ರಾಜ್ಯ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಸೆ. 22ರಿಂದ ಅಕ್ಟೋಬರ್ 7ರವರೆಗೂ ‘ಮನೆ ಮನೆ ಸಮೀಕ್ಷೆ’ ನಡೆಯಲಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯದ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಕಾರ್ಯವಾಗಿದೆ.
ರಾಜ್ಯಾಧ್ಯಂತ ಮನೆ ಮನೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಅಂಗವಾಗಿ UHID ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದಲ್ಲಿ ಎಸ್ಕಾಂ ಇಲಾಖೆಯಿಂದ ಪ್ರತಿ ಮನೆಗೂ ಯು.ಹೆಚ್.ಐ.ಡಿ (UHID) ನಂಬರ್ ಜನರೇಟ್ ಮಾಡಿ, ಸ್ಟಿಕ್ಕರ್ ಅಂಟಿಸುವ ಕಾರ್ಯ ನಡೆಯುತ್ತಿದೆ. ಆಯೋಗದ ಸಿಬ್ಬಂದಿ (ಗಣತಿದಾರರು) ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಇದಕ್ಕಾಗಿ, ಅವರು ಪ್ರತಿ ಮನೆಗೆ ಇರುವ ವಿದ್ಯುತ್ ಸಂಪರ್ಕದ ಆರ್.ಆರ್. ಸಂಖ್ಯೆಯನ್ನು (RR Number) ಆಧಾರವಾಗಿ ಬಳಸಿಕೊಳ್ಳುತ್ತಾರೆ. ಇದು ಯಾವುದೇ ಮನೆ ಸಮೀಕ್ಷೆಯಿಂದ ವ್ಯಾಪ್ತಿಯಿಂದ ಬಿಟ್ಟುಹೋಗದಂತೆ ಖಚಿತಪಡಿಸುತ್ತದೆ.
ಹೀಗೆ ಜನರೇಟ್ ಮಾಡಿದ ಎಲ್ಲಾ ಮನೆ ಐಡಿಗಳನ್ನು ಒಟ್ಟುಗೂಡಿಸಿ, ಆಯೋಗವು ಪ್ರತಿ ಪ್ರದೇಶವನ್ನು ನಿರ್ದಿಷ್ಟ ‘ಗಣತಿ ಬ್ಲಾಕ್’ಗಳಾಗಿ (Enumeration Blocks – EB) ವಿಂಗಡಿಸುತ್ತದೆ. ಸಾಮಾನ್ಯವಾಗಿ, ಒಂದು ಎನ್ಯೂಮರೇಷನ್ ಬ್ಲಾಕ್ನಲ್ಲಿ 100 ರಿಂದ 120 ಮನೆಗಳು ಇರುತ್ತವೆ. ಈ ಬ್ಲಾಕ್ಗಳನ್ನು ರಚಿಸುವುದರಿಂದ, ಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗುತ್ತದೆ. ಮನೆ ಪಟ್ಟಿ ಪ್ರಕ್ರಿಯೆ ಪೂರ್ಣಗೊಂಡು ಎನ್ಯೂಮರೇಷನ್ ಬ್ಲಾಕ್ಗಳು ಸಿದ್ಧವಾದ ನಂತರ, ಸಮೀಕ್ಷೆಯ ಎರಡನೇ ಮತ್ತು ಅತಿ ಮುಖ್ಯವಾದ ಹಂತ ಆರಂಭವಾಗುತ್ತದೆ.
ನೇಮಕಗೊಂಡ ಗಣತಿದಾರರು, ಇದೇ ಸೆಪ್ಟೆಂಬರ್ 22 ರಿಂದ ತಮಗೆ ನಿಗದಿಪಡಿಸಿದ ಬ್ಲಾಕ್ನಲ್ಲಿರುವ ಪ್ರತಿ ಮನೆಗೆ ಭೇಟಿ ನೀಡುತ್ತಾರೆ. ಅಲ್ಲಿ ಅವರು ಆಯೋಗವು ಸಿದ್ಧಪಡಿಸಿದ ಪ್ರಶ್ನಾವಳಿಯನ್ನು ಬಳಸಿ, ಕುಟುಂಬದ ಪ್ರತಿಯೊಬ್ಬ ಸದಸ್ಯನ ವಿವರಗಳನ್ನು ಸಂಗ್ರಹಿಸುತ್ತಾರೆ.
ಸಮೀಕ್ಷೆಯಲ್ಲಿ 60 ಪ್ರಶ್ನಾವಳಿವೆ. ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದ ಮೇಲೆ ಸಮೀಕ್ಷೆ ಕಾರ್ಯ ನಡೆಯಲಿದೆ. ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಕೋರಿರುವ ವಿದ್ಯಾರ್ಹತೆ, ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ವರಮಾನ, ಆರ್ಥಿಕ ಸ್ಥಿತಿಗಳ ವಿವರಗಳು, ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ಎಲ್ಲಾ ವಿವರಗಳ ಮಾಹಿತಿಯನ್ನು ನೀಡುವಂತೆ ಸರ್ಕಾರ ಮನವಿ ಮಾಡಿದೆ.
ಸಮೀಕ್ಷಾದಾರರು ಮನೆಗೆ ಭೇಟಿ ನೀಡಿದಾಗ ಪಡಿತರ ಚೀಟಿ, ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಂಖ್ಯೆ, ಅಂಗವಿಕಲರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಸಿದ್ಧವಾಗಿ ಇಟ್ಟುಕೊಂಡಿರಬೇಕು.
ಸಮೀಕ್ಷೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಕೂಡಲೇ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ, ನೋಂದಣಿ ಮಾಡಿಸಿ ಅದರ ಸಂಖ್ಯೆಯನ್ನು ಪಡೆಯಬೇಕು. ಆಧಾರ್ ಕಾರ್ಡ್ ಇದ್ದು, ಲಿಂಕ್ ಆಗಿರುವ ಮೊಬೈಲ್ ಫೋನ್ ನಂಬರ್ ಇಲ್ಲದಿದ್ದರೆ, ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ, ಪ್ರಸ್ತುತ ಬಳಸುತ್ತಿರುವ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿಸಿಕೊಳ್ಳಬೇಕು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


