Monday, July 6, 2026
spot_img
More
    spot_img
    HomeLatest newsಸಮವಸ್ತ್ರ, ಗುರುತಿನ ಚೀಟಿ: ಸರ್ಕಾರಿ ನೌಕರರಿಗೆ ಹೊಸ ಸುತ್ತೋಲೆ

    ಸಮವಸ್ತ್ರ, ಗುರುತಿನ ಚೀಟಿ: ಸರ್ಕಾರಿ ನೌಕರರಿಗೆ ಹೊಸ ಸುತ್ತೋಲೆ

    ಸಮವಸ್ತ್ರ ಹಾಗೂ ಗುರುತಿನ ಚೀಟಿ ಧರಿಸುವ ಬಗ್ಗೆ ಕರ್ನಾಟಕ ಸರ್ಕಾರದ ಸಚಿವಾಲಯ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಈ ಕುರಿತು ಡಾ.ಕೆ.ಜಿ.ಜಗದೀಶ, ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.

    Advertisement

    ಈ ಸುತ್ತೋಲೆಯು ಕರ್ನಾಟಕ ಸರ್ಕಾರದ ಸಚಿವಾಲಯದ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್‌-ಡಿ ವೃಂದದ ನೌಕರರು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ ಮತ್ತು ಗುರುತಿನ ಚೀಟಿಗಳನ್ನು ಧರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

    ಸುತ್ತೋಲೆಯ ವಿವರಗಳು: ಕರ್ನಾಟಕ ಸರ್ಕಾರ ಸಚಿವಾಲಯದ ವಿಧಾನಸೌಧ, ವಿಕಾಸಸೌಧ ಹಾಗೂ ಬಹು ಮಹಡಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್-ಡಿ ವೃಂದದ ನೌಕರರು ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿಗಳನ್ನು ಧರಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದರಿಂದ ಸಾರ್ವಜನಿಕರು ಮತ್ತು ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಗುರುತಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದ ಶಿಸ್ತಿನ ಉಲ್ಲಂಘನೆ ಆಗುತ್ತಿರುತ್ತದೆ.

    ಕರ್ನಾಟಕ ಸರ್ಕಾರ ಸಚಿವಾಲಯ ಕೈಪಿಡಿ (2005)ರ ಕಂಡಿಕೆ-48ರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್-ಡಿ ವೃಂದದ ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿರುತ್ತದೆ. ಅದರಂತೆ, ಕಚೇರಿ ಜ್ಞಾಪನ ಸಂಖ್ಯೆ ಡಿಪಿಎಆರ್ 44 ಎಎಆರ್ 79 ದಿನಾಂಕ 12.09.1980ರ ಅನುಬಂಧದಲ್ಲಿ ಡಿ-ಗುಂಪಿನ ಸಿಬ್ಬಂದಿ ವರ್ಗದ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ನಿಗದಿಪಡಿಸಲಾಗಿರುತ್ತದೆ. ಸದರಿ ಜ್ಞಾಪನದಂತೆ ಗ್ರೂಪ್-ಡಿ ವೃಂದದ ಎಲ್ಲಾ ನೌಕರರು ಸಮವಸ್ತ್ರ ಧರಿಸಿ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

    ಎಲ್ಲಾ ರೀತಿಯ ನೌಕರರು ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುವುದು ಸರ್ಕಾರದ ಕಾರ್ಯನೀತಿಯಾಗಿರುವ ಕಾರಣ, ವಾಹನ ಚಾಲಕರು ಮತ್ತು ಡಿ-ಗುಂಪಿನ ಯಾರೇ ನೌಕರನು ತಾನು ಮಾಡಬೇಕಾದ ಯಾವುದೇ ಕರ್ತವ್ಯವನ್ನು ನಿರಾಕರಿಸಿದಲ್ಲಿ 1957ರ ಕರ್ನಾಟಕ ಸರ್ಕಾರಿ ಸೇವಾ (ವರ್ಗೀಕರಣ, ನಿಯಂತ್ರಣ, ಅಪೀಲು) ನಿಯಮಾವಳಿಯ ಮೇರೆಗೆ ಕ್ರಮಕ್ಕೆ ಒಳಗಾಗತಕ್ಕದ್ದು.

    ಸರ್ಕಾರದ ಆದೇಶ ದಿನಾಂಕ 11.01.2019ರಲ್ಲಿ ರಾಜ್ಯ ಸರ್ಕಾರದ ವಿವಿಧ ವರ್ಗದ ಹುದ್ದೆಗಳಿಗೆ ಲಭವಿರುವ ಸಮವಸ್ತ್ರ ಭತ್ಯೆಯ ದರಗಳನ್ನು ದಿನಾಂಕ 01.01.2019ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶಿಸಲಾಗಿದೆ. ಅದರಂತೆ ಸರ್ಕಾರದ ಎಲ್ಲಾ ಹಿರಿಯ ವಾಹನ ಚಾಲಕರು/ ಚಾಲಕರು, ಎಲ್ಲಾ ಗ್ರೂಪ್‌ಡಿ ಸಿಬ್ಬಂದಿಗೆ ಮಾಸಿಕ ಸಮವಸ್ತ್ರ ನಿರ್ವಹಣಾ ಭತ್ಯೆ ರೂ.400ಗಳನ್ನು ಮಂಜೂರು ಮಾಡಲಾಗಿದೆ.

    ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವಾಹನ ಚಾಲಕರು ಹಾಗೂ ಗ್ರೂಪ್‌-ಡಿ ವೃಂದದ ನೌಕರರಿಗೆ ಇನ್ನು ಮುಂದೆ ಈ ಕೆಳಕಂಡಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

    *  ಪ್ರತಿಯೊಬ್ಬ ಹಿರಿಯ ವಾಹನ ಚಾಲಕ/ ಚಾಲಕರು, ಗ್ರೂಪ್‌-ಡಿ ನೌಕರರು ಕರ್ತವ್ಯದ ಮೇಲಿದ್ದಾಗ ಕಡ್ಡಾಯವಾಗಿ ಸಮವಸ್ತ್ರವನ್ನು ಮತ್ತು ಗುರುತಿನ ಚೀಟಿಯನ್ನು ಧರಿಸತಕ್ಕದ್ದು.

    * ಸಕ್ಷಮ ಪ್ರಾಧಿಕಾರಗಳು / ಮೇಲಧಿಕಾರಿಗಳು ಅವರ ಅಧೀನದಲ್ಲಿರುವ ಡಿ-ದರ್ಜೆ ನೌಕರರು ಮತ್ತು ವಾಹನ ಚಾಲಕರು ಕರ್ತವ್ಯದ ಮೇಲಿದ್ದಾಗ ಸಮವಸ್ತ್ರ ಮತ್ತು ಗುರುತಿನ ಚೀಟಿಯನ್ನು ಧರಿಸದಿದ್ದಲ್ಲಿ, ಸಂಬಳ ಬಟವಾಡೆ ಅಧಿಕಾರಿಗಳಿಗೆ (ಸಿಆಸುಇ ಲೆಕ್ಕಪತ್ರ ಶಾಖೆ) ಈ ಬಗ್ಗೆ ಪ್ರಮಾಣಿ ಪತ್ರವನ್ನು ನೀಡತಕ್ಕದ್ದು. ಹೀಗೆ ಪ್ರಮಾಣ ಪತ್ರವನ್ನು ನೀಡಿದ್ದಲ್ಲಿ, ಸಿಆಸುಇ ಲೆಕ್ಕಪತ್ರ ಶಾಖೆಯು ಸಮವಸ್ತ್ರ ಭತ್ಯೆಯನ್ನು ವೇತನದಲ್ಲಿ ಕಡಿತಗೊಳಿಸತಕ್ಕದ್ದು.

    * ಈ ನಿರ್ದೇಶನವನ್ನು ಪಾಲಿಸದೇ ಇರುವ ಪ್ರತಿಯೊಬ್ಬ ವಾಹನ ಚಾಲಕರು ಹಾಗೂ ಡಿ ವೃಂದದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರ/ಮೇಲಧಿಕಾರಿಗಳು ಅಗತ್ಯ ಕ್ರಮವಹಿಸತಕ್ಕದ್ದು.

    * ಸಚಿವಾಲಯದಲ್ಲಿ ಖಾಲಿ ಇರುವ ಗ್ರೂಪ್‌-ಡಿ ವೃಂದದ ಹುದ್ದೆಗಳ ಎದುರಾಗಿ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಸಿಬ್ಬಂದಿಗಳ ಸೇವೆಯನ್ನು ಪಡೆಯಲಾಗುತ್ತಿದ್ದು, ಅಂತಹ ಹೊರಗುತ್ತಿಗೆ ನೌಕರರು ಸಹ ಸಿಆಸುಇ (ಕಾರ್ಯಕಾರಿ) ಶಾಖೆಯಿಂದ ನೀಡಲಾಗುವ ಗುರುತಿನ ಚೀಟಿ ಮತ್ತು ಹೊರಗುತ್ತಿಗೆ ಏಜೆನ್ಸಿ ನೀಡುವ ಸಮವಸ್ತ್ರವನ್ನು ಕರ್ತವ್ಯದ ಮೇಲಿದ್ದಾಗ ಕಡ್ಡಾಯವಾಗಿ ಧರಿಸತಕ್ಕದ್ದು. ಇಲ್ಲದಿದ್ದಲ್ಲಿ, ಅಂತಹ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಏಜೆನ್ಸಿಗೆ ಹಿಂದಿರುಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

    ಮೇಲ್ಕಾಣಿಸಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಈ ಸಂಬಂಧ ತಮ್ಮ ವ್ಯಾಪ್ತಿಯಲ್ಲಿರುವ ವಾಹನ ಚಾಲಕ/ ಗ್ರೂಪ್‌-ಡಿ ನೌಕರರಿಗೆ ಅಗತ್ಯ ಮಾಹಿತಿ ಮತ್ತು ನಿರ್ದೇಶನಗಳನ್ನು ನೀಡುವಂತೆ ಈ ಮೂಲಕ ಸಚಿವಾಲಯದ ಎಲ್ಲಾ ಸಕ್ಷಮ ಪ್ರಾಧಿಕಾರಿಗಳಿಗೆ ಸೂಚಿಸಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading