ಬೆಂಗಳೂರು: ಜಾತಿ ಜನಗಣತಿ ಹೆಸರಿನಲ್ಲಿ ಹಿಂದೂಗಳ ಜನಸಂಖ್ಯೆಯನ್ನು ಕುಗ್ಗಿಸಿ ಕ್ರೈಸ್ತ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ವ್ಯವಸ್ಥಿತ ಷಡ್ಯಂತ್ರ ರೂಪಿಸಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ತಕ್ಷಣವೇ ಈ ಷಡ್ಯಂತ್ರಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸರ್ಕಾರದ ತುಷ್ಟಿಕರಣದ ನೀತಿ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ಕೊಟ್ಟಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಸೇರಿದಂತೆ ಮತ್ತಿತರರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಬಿಬಿಎಂಪಿ ಮಾಜಿ ಉಪಮೇಯರ್ ಹಾಗೂ ಬೆಂಗಳೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಸ್.ಹರೀಶ್ ಮಾತನಾಡಿ, ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷ ದೇಶ ವಿಭಜನೆ ಮಾಡಿದೆ. ಇದೀಗ ಜಾತಿಗಣತಿ ಹೆಸರಿನಲ್ಲಿ ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡಿ ಕ್ರೈಸ್ತರನ್ನು ಸೇರಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಶೇಷ ಆಸಕ್ತಿ ವಹಿಸಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿದ್ದರು. ಈ ವರದಿ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.
ಸಾರ್ವಜನಿಕರ ತೆರಿಗೆ ಹಣದಿಂದ ಕಾಂತರಾಜ್ ವರದಿಗೆ 167 ಕೋಟಿ ರೂ. ಖರ್ಚು ಮಾಡಿತು. ಕಾಂಗ್ರೆಸ್ ಸರ್ಕಾರ, ಆದರೆ ಕಾಂತ್ರಾಜ್ ವರದಿ ಎಲ್ಲಿ ಹೋಯಿತು ಎಂಬದು ತಿಳಿಯದಾಗಿದೆ. ಕಾಂಗ್ರೆಸ್ ಹೈಕಮಾಂಡ್ ವರದಿ ಅನುಷ್ಠಾನಕ್ಕೆ ಬೇಡ ಎಂದು ಸೂಚಿಸಿದ್ದರಿಂದ ಅದನ್ನು ಮೂಲೆಗುಂಪು ಮಾಡಿದರು. ಅದನ್ನು ಅನುಷ್ಠಾನ ಮಾಡಬೇಡಿ ಎಂದು ಹಲವರು ಹೇಳಿದಾಗ ಕೇಳಲಿಲ್ಲ. ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್ ಹೇಳಿದಂತೆ ನಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ಹಿಂದುಳಿದ ವರ್ಗದ ಜನಗಣತಿ ಆರಂಭಿಸಿದ್ದಾರೆ. ಕ್ರೈಸ್ತರಲ್ಲಿ ಎರಡು ಜಾತಿಗಳಿಗೆ. ಲಿಂಗಾಯಿತ ಕ್ರೈಸ್ತರು, ನೇಕಾರ ಕ್ರೈಸ್ತ, ಕುಂಬಾರ ಕ್ರೈಸ್ತರು ಹಲವಾರು ಜಾತಿಗಳಲ್ಲಿ ಕ್ರೈಸ್ತರು ಎಂದು ಸೇರ್ಪಡೆ ಮಾಡಿದ್ದಾರೆ. ಧರ್ಮ ಬದಲಾಯಿಸಬೇಕು ಎಂದರೆ ಜಿಲ್ಲಾಧಿಕಾರಿ ಮುಂದೆ ಅರ್ಜಿ ಸಲ್ಲಿಸಬೇಕು. ಆದರೆ ರಾಜ್ಯ ಸರ್ಕಾರ ಏಕಾಏಕಿ ಕ್ರೈಸ್ತರಾಗಿ ಸೇರ್ಪಡೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯ ಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ಮಾಡುತ್ತಿದೆ. ಆದರೆ ಬಿಜೆಪಿ ಇದಕ್ಕೆ ಅವಕಾಶ ಕೊಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿಯೇ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಗುಡುಗಿದರು.
ಬೆಂಗಳೂರು ಸೆಂಟ್ರಲ್ ಬಿಜೆಪಿ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಮಾತನಾಡಿ ಒಡೆದಾಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ರಾಜ್ಯಕ್ಕೆ ಮಾರಕವಾಗಿದೆ. ಜನವಿರೋಧಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಮರುಕಳುಸಿದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ತಾಯಿ ಭುವನೇಶ್ವರಿ ಕುರಿತು ಅಭಿಮಾನವಿಲ್ಲದ ಭಾನು ಮುಷಾಕ್?ತ ರವರನ್ನು ಮೈಸೂರು ದಸರಾ ಉದ್ಘಾಟನೆ ನೀಡಿರುವುದು ಖಂಡನೀಯ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಮುಖಂಡ ಸೋಮಶೇಖರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗದ ಸಮುದಾಯವನ್ನು ಕ್ರೈಸ್ತ ಸಮಾಜಕ್ಕೆ ಸೇರ್ಪಡೆ ಮಾಡಿ ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡುತ್ತಿದೆ. ಹಿಂದುಳಿದ ವರ್ಗದ ಎಲ್ಲ ಸಮಾಜಗಳನ್ನು ತುಳಿಯುತ್ತಿರುವ ಸರ್ಕಾರ, ಮೀಸಲಾತಿ ಕಿತ್ತುಕೊಳ್ಳಲು ಪ್ರಯುತ್ನ ಮಾಡುತ್ತಿದೆ ಎಂದು ಕಿಡಿಕಾರಿದರು.
200ಕ್ಕೂ ಹೆಚ್ಚು ಹಿಂದುಳಿದ ವರ್ಗದ ಸಮಾಜದವರು ಸಂಘಟನೆಯಾಗಿ ಕಾಂಗ್ರೆಸ್ ಪಕ್ಷದ ಸರ್ಕಾರ ವಿರುದ್ದ ಹೋರಾಟ ಮಾಡುತ್ತಾರೆ. ಕುರುಬ ಸಮಾಜವನ್ನು ಕ್ರೈಸ್ತ ಸಮುದಾಯವಾಗಿ ಮಾರ್ಪಡು ಮಾಡಲು ಹೊರಟಿರುವ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.
ಜಂಟಿಗೋಷ್ಠಿಯಲ್ಲಿ ಯಳವ ಸಮಾಜದ ಮುಖಂಡರಾದ ಗೋವಿಂದರಾಜು,ಮಡಿವಾಳ ಸಮುದಾಯದ ರಾಜ್ಯ ಸಂಚಾಲಕರಾದ ಅಂಜಿರಪ್ಪ,ತಿಗಳರ ಸಮುದಾಯದ ರಾಜ್ಯ ಸಂಚಾಲಕ ಶ್ರೀಧರ್, ನೇಕಾರರ ಒಕ್ಕೂಟದ ರಾಜ್ಯ ಅಧ್ಯಕ್ಷ ಸೋಮಶೇಖರ್ ಮತ್ತು ವಿಶ್ವಕರ್ಮ ಸಮಾಜದ ಬಾಬುಪತ್ತರ್, ರಜಪೂತ್ ಸಮಾಜದ ಪವನ್ಕುಮಾರ್, ಮರಾಠ ಸಮಾಜ ಗಣೇಶ್ರಾವ್ ಕೇಸರ್ಕರ್ ಮತ್ತಿತರರು ಇದ್ದರು.
ಬಾಗಲಕೋಟೆಯಲ್ಲಿ ಭೀಕರ ಕೃತ್ಯ: 32 ವರ್ಷದ ಮಗನಿಗೆ ಡೀಸೆಲ್ ಸುರಿದು ಸಜೀವ ದಹನ ಮಾಡಿದ ತಂದೆ-ತಾಯಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


