8ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರ ನವೆಂಬರ್ನಲ್ಲಿ 8ನೇ ವೇತನ ಆಯೋಗ ರಚನೆ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಿದೆ. ಆದರೆ ಈಗ ನೌಕರರು, ನೌಕರರ ಸಂಘದವರು ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
8ನೇ ವೇತನ ಆಯೋಗದ ಕಾರ್ಯಾಚರಣಾ ಅವಧಿ ಅಥವ ಕಾರ್ಯಪರಿಧಿ ಬಗ್ಗೆ ನೌಕರರ ಅಸಮಾಧಾನವಿದೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಯಾವಾಗಿನಿಂದ 8ನೇ ವೇತನ ಆಯೋಗದ ವರದಿ ಜಾರಿಯಾಗುತ್ತದೆ? ಎಂಬುದನ್ನು ಬಹಿರಂಗ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
8ನೇ ವೇತನ ಆಯೋಗದ ಟಿಒಆರ್ ಪ್ರಕಟಿಸಿದ ಕೇಂದ್ರ ಸರ್ಕಾರ ಪಿಂಚಣಿ ಪರಿಷ್ಕರಣೆ ಕುರಿತು ಉಲ್ಲೇಖ ಮಾಡಿಲ್ಲ. ಆದ್ದರಿಂದ ಸರ್ಕಾರವು 8ನೇ ವೇತನ ಆಯೋಗ (ಸಿಪಿಸಿ) ರಚನೆ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಉತ್ತರ: ಈ ಗೊಂದಲ, ಆಕ್ರೋಶಗಳಿಗೆ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಲೋಕಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾತನಾಡಿ, “8ನೇ ಕೇಂದ್ರ ವೇತನ ಆಯೋಗವನ್ನು ರಚಿಸಲಾಗಿದೆ ಮತ್ತು ಅದರ ಉಲ್ಲೇಖ ನಿಯಮಗಳು (Terms of Reference) 2025ರ ನವೆಂಬರ್ 3ರಂದು ಪ್ರಕಟಿಸಲ್ಪಟ್ಟಿವೆ” ಎಂದು ಹೇಳಿದರು.
ಆದರೆ, ವೇತನ ಆಯೋಗದ ವರದಿ ಜಾರಿಗೆ ತರುವುದು ಯಾವಾಗ? ಎಂಬುದಕ್ಕೆ ಉತ್ತರದಲ್ಲಿ ಯಾವುದೇ ಭರವಸೆಯನ್ನು ನೀಡಿಲ್ಲ. ಸಚಿವರು ತಮ್ಮ ಉತ್ತರದಲ್ಲಿ ವರದಿ ಜಾರಿಗೆ ತರಲು ದಿನಾಂಕವನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
7ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025ಕ್ಕೆ ಅಂತ್ಯವಾಗುತ್ತದೆ. ನೌಕರರು, ನೌಕರರ ಸಂಘದವರು 1ನೇ ಜನವರಿ 2026ರಿಂದ 8ನೇ ವೇತನ ಆಯೋಗದ ವರದಿ ಜಾರಿಯಾಗುತ್ತದೆ? ಎಂದು ಕಾದುಕುಳಿತಿದ್ದಾರೆ. ಆದರೆ ಸದ್ಯದ ಮಾಹಿತಿ ಪ್ರಕಾರ ವೇತನ ಆಯೋಗದ ವರದಿ ಜಾರಿ ವಿಳಂಬವಾಗಲಿದೆ.
ಈ ಹಿಂದೆಯೂ ಸರ್ಕಾರ ವೇತನ ಆಯೋಗದ ವರದಿ ಜಾರಿಯನ್ನು ವಿಳಂಬ ಮಾಡಿದೆ. ಇದೇ ಮಾದರಿಯಲ್ಲಿ ಈ ಬಾರಿ ಸಹ ವಿಳಂಬ ಮಾಡಲಿದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2-3 ವರ್ಷ ವಿಳಂಬವಾಗಿ ವರದಿ ಜಾರಿಗೊಳಿಸಿದ ಉದಾಹರಣೆಯೂ ಇದೆ.
ಆದರೆ ಸರ್ಕಾರ ಈ ವರದಿ ಜಾರಿಯಾದಾಗ ಪೂರ್ವಾನ್ವಯವಾಗುವಂತೆ ಎಂದು ಆದೇಶಿಸುತ್ತದೆ. ಆದರೆ ಈಗ ಯಾವಾಗಿನಿಂದ ವರದಿ ಜಾರಿ ಎಂದು ತೀರ್ಮಾನ ಮಾಡದ ಕಾರಣ ನೌಕರರು ಅಸಮಾಧಾನಗೊಂಡಿದ್ದಾರೆ. ಇದರಲ್ಲಿ ಡಿಎ ಹೆಚ್ಚಳ ಸಹ ಸೇರಿರುತ್ತದೆ.
ಹಿಂದಿನ ಮಾದರಿಗಳ ಅನ್ವಯ ವೇತನ ಆಯೋಗದ ವರದಿ ಅನುಷ್ಠಾನ ವಿಳಂಬವಾದರೂ ಸಹ 2026ರ ಜನವರಿಯಿಂದ ಪೂರ್ವಾನ್ವಯವಾಗುವಂತೆ ಆದೇಶ ನೀಡಬಹುದು ಎಂಬ ನಿರೀಕ್ಷೆಯನ್ನು ನೌಕರರು ಹೊಂದಿದ್ದಾರೆ. ಆದರೆ ಸಚಿವರ ಉತ್ತರದಲ್ಲಿ ಯಾವುದೇ ಅಧಿಕೃತ ದಿನಾಂಕವನ್ನು ಹೇಳದಿರುವುದರಿಂದ, ಅನಿಶ್ಚಿತತೆ ಇದೆ.
ಸ್ಪಷ್ಟತೆ ಇಲ್ಲ: ಪಿಂಚಣಿಗಳ ಪರಿಷ್ಕರಣೆ 8ನೇ ವೇತನ ಆಯೋಗದ ವ್ಯಾಪ್ತಿಯಲ್ಲಿ ಸೇರಿರುವುದೇ ಎಂಬ ಪ್ರಶ್ನೆಯನ್ನು ಸದಸ್ಯರು ಲೋಕಸಭೆಯಲ್ಲಿ ಕೇಳಿದ್ದರು. ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದ್ದು ಬಿಟ್ಟರೆ ಪಿಂಚಣಿ ಪರಿಷ್ಕರಣೆ, ಡಿಎ ವಿಲೀನ, ವರದಿ ಅನುಷ್ಠಾನಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳಿಲ್ಲ.
ಬಜೆಟ್ ಅನುದಾನದ ಕುರಿತು ಸಚಿವರು ಮಾತನಾಡಿ, “ಅಂಗೀಕರಿಸಲಾದ ಕೆಲವು ಶಿಫಾರಸ್ಸುಗಳನ್ನು ಜಾರಿಗೆ ತರುವುದಕ್ಕಾಗಿ ಅಗತ್ಯ ನಿಧಿಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ಅನುದಾನದ ಅಂದಾಜು ಅಥವಾ ವರದಿ ಅನುಷ್ಠಾನದ ಅಂಶ ಮುಂದಿನ ಕೇಂದ್ರ ಬಜೆಟ್ನಲ್ಲಿಯೇ ಸೇರಿರುತ್ತದೆಯೇ?” ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


