು ನಡೆದಿತ್ತು. ಆದರೆ ಕೃತಿಕಾ ರೆಡ್ಡಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದರು ಎಂಬುದು ಆರೋಪ. ಮದುವೆ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ಅಲ್ಲದೇ ಆತ ಬೇರೆ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಡಾ.ಕೃತಿಕಾಗೆ ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ್ದ. ಕೃತಿಕಾ ಹತ್ಯೆ ಮಾಡಿದ ಬಳಿಕ ಡಾ.ಮಹೇದ್ರ ರೆಡ್ಡಿ ಐ ಕಿಲ್ಡ್ ಕೃತಿಕಾ ಫಾರ್ ಯೂ ಎಂದು ಯುವತಿಯೊಬ್ಬಳಿಗೆ ಮೆಸೇಜ್ ಕಳಿಸಿದ್ದ.
ಡಾ.ಕೃತಿಕಾ ರೆಡ್ಡಿ ಪೋಷಕರು ಆಗರ್ಭ ಶ್ರೀಮಂತರು. ಡಾ.ಮಹೇಂದ್ರ ರೆಡ್ಡಿ ಸಹ ಶ್ರೀಮಂತರು. ಆದ್ದರಿಂದ ಹಣಕಾಸಿನ ವಿಚಾರದ ತೊಂದರೆ ಇರಲಿಲ್ಲ. ಡಾ.ಮಹೇಂದ್ರ ರೆಡ್ಡಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಸಹ ಕೃತಿಕಾ ಪೋಷಕರು ಸಹಾಯ ಮಾಡಿದ್ದರು. ಆದರೆ ಡಾ.ಮಹೇಂದ್ರ ರೆಡ್ಡಿ ಇಂಜೆಕ್ಷನ್ ನೀಡಿ ಕೃತಿಕಾ ಹತ್ಯೆ ಮಾಡಿದ್ದರು.
ಕೃತಿಕಾ ರೆಡ್ಡಿ ಹತ್ಯೆ ಬಳಿಕ ಆಕೆಯ ಹೆಸರಿನಲ್ಲಿದ್ದ ಮೂರು ಕೋಟಿ ರೂ. ಮೌಲ್ಯದ ಬಂಗಲೆಯನ್ನು ಆಕೆಯ ಪೋಷಕರು ದಾನ ಮಾಡಿದ್ದರು. ಕೃತಿಕಾ ತಂದೆ ಮುನಿರೆಡ್ಡಿ ಡಾ.ಮಹೇಂದ್ರ ರೆಡ್ಡಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


