ರಾಜ್ಯ ಸರ್ಕಾರವು ಇತ್ತೀಚೆಗೆ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ (Menstrual Leave) ನೀಡಬೇಕು ಎಂದು ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಹೈಕೋರ್ಟ್ ಮೆಟ್ಟಿಲೇರಿದ್ದು ಏಕೆ?
ಕಾರ್ಮಿಕ ಇಲಾಖೆಯ ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರದ ಆದೇಶದಿಂದ ಹೋಟೆಲ್ ಉದ್ಯಮಕ್ಕೆ ತೊಂದರೆಯಾಗುತ್ತದೆ ಮತ್ತು ಕಾರ್ಮಿಕ ಕಾನೂನುಗಳಲ್ಲಿ ಇಲ್ಲದ ನಿಯಮವನ್ನು ಸರ್ಕಾರ ಏಕಾಏಕಿ ಹೇರಿದೆ ಎಂದು ಹೋಟೆಲ್ ಮಾಲೀಕರ ಸಂಘ ವಾದ ಮಂಡಿಸಿತ್ತು.
ಸರ್ಕಾರದ ಆದೇಶ: ನವೆಂಬರ್ 20, 2025 ರಂದು ರಾಜ್ಯ ಸರ್ಕಾರವು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲಿ ತಿಂಗಳಿಗೆ ಒಂದು ದಿನ ವೇತನ ಸಹಿತ ಋತುಚಕ್ರ ರಜೆ ನೀಡುವುದು ಕಡ್ಡಾಯ ಎಂದು ಆದೇಶಿಸಿತ್ತು.
ಮಾಲೀಕರ ವಾದ: ಸರ್ಕಾರದ ಆದೇಶಕ್ಕೆ ಮುನ್ನ ನಮ್ಮಂತಹ ಸಂಘಟನೆಗಳ ಅಭಿಪ್ರಾಯ ಕೇಳಿಲ್ಲ. ಈ ಹೆಚ್ಚುವರಿ ವಾರ್ಷಿಕ 12 ರಜೆಗಳಿಂದ ಉದ್ಯಮಗಳ ಮೇಲೆ ಭಾರೀ ಹೊಡೆತ ಬೀಳುತ್ತದೆ. ಕಾರ್ಮಿಕ ಕಾನೂನುಗಳ ಪ್ರಕಾರ ಇಂತಹ ಆದೇಶ ನೀಡಲು ಸರ್ಕಾರಕ್ಕೆ ಅಧಿಕಾರವಿಲ್ಲ
ಹೈಕೋರ್ಟ್ ತೀರ್ಪು ಮತ್ತು ಮುಂದೇನು?
ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಹೈಕೋರ್ಟ್ ಪೀಠವು ಹೋಟೆಲ್ ಮಾಲೀಕರ ಸಂಘದ ಪರ ವಾದ ಆಲಿಸಿ, ಸದ್ಯಕ್ಕೆ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.ಚಳಿಗಾಲದ ರಜೆ ಮುಗಿದ ಬಳಿಕ ಈ ತಡೆಯಾಜ್ಞೆ ಏಕೆ ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಆಕ್ಷೇಪಣೆ (Objection) ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದೆ.
ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ ಸಿ ರಾವ್ ಅವರು, ಈ ಆದೇಶ ಮಾಡುವ ಮುನ್ನ ಸರ್ಕಾರ ನಮ್ಮೊಂದಿಗೆ ಚರ್ಚಿಸಲಿಲ್ಲ. ಖಾಸಗಿ ವಲಯದಲ್ಲಿ ಈಗಾಗಲೇ ಸಾಕಷ್ಟು ರಜೆಗಳನ್ನು ನೀಡುತ್ತಿದ್ದೇವೆ. ಸರ್ಕಾರ ಈ ರೀತಿ ಕಾನೂನಾತ್ಮಕವಲ್ಲದ ಆದೇಶಗಳನ್ನು ಹೊರಡಿಸಬಾರದು, ಎಂದು ಪ್ರತಿಕ್ರಿಯಿಸಿದ್ದಾರೆ.ಈ ವಿಚಾರವು ರಾಜ್ಯದ ಲಕ್ಷಾಂತರ ಮಹಿಳಾ ಉದ್ಯೋಗಿಗಳು ಮತ್ತು ಕಾರ್ಮಿಕ ವಲಯದ ಮೇಲೆ ನೇರ ಪರಿಣಾಮ ಬೀರಲಿದೆ.
ಚಿನ್ನದ ಬೆಲೆ ₹30 ರೂ ಇಳಿಕೆ;ಇಂದಿನ ಚಿನ್ನದ ದರ ಚೆಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


