ತಮಿಳುನಾಡು ರಾಜಕೀಯದಲ್ಲಿ ಈಗಾಗಲೇ ತಮ್ಮ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ಭಾರೀ ಸಂಚಲನ ಮೂಡಿಸಿರುವ ನಟ ವಿಜಯ್ ಪುದುಚೇರಿ ರಾಜಕೀಯಕ್ಕೂ ಪಾದಾರ್ಪಣೆ ಮಾಡಿದ್ದಾರೆ. 2026ರಲ್ಲಿ ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಎರಡೂ ಸಹ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿವೆ.
ಮಂಗಳವಾರ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಪುದುಚೇರಿಯಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶವನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ಅಚ್ಚರಿಯಿಂದ ನೋಡುತ್ತಿವೆ. ಇದುವರೆಗೂ ಪುದುಚೇರಿ ರಾಜ್ಯದ ರಾಜಕೀಯದ ಬಗ್ಗೆ ಒಮ್ಮೆಯೂ ಮಾತನಾಡದ ವಿಜಯ್ ಏಕಾಏಕಿ ರಾಜ್ಯದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿ ಕುತೂಹಲ ಮೂಡಿಸಿದ್ದಾರೆ.
ಪುದುಚೇರಿಯನ್ನು ನಟ ವಿಜಯ್ ರಾಜಕೀಯ ಪ್ರತಿಸ್ಪರ್ಧಿ ಡಿಎಂಕೆ ಪಕ್ಷ ಆಳ್ವಿಕೆ ಮಾಡಿಲ್ಲ. ಈ ಕೇಂದ್ರಾಡಳಿತ ಪ್ರದೇಶದ ಅವರ ರಾಜಕೀಯ ಸಿದ್ಧಾಂತಾದ ವೈರಿಯಾದ ಬಿಜೆಪಿಯ ಪ್ರಭಾವದಲ್ಲಿದೆ. ಯಾಕೆಂದರೆ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿದ್ದು, ಇದು ಕೇಂದ್ರ ಗೃಹ ಸಚಿವಾಲಯದ ನೇರ ಮೇಲ್ವಿಚಾರಣೆಯಡಿಯಲ್ಲಿ ಇದೆ.
ಇಲ್ಲಿನ ಮುಖ್ಯಮಂತ್ರಿ ಎನ್. ರಂಗಸಾಮಿ ನೇತೃತ್ವದ ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರವನ್ನು ಹಂಚಿಕೊಂಡಿದ್ದಾರೆ. ಮಂಗಳವಾರ ನಡೆಯುವ ಸಮಾವೇಶದಲ್ಲಿ ವಿಜಯ್ ಎಐಎನ್ಆರ್ಸಿ-ಬಿಜೆಪಿ ಸರ್ಕಾರವನ್ನು ಟೀಕಿಸಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವ ಸುಳಿವು ನೀಡುವ ನಿರೀಕ್ಷೆ ಇದೆ.
ಜೆಪಿ ಸರ್ಕಾರದ ಭಾಷಾ ನೀತಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹೊಸ ಶಿಕ್ಷಣ ನೀತಿ ವಿರುದ್ಧ ವಿಜಯ್ ಟೀಕೆಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಎನ್. ರಂಗಸಾಮಿ ತಾವು ನಟ ವಿಜಯ್ ಅಭಿಮಾನಿ ಮತ್ತು ಒಳಿತನ್ನು ಬಯಸುವ ನಾಯಕ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಆದ್ದರಿಂದ ವಿಜಯ್ ಸಮಾವೇಶ ಕೇಂದ್ರಾಡಳಿತ ಪ್ರದೇಶದ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನಟ ವಿಜಯ್ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಸ್ಥಾಪನೆ ಮಾಡಿದಾಗ ಮುಖ್ಯಮಂತ್ರಿ ಎನ್. ರಂಗಸಾಮಿ ಬಹಿರಂಗವಾಗಿ ಅವರಿಗೆ ಶುಭಾಶಯಗಳನ್ನು ಸಲ್ಲಿಕೆ ಮಾಡಿದ್ದರು. ವಿಜಯ್ ರಾಜಕೀಯ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದರು. ಇದು ಪುದುಚೇರಿಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಎನ್. ರಂಗಸಾಮಿ ನೇತೃತ್ವದ ಎಐಎನ್ಆರ್ಸಿ ಟಿವಿಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯೇ? ಎಂಬ ಪ್ರಶ್ನೆಯನ್ನು ಎನ್.ರಂಗಸ್ವಾಮಿ ನಡೆ ಹುಟ್ಟುಹಾಕಿತ್ತು.
ಪುದುಚೇರಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮಾತನಾಡಿ, “ಪುದುಚೇರಿಯ ಟಿವಿಕೆ ಕಾರ್ಯಕರ್ತರನ್ನೇ ಉದ್ದೇಶಿಸಿ ಅವರು ಮಾತನಾಡಲಿರುವುದರಿಂದ, ಅವರ ಭಾಷಣವನ್ನು ಎಲ್ಲಾ ರಾಜಕೀಯ ಪಕ್ಷಗಳು ಹೆಚ್ಚು ಗಮನವಿಟ್ಟು ನೋಡುತ್ತಿವೆ” ಎಂದು ಹೇಳಿದ್ದಾರೆ.
“ವಿಜಯ್ ಅವರು ಪುದುಚೇರಿ ಮತದಾರರನ್ನೇ ಉದ್ದೇಶಿಸಿ ಮಾತನಾಡುತ್ತಿದ್ದಾರೆ ಮತ್ತು ಡಿಎಂಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರದಲ್ಲಿಲ್ಲ. ಇಲ್ಲಿ ಅವರು ಏನು ಮಾತನಾಡುತ್ತಾರೆ ಎಂಬುದು ಹಲವು ಸೂಚನೆಗಳನ್ನು ನೀಡಲಿದೆ. ವಿಶೇಷವಾಗಿ ಅವರ ಸೈದ್ಧಾಂತಿಕ ನಿಲುವಿನ ಬಗ್ಗೆ. ಮುಖ್ಯಮಂತ್ರಿ ಅವರೊಂದಿಗೆ ಇರುವ ಅವರ ಆತ್ಮೀಯ ಸಂಬಂಧದ ಕಾರಣದಿಂದ ಇದರ ಪರಿಣಾಮ ಪುದುಚೇರಿಯಲ್ಲಿಯೂ ಕಂಡುಬರಲಿವೆ” ಎಂದು ವಿಶ್ಲೇಷಿಸಿದ್ದಾರೆ.
ಪುದುಚೇರಿಯ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಅಲಿಯಾಸ್ ಬಸ್ಸಿ ತಮಿಳುನಾಡು ರಾಜ್ಯದ ಕಾರ್ಯಕರ್ತರು ಈ ಸಮಾವೇಶಕ್ಕೆ ಆಗಮಿಸಬೇಡಿ. ಸಮಾವೇಶಕ್ಕೆ ಕೆಲವು ನಿರ್ಬಂಧಗಳಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು.
ಟಿವಿಕೆ ಪಕ್ಷದ ನೀಡಿರುವ ಕ್ಯು ಆರ್ ಕೋಡ್ ಹೊಂದಿರುವ ಅಧಿಕೃತ ಪಾಸು ಹೊಂದಿದ ಜನರಿಗೆ ಮಾತ್ರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಸಮಾವೇಶದಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


