ಭಾರತದ ಖ್ಯಾತ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ವಿವಾಹ ರದ್ದಾಗಿದೆ. ನವೆಂಬರ್ 23ರಂದು ಅದ್ದೂರಿಯಾಗಿ ನೆರವೇರಬೇಕಿದ್ದ ವಿವಾಹ ಮಹೋತ್ಸವ ಕೊನೆ ಕ್ಷಣದಲ್ಲಿ ನಿಂತುಹೋಗಿತ್ತು.
ಮದುವೆಯ ಹಿಂದಿನ ದಿನ ನಡೆದ ಕಾರ್ಯಕ್ರಮಗಳು ಅದ್ದೂರಿಯಾಗಿಯೇ ನಡೆದಿದ್ದವು. ವೇದಿಕೆ ಕಾರ್ಯಕ್ರಮದಲ್ಲಿ ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ಕೈ ಹಿಡಿದು ಹೆಜ್ಜೆ ಹಾಕಿದ್ದರು.
ಆದರೆ ವಿವಾಹ ದಿನದ ಬೆಳಗ್ಗೆ ಸ್ಮೃತಿ ಮಂಧಾನ ತಂದೆ ಶ್ರೀನಿವಾಸ್ ಮಂಧಾನ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದರು. ಹೀಗಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಬೇಕಿದ್ದ ವಿವಾಹ ರದ್ದಾಗಿತ್ತು.
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ವಿವಾಹ ರದ್ದಾಗಲು ಅಸಲಿ ಕಾರಣ ಬೇರೆಯದ್ದೇ ಇದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಯಿತು. ಪಲಾಶ್ ಮುಚ್ಚಲ್ ವಿವಾಹದ ಹಿಂದಿನ ದಿನ ನೃತ್ಯ ಸಂಯೋಜಕಿ ನಂದಿಕಾ ದ್ವಿವೇದಿ ಜತೆ ಸರಸದಲ್ಲಿ ತೊಡಗಿದ್ದರು. ಈ ವಿಷಯ ಸ್ಮೃತಿ ಕುಟುಂಬಕ್ಕೆ ತಿಳಿದು ವಿವಾಹವನ್ನು ರದ್ದು ಮಾಡಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು.
ಆದರೆ ಈ ಎಲ್ಲ ಊಹಾಪೋಹಗಳಿಗೆ ಇಂದು ( ಡಿಸೆಂಬರ್ 7 ) ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ತೆರೆ ಎಳೆದಿದ್ದು, ವಿವಾಹ ರದ್ದಾಗಿದೆ ಎಂದು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಪಲಾಶ್ ಮುಚ್ಚಲ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು, ನಾನು ಮದುವೆಯಿಂದ ಹಿಂದೆ ಸರಿಯುವ ಮೂಲಕ ಜೀವನದಲ್ಲಿ ಮುಂದುವರಿಯಲಿದ್ದೇನೆ. ಜನರು ಆಧಾರವಿಲ್ಲದ ವದಂತಿಗಳನ್ನು ನಂಬಿ ಬೇಗನೆ ಮಾತನಾಡುವುದನ್ನು ನೋಡಿ ನನಗೆ ಭಯವಾಗಿದೆ. ಇದು ನನ್ನ ಜೀವನದ ಅತ್ಯಂತ ಕಠಿಣ ಹಂತವಾಗಿದ್ದು, ನಾನು ಹೋರಾಡುತ್ತೇನೆ. ಜನರು ವಿಷಯಗಳನ್ನು ಕೇಳಿದಾಗ ಅವುಗಳನ್ನು ಪರಿಶೀಲಿಸಿದ ಬಳಿಕ ಅವುಗಳ ಬಗ್ಗೆ ಮಾತನಾಡುವುದನ್ನು ಕಲಿಯಬೇಕಿದೆ. ನಮ್ಮ ಮಾತುಗಳು ಹೇಗೆ ಗಾಯ ಮಾಡುತ್ತವೆ ಎಂಬುದು ನಮಗೆ ಅರ್ಥವಾಗುವುದೇ ಇಲ್ಲ. ಈ ವಿಷಯಗಳ ಬಗ್ಗೆ ಚಿಂತಿಸಿದಾಗ ಪ್ರಪಂಚದಲ್ಲಿ ಈ ರೀತಿಯ ಪರಿಸ್ಥಿತಿ ಎದುರಿಸಿ ಬದುಕುತ್ತಿರುವ ಹಲವಾರು ಮಂದಿ ಇದ್ದಾರೆ ಎನಿಸುತ್ತದೆ. ನನ್ನ ತಂಡ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ. ನನ್ನ ಕಠಿಣ ಸಮಯದಲ್ಲಿ ನನ್ನ ಜತೆ ನಿಂತವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.
ಈ ಮೂಲಕ ವಿವಾಹ ಮುರಿದುಬಿದ್ದದ್ದು ತನ್ನ ವಿರುದ್ಧ ಕೇಳಿಬಂದ ಅಕ್ರಮ ಸಂಬಂಧ ಕಾರಣವಲ್ಲ ಎಂದು ಪಲಾಶ್ ತಿಳಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


